ಶಂಕರಮೂರ್ತಿ ವಿರುದ್ಧ ಕಾಂಗ್ರೆಸಿನಿಂದ ಅವಿಶ್ವಾಸ ನಿರ್ಣಯ
ಬೆಂಗಳೂರು, ಮೇ 21: ವಿಧಾನ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಸ್ತಾವನೆ ಸಲ್ಲಿಸಿದೆ. ಮುಖ್ಯ ಸಚೇತಕ ಐವನ್ ಡಿಸೋಜಾ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಪರಿಷತ್ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
14 ದಿನಗಳೊಳಗೆ ಸದನದಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾಪವಾಗಲಿದೆ. ಜೂನ್ 5ರಿಂದ ಮುಂದುವರಿದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಅಲ್ಲಿ ಈ ನಿರ್ಣಯ ಪ್ರಸ್ತಾಪವಾಗಲಿದೆ. ಕಾಂಗ್ರೆಸ್ ಮೇಲ್ಮನೆಯಲ್ಲಿ ಬಹುಮತ ಹೊಂದಿಲ್ಲದೇ ಇದ್ದರೂ ಅಗತ್ಯ ಬಲ ಹೊಂದಿಸುವ ಕಾರಣ ಸಭಾಪತಿ ಸ್ಥಾನದಿಂದ ಬಹುತೇಕ ಶಂಕರಮೂರ್ತಿ ಕೆಳಗಿಳಿಯಲ್ಲಿದ್ದಾರೆ.[ಪರಿಷತ್ ಸಭಾಪತಿ ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್ ತಂತ್ರ]
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ, "ಸಭಾಪತಿ ಶಂಕರ್ಮೂರ್ತಿ ಕಾರ್ಯವೈಖರಿ ಅಸಮಧಾನ ತಂದಿದೆ. ಅವರು ತೆಗೆದುಕೊಂಡ ನಿರ್ಣಯಗಳು ಬೇಸರ ಮೂಡಿಸಿವೆ. ಪದಚ್ಯುತಿ ಕಾರಣಗಳನ್ನು ಸದನದ ಮುಂದಿಡಲಾಗುವುದು," ಎಂದು ಹೇಳಿದ್ದಾರೆ.
ಈ ಹಿಂದೆಯೇ ಕಾಂಗ್ರೆಸ್ ಶಂಕರಮೂರ್ತಿ ಪದಚ್ಯುತಿಗೆ ಯೋಜನೆ ಹಾಕಿಕೊಂಡಿತ್ತು. ಆರಂಭದಲ್ಲಿ ಕಾಂಗ್ರೆಸಿಗೆ ಮೇಲ್ಮನೆಯಲ್ಲಿ ಬಹುಮತವಿರಲಿಲ್ಲ. ಆದರೆ ನಾಮ ನಿರ್ದೇಶನ ಸದಸ್ಯರ ನೇಮಕದಿಂದ ಕಾಂಗ್ರೆಸ್ ಬಹುಮತ ಪಡೆದಿದೆ. ಹೀಗಾಗಿ ತಮ್ಮ ಪಕ್ಷದವರನ್ನೇ ಸಭಾಪತಿ ಮಾಡಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ನಿಂದ ಕೆಸಿ ಕೊಂಡಯ್ಯ, ಎಸ್. ಆರ್ ಪಾಟೀಲ್ ಸಭಾಪತಿ ರೇಸ್ ನಲ್ಲಿದ್ದಾರೆ.
ಮೇಲ್ಮನೆ ಬಲಾಬಲ
75 ಸದಸ್ಯ ಬಲದ ಮೇಲ್ಮನೆಯಲ್ಲಿ ಸದ್ಯ ಕಾಂಗ್ರೆಸ್ 30 ಶಾಸಕರನ್ನು ಹೊಂದಿದೆ. ಇನ್ನು ಬಿಜೆಪಿ 22, ಜೆಡಿಎಸ್ 13 ಹಾಗೂ 5 ಪಕ್ಷೇತರರಿದ್ದಾರೆ. ಇನ್ನು ಒಬ್ಬರು ಸಭಾಪತಿ (ಬಿಜೆಪಿ) ಹಾಗೂ 2 ಸ್ಥಾನ ಖಾಲಿ ಇದೆ.
ಇದೀಗ ಮೇಲ್ಮನೆಗೆ ಇಬ್ಬರು ನಾಮ ನಿರ್ದೇಶನಗೊಂಡಿದ್ದಾರೆ. ಜತೆಗೆ ಸದ್ಯದಲ್ಲೇ ಒಬ್ಬರು ನಾಮ ನಿರ್ದೇಶನಗೊಳ್ಳಲಿರುವುದರಿಂದ ಕಾಂಗ್ರೆಸ್ ಬಲ 33 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಜತೆಗೆ ಪಕ್ಷೇತರ ಶಾಸಕರೂ ಕಾಂಗ್ರೆಸ್ ಬೆಂಬಲಿಸಿದರೆ ಕಾಂಗ್ರೆಸ ಬಲ 38ಕ್ಕೆ ಏರಿಕೆಯಾಗಲಿದೆ. ಇದರಿಂದ ಸ್ಪಷ್ಟ ಬಹುಮತ ಪಡೆಯಬಹುದು.
ಇನ್ನೊಂದೆಡೆ ಬಿಜೆಪಿ ಸದಸ್ಯೆ ವಿಮಲಾ ಗೌಡ ಮರಣದಿಂದ ಬಿಜೆಪಿ ಒಂದು ಸ್ಥಾನವನ್ನೂ ಕಳೆದುಕೊಂಡಿದೆ. ಹೀಗಾಗಿ ಸದ್ಯ ಬಿಜೆಪಿ ಜೆಡಿಎಸ್ ಒಟ್ಟಾದರೂ ಕೇವಲ 35 ಸ್ಥಾನಗಳಷ್ಟೇ ಆಗುತ್ತವೆ. ಇನ್ನು ವಿಧಾನಸಭೆಯ ಸಂಖ್ಯಾಬಲದಲ್ಲಿ ಆಡಳಿತರೂಢ ಕಾಂಗ್ರೆಸ್ ವಿಮಲಾ ಗೌಡರ ಸ್ಥಾನವನ್ನೂ ಗೆದ್ದುಕೊಳ್ಳಲಿದೆ.
ವಿಮಲಾ ಗೌಡರ ಸ್ಥಾನ ಭರ್ತಿಯಾಗುವುದು ತಡವಾದರೂ ಸದ್ಯದ ಮಟ್ಟಿಗೆ ನಿರಾಯಾಸವಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಗಿಟ್ಟಿಸಬಹುದಾಗಿದೆ. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಶಂಕರಮೂರ್ತಿ ಸಭಾಪತಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬರಬಹುದು.