Congress vs BJP vs JDS Manifesto: ಉಚಿತ ಭಾಗ್ಯಗಳ ಆಸರೆ ಪಡೆದ ಪಕ್ಷಗಳು- ಒಂದೇ ನಾಣ್ಯದ ಹಲವು ಮುಖ
ಬೆಂಗಳೂರು, ಮೇ 2: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Elections 2023 ) ಮೂರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಈ ಪ್ರಣಾಳಿಕೆಗಳನ್ನು ಗಮನಿಸಿದಾಗ, ಮೂರು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳಿಗೆ ಮಣೆ ಹಾಕಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಕಾಂಗ್ರೆಸ್ ಪಕ್ಷವು ಎರಡು ತಿಂಗಳಿಂದ ಉಚಿತ ಖಾತ್ರಿಗಳನ್ನು ಸರತಿಯಲ್ಲಿ ಘೋಷಣೆ ಮಾಡುತ್ತ ಬಂದಿದೆ. ಉಚಿತ ಕೊಡುಗೆಗಳನ್ನು ವಿರೋಧಿಸುತ್ತಿದ್ದ ಬಿಜೆಪಿಯು ಸೋಮವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಉಚಿತ ಖಾತ್ರಿಗಳ ಮೊರೆ ಹೋಗಿದೆ. ಇನ್ನು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಹ ಉಚಿತ ಕೊಡುಗೆಗಳನ್ನು ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಮೂರು ಪಕ್ಷಗಳು ಆರ್ಥಿಕವಾಗಿ ಹಿಂದುಳಿದವರನ್ನು ಗುರಿಯಾಗಿಸಿ ಖಾತ್ರಿಗಳನ್ನು ಘೋಷಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕಾಂಗ್ರೆಸ್ ಘೋಷಿಸಿರುವ ಪ್ರಮುಖ ಗ್ಯಾರಂಟಿಗಳಿವು
- ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ ಉಚಿತ ಅಕ್ಕಿ
- ರಾಜ್ಯದ ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
- ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ಉಚಿತ ವಿದ್ಯುತ್
- ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳಿಗೆ 3 ಸಾವಿರ ರೂಪಾಯಿ ಸಹಾಯ ಧನ
- ಗೃಹಲಕ್ಷೀ ಯೋಜನೆ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯ ಧನ
ಬಿಜೆಪಿ ಘೋಷಿಸಿರುವ ಉಚಿತ ಯೋಜನೆಗಳಿವು
- ಬಿಪಿಎಲ್ ಕುಟುಂಬಕ್ಕೆ ಪ್ರತಿ ವರ್ಷಕ್ಕೆ 3 ಉಚಿತ ಸಿಲಿಂಡರ್
- ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್
- ಬಡ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್ ಉಚಿತ ನಂದಿನಿ ಹಾಲು
- ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಹಾಗೂ ಸಿರಿ ಧಾನ್ಯ
- ಹಿರಿಯ ನಾಗರಿಕರಿಗೆ ವಾರ್ಷಿಕ ಉಚಿತ ಮಾಸ್ಟರ್ ಹೆಲ್ತ್ ಚೆಕಪ್ ವ್ಯವಸ್ಥೆ

ಜೆಡಿಎಸ್ನ ಪ್ರಮುಖ ಉಚಿತ ಭರವಸೆಗಳಿವು
- ಗರ್ಭಿಣಿಯರಿಗೆ 6 ತಿಂಗಳ 6,000 ರೂ. ಉಚಿತ ಭತ್ಯೆ
- ಪ್ರತಿ ವರ್ಷಕ್ಕೆ 5 ಉಚಿತ ಅಡುಗೆ ಅನಿಲ ಸಿಲಿಂಡರ್
- ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆಗೆ 10,000 ರೂ. ಸಹಾಯ ಧನ,
- ರೈತ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ರೂಪಾಯಿ
- ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ
- ಸೆಕ್ಯೂರಿಟಿ ಗಾರ್ಡ್ಗಳಿಗೆ ಮಾಸಿಕ 2 ಸಾವಿರ ರೂಪಾಯಿ ಸಹಾಯಧನ
ಮೂರು ಪಕ್ಷಗಳ ಪ್ರಮುಖ ಪ್ರಣಾಳಿಕೆಯನ್ನು ಗಮನಿಸಿದರೆ, ಮಹಿಳೆಯರು ಹಾಗೂ ರೈತರನ್ನು ಗುರಿಯಾಗಿಸಿ ಯೋಜನೆಗಳನ್ನು ಘೋಷಿಸಿವೆ. ಪ್ರಮುಖವಾಗಿ, ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚಿನ ಖಾತ್ರಗಳನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಘೋಷಣೆ ಮಾಡಿವೆ. ವಿಪರ್ಯಾಸವೆಂದರೆ, ಉಚಿತ ಕೊಡುಗೆಗಳನ್ನು ವಿರೋಧಿಸುತ್ತಿದ್ದ ಬಿಜೆಪಿಯೂ ಉಚಿತ ಕೊಡುಗೆಗಳಿಗೆ ಮಣೆ ಹಾಕಿದೆ.
ಚುನಾವಣೆಯ ಉಚಿತ ಕೊಡುಗೆಗಳು ತೆರಿಗೆದಾರರ ಹೊರೆಯನ್ನು ಹೆಚ್ಚಿಸುತ್ತವೆ, ದೇಶವು ಸ್ವಾವಲಂಬಿಯಾಗುವುದನ್ನು ತಡೆಯುತ್ತದೆ ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆಗಳನ್ನು ನಿರ್ಬಂಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಉಚಿತ ಕೊಡುಗೆಗಳನ್ನು ನೀಡುವ ಕ್ರಮವು ರಾಷ್ಟ್ರದ ಹಿತಾಸಕ್ತಿಯಲ್ಲ ಎಂದೂ ಅವರು ಹೇಳಿದ್ದರು.
ಒಂದು ದೇಶವಾಗಿ, ನಾವು ಅಂತಹ ಪ್ರವೃತ್ತಿಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಾಗಿದೆ. ಇದು ದೇಶದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಮೋದಿ ತಿಳಿಸಿದ್ದರು. ಆದರೆ, ಬಿಜೆಪಿಯ ಉಚಿತ ಕೊಡುಗೆಗಳು ಮೋದಿ ಅವರ ಅಭಿಪ್ರಾಯಕ್ಕೆ ತದ್ವಿರುದ್ದವಾಗಿವೆ ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications