ಅರ್ಜಿ ಹಾಕಿದ್ದು ಕಾಂಗ್ರೆಸ್ ಟಿಕೆಟ್ಗೆ, ಈಗ ಜೆಡಿಎಸ್ ಅಭ್ಯರ್ಥಿ!
ಸಿ. ಎಂ. ಧಜಂಜಯ ಈ ಬಾರಿ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಆದರೆ ಅವರು ಮೊದಲು ಅರ್ಜಿ ಹಾಕಿದ್ದು ಕಾಂಗ್ರೆಸ್ ಟಿಕೆಟ್ಗೆ.
ಬೆಂಗಳೂರು, ಮಾರ್ಚ್ 13; ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಇದೆ. ಇವರು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಹಾಕಿದ್ದರು, ಆದರೆ ಈಗ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿ, ಈ ಬಾರಿಯ ಚುನಾವಣೆ ತಯಾರಿಯನ್ನು ಸಹ ಆರಂಭಿಸಿದ್ದಾರೆ.
ಸಿ. ಎಂ. ಧಜಂಜಯ ಈ ಬಾರಿ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿ. ಎಂ. ಧಜಂಜಯ ಪಕ್ಷದ ಅಭ್ಯರ್ಥಿ ಎಂದು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಪಕ್ಷದ ವರಿಷ್ಠರೂ ಸಹ ಅಂತಿಮ ಮುದ್ರೆ ಒತ್ತಿದ್ದಾರೆ.

ಕರ್ನಾಟಕ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು, ವೃತ್ತಿಯಲ್ಲಿ ವಕೀಲರಾಗಿರುವ ಸಿ. ಎಂ. ಧಜಂಜಯ ಎಚ್. ಡಿ. ರೇವಣ್ಣ, ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದ್ದೂ ಆಗಿದೆ. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ ನಂತರ ಅವರ ಜಾಗಕ್ಕೆ ಸಿ. ಎಂ. ಧಜಂಜಯರನ್ನು ಅಭ್ಯರ್ಥಿಯಾಗಿ ಜೆಡಿಎಸ್ ಆಯ್ಕೆ ಮಾಡಿದೆ.
ಕಾಂಗ್ರೆಸ್ ಟಿಕೆಟ್ಗೆ ಅರ್ಜಿ; ಸಿ. ಎಂ. ಧಜಂಜಯ ಬೆಂಗಳೂರು ನಗರದ ಚನ್ನಸಂದ್ರದವರು ಈ ಬಾರಿಯ ಚುನಾವಣೆಯಲ್ಲಿ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಟಿಕೆಟ್ಗಾಗಿ ಅರ್ಜಿಯನ್ನು ಹಾಕಿದ್ದರು. ಆದರೆ ಕಾಂಗ್ರೆಸ್ ಪಟ್ಟಿ ಘೋಷಣೆಯಾಗುವ ಮೊದಲೇ ದಳಪತಿಗಳು ತಮ್ಮ ದಾಳ ಉರುಳಿಸಿದ್ದಾರೆ. ಸಿ. ಎಂ. ಧಜಂಜಯರನ್ನು ಪಕ್ಷಕ್ಕೆ ಕರೆತಂದು ಕಡೂರು ಕ್ಷೇತ್ರದ ಟಿಕೆಟ್ ನೀಡಿದ್ದಾರೆ. ವೈ. ಎಸ್. ವಿ. ದತ್ತಾ ಸೆಳೆದಿದ್ದ ಕಾಂಗ್ರೆಸ್ ನಾಯಕರಿಗೆ ಈ ಮಾದರಿಯಲ್ಲಿ ತಿರುಗೇಟು ನೀಡಿದ್ದಾರೆ.
ಕಡೂರು ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೆ. ಆದರೆ ಹಾಸನದ ರಾಜಕೀಯದ ಪ್ರಭಾವ ಇಲ್ಲಿಯೂ ಕಾಣಬಹುದು. ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ಪ್ರಭಾವ ಕಡೂರಿನಲ್ಲಿ ಕೆಲಸ ಮಾಡುತ್ತದೆ. 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ವೈ. ಎಸ್. ವಿ. ದತ್ತಾ ಗೆಲುವು ಸಾಧಿಸಿದ್ದರು 2018ರ ಚುನಾವಣೆಯಲ್ಲಿ 46,860 ಮತಗಳನ್ನು ಪಡೆದು ಬಿಜೆಪಿಯ ಕೆ. ಎಸ್. ಪ್ರಕಾಶ್ ವಿರುದ್ಧ ಸೋಲು ಕಂಡಿದ್ದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರಾದ ವೈ. ಎಸ್. ವಿ. ದತ್ತಾ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ವೈ. ಎಸ್. ವಿ. ದತ್ತಾ ಕಾಂಗ್ರೆಸ್ ಅಭ್ಯರ್ಥಿಯಾದರೆ ಸಿ. ಎಂ. ಧಜಂಜಯ ಜೆಡಿಎಸ್ನಿಂದ ಅವರ ಎದುರಾಳಿ. ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದವಿದ್ದಂತೆ ಕಾಣುತ್ತಿಲ್ಲ. ಹಾಲಿ ಶಾಸಕ ಬೆಳ್ಳಿ ಪ್ರಕಾಶ್ (ಕೆ. ಎಸ್. ಪ್ರಕಾಶ್) ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಸೇರ್ಪಡೆ; ಸಿ. ಎಂ. ಧಜಂಜಯ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜೆಡಿಎಸ್ ಸೇರಿದ್ದಾರೆ. ಮಾರ್ಚ್ 3ರಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ. ಎಂ. ಧನಂಜಯ ಹಾಗೂ ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಕೊಳ್ಳೇಗಾಳದ ಪುಟ್ಟಸ್ವಾಮಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಬೆಂಬಲಿಗರ ಜೊತೆ ಜೆಡಿಎಸ್ ಸೇರಿದರು. ಈ ಸಮಾರಂಭದಲ್ಲಿ ಮಾತನಾಡಿ ಎಚ್. ಡಿ. ಕುಮಾರಸ್ವಾಮಿ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ವಿರುದ್ಧ ವಾಗ್ದಾಳಿ ನಡೆಸಿದರು.
ಎಚ್. ಡಿ. ಕುಮಾರಸ್ವಾಮಿ, "ಧರ್ಮೇಗೌಡರ ಬದಲಾಗಿ ವೈ. ಎಸ್. ವಿ. ದತ್ತಾಗೆ ಪಕ್ಷವು ಟಿಕೆಟ್ ನೀಡಿತು. ಪಕ್ಷಕ್ಕಾಗಿ ದುಡಿದ ನಾಯಕನಿಗೆ ಅನ್ಯಾಯ ಮಾಡಿ, ಕೈ ಕೊಟ್ಟು ಹೋದ ವ್ಯಕ್ತಿಗೆ ಟಿಕೆಟ್ ನೀಡಿದೆವು. ಆದರೆ ಉಪಕಾರ ಸ್ಮರಣೆ ಮರೆತ ವ್ಯಕ್ತಿ ಕಾಂಗೆಸ್ ಸೇರಿದ್ದಾರೆ" ಎಂದು ಮಾಜಿ ಶಾಸಕನನ್ನು ಟೀಕಿಸಿದರು.












Click it and Unblock the Notifications