ನಾಯಕತ್ವದ ಬಗ್ಗೆ ತುಟಿಕ್-ಪಿಟಿಕ್ ಎನ್ನಬಾರದು
ಬೆಂಗಳೂರು, ಅ. 21 : 'ಕಾಂಗ್ರೆಸ್ ನಾಯಕತ್ವದ ಬಗ್ಗೆ ಯಾರೂ ಬಹಿರಂಗವಾಗಿ ಚರ್ಚೆ ಮಾಡಬಾರದು, ಪಕ್ಷದ ಯಾವ ಹಂತದ ನಾಯಕರೂ ಈ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪಕ್ಷದ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು. 'ಪಕ್ಷದ ನಾಯಕತ್ವ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಬಗ್ಗೆ ಪಕ್ಷದ ಯಾವ ನಾಯಕರೂ 'ಬಹಿರಂಗವಾಗಿ ತುಟಿಕ್-ಪಿಟಿಕ್' ಎನ್ನಬಾರದು ಎಂದು ಎಚ್ಚರಿಕೆ ನೀಡಿದರು.

'ಪಕ್ಷದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪಕ್ಷದ ವೇದಿಕೆ ಇದೆ. ಹಲವಾರು ಸಮಿತಿಗಳಿವೆ. ಸಮಸ್ಯೆ ಇದ್ದರೆ ಅಲ್ಲಿ ಮಾತನಾಡಲು ಅವಕಾಶ ಕೊಡುತ್ತೇನೆ. ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ನಾಯಕತ್ವದ ವಿಚಾರದ ಬಗ್ಗೆ ಸೊಲ್ಲೆತ್ತಬಾರದು' ಎಂದು ಕಾರ್ಯಕರ್ತರಿಗೆ, ಧುರೀಣರಿಗೆ 'ವಿನಯ ಪೂರ್ವಕವಾಗಿ' ಸೂಚನೆ ನೀಡುತ್ತಿದ್ದೇನೆ ಎಂದರು.
ಸಚಿವ ದಿನೇಶ್ ಗುಂಡೂರಾವ್ ಮತ್ತು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಎಚ್.ವಿಶ್ವನಾಥ್ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ್ದರು. 'ರಾಹುಲ್ ಗಾಂಧಿ ಸಮರ್ಥ ನಾಯಕ, ಆದರೆ ಅವರಿಗೆ ಗಂಭೀರತೆ ಇಲ್ಲ' ಎಂದು ವಿಶ್ವನಾಥ್ ಟೀಕಿಸಿದ್ದರು.

ಮಹಾರಾಷ್ಟ್ರ ಹರ್ಯಾಣ ಚುನಾವಣೆ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ದಿನೇಶ್ ಗುಂಡೂರಾವ್ 'ದೆಹಲಿಯಲ್ಲಿರುವ ಅಸಮರ್ಥ ನಾಯಕರನ್ನು ಕೆಳಗಿಳಿಸಿ, ಸಕ್ರಿಯವಾಗಿ ಕೆಲಸ ಮಾಡುವ ನಾಯಕರಿಗೆ, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಿ' ಎಂದು ಹೇಳಿದ್ದರು. ಆದರೆ, ಈ ಟ್ವೀಟ್ ಈಗ ಕಾಣೆಯಾಗಿದೆ.
ಈ ಬೆಳವಣಿಗೆಗಳ ನಡುವೆಯೇ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದ ವಿಶ್ವನಾಥ್, ದಿನೇಶ್ ಗುಂಡೂರಾವ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ದೂರು ನೀಡಿದ್ದರು. ಇದರ ಮುಂದುವರೆದ ಭಾಗವಾಗಿ ಇಂದು ಖಡಕ್ ಸೂಚನೆ ಹೊರಬಿದ್ದಿದೆ.












Click it and Unblock the Notifications