ವಿಧಾನಸಭಾ ಕ್ಷೇತ್ರದಲ್ಲಿ ಫೆ. 3ರಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಕರ್ನಾಟಕ ಕಾಂಗ್ರೆಸ್ ಫೆಬ್ರವರಿ 3ರಿಂದ ವಿಧಾನಸಭಾವಾರು ಪ್ರಜಾಧ್ವನಿ ಯಾತ್ರೆ ಆರಂಭಿಸಲಿದೆ. ಕೋಲಾರದ ಕುರುಡುಮಲೆ ಗಣೇಶ ದೇವಾಲಯಲ್ಲಿ ಯಾತ್ರೆಗೆ ಚಾಲನೆ ಸಿಗಲಿದೆ.
ಬೆಂಗಳೂರು, ಜನವರಿ 29; ಕರ್ನಾಟಕ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಯ ಎರಡನೇ ಹಂತಕ್ಕೆ ಫೆಬ್ರವರಿಯಲ್ಲಿ ಚಾಲನೆ ದೊರೆಯಲಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆಯನ್ನು ನಡೆಸಲಿದೆ.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಜಿಲ್ಲಾವಾರು ಪ್ರಜಾಧ್ವನಿ ಯಾತ್ರೆಯನ್ನು ಮಾಡಿ ಮುಗಿಸಿದೆ. ಈಗ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಂಡಿದೆ.
ಈ ಬಾರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎರಡು ತಂಡಗಳಲ್ಲಿ ಯಾತ್ರೆಯನ್ನು ನಡೆಸಲಿದ್ದಾರೆ. ಫೆಬ್ರವರಿ 3ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಾಲಯದಿಂದ ಯಾತ್ರೆ ಆರಂಭವಾಗಲಿದೆ.

ಮುಂದಿನ ಚುನಾವಣೆಗೆ ಹೈಕಮಾಂಡ್ ಒಪ್ಪಿದರೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ. ಈಗ ಪ್ರಜಾಧ್ವನಿ ಯಾತ್ರೆಯ ಎರಡನೇ ಹಂತವೂ ಕೋಲಾರದಿಂದಲೇ ಪ್ರಾರಂಭವಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಎರಡು ತಂಡಗಳಲ್ಲಿ ಯಾತ್ರೆ; ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಅದರಲ್ಲೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಮೊದಲು ಯಾತ್ರೆ ನಡೆಸಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮುಳಬಾಗಿಲು ಕ್ಷೇತ್ರದಿಂದ ಯಾತ್ರೆ ಆರಂಭಿಸಲಿದ್ದಾರೆ. ಅತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೀದರ್ನ ಬಸವ ಕಲ್ಯಾಣಕ್ಕೆ ಭೇಟಿ ನೀಡಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಸಿದ್ದರಾಮಯ್ಯ ಯಾತ್ರೆಯ ತಂಡದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್, ಜಮೀರ್ ಅಹಮ್ಮದ್ ಖಾನ್, ಭೈರತಿ ಸುರೇಶ್, ಹೆಚ್. ಸಿ. ಮಹದೇವಪ್ಪ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಸೇರಿ 35 ನಾಯಕರಿದ್ದಾರೆ.
ಔರಾದ್, ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರ, ಹುಮ್ನಾಬಾದ್, ಕಲಬುರಗಿ, ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂನಲ್ಲಿ ಸಿದ್ದರಾಮಯ್ಯ ತಂಡ ಪ್ರಜಾಧ್ವನಿ ಯಾತ್ರೆ ನಡೆಸಲಿದ್ದಾರೆ.
ಆಳಂದ, ಅಫ್ಜಲಪುರ, ಯಡ್ರಾಮಿ, ಜೇವರ್ಗಿ, ಚಿತ್ತಾಪುರ, ಸುರಪುರ, ಶಹಾಪುರ, ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರ, ಸಿಂಧಗಿ, ಇಂಡಿ, ನಾಗಠಾಣಾ, ಬಬಲೇಶ್ವರ, ದೇವರ ಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಮಾಡಲಿದ್ದಾರೆ.
ಡಿ. ಕೆ. ಶಿವಕುಮಾರ್ ತಂಡ ಮುಳಬಾಗಿಲು, ಕೆಜಿಎಫ್, ಮಾಲೂರು, ದೇವನಹಳ್ಳಿ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳಲ್ಲಿ ಯಾತ್ರೆಯನ್ನು ಮೊದಲ ಹಂತದಲ್ಲಿ ನಡೆಸಲಿದ್ದಾರೆ.
ಉತ್ತರ ಕರ್ನಾಟಕದ 112 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ತಂಡ, ದಕ್ಷಿಣ ಕರ್ನಾಟಕದ 112 ಕ್ಷೇತ್ರಗಳಲ್ಲಿ ಡಿ. ಕೆ. ಶಿವಕುಮಾರ್ ನೇತೃತ್ವದ ತಂಡ ಯಾತ್ರೆ ನಡೆಸುವಂತೆ ಯೋಜನೆ ರೂಪಿಸಲಾಗಿದೆ.
1.8 ಕೋಟಿ ಮನೆ ತಲುಪುವ ಗುರಿ; ಕರ್ನಾಟಕ ಕಾಂಗ್ರೆಸ್ ಈಗಾಗಲೇ ಚುನಾವಣೆಗಾಗಿ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಭರವಸೆಗಳನ್ನು ನೀಡಿದೆ. ರಾಜ್ಯದ ಪ್ರತಿ ಮನೆಗೂ ಈ ಭರವಸೆ ತಲುಪಿಸುವ ಗುರಿಯನ್ನು ಪಕ್ಷ ಹೊಂದಿದೆ. ಆದ್ದರಿಂದ ಒಂದು ತಿಂಗಳಿನಲ್ಲಿ 1.8 ಕೋಟಿ ಮನೆ ತಲುಪುವ ಗುರಿ ಹೊಂದಲಾಗಿದೆ.
ಕೇಂದ್ರ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪ್ರಜಾಧ್ವನಿ ಯಾತ್ರೆಯ ಮೂಲಕ ಜನರಿಗೆ ತಲುಪಿಸುವ ಕಾಂಗ್ರೆಸ್ ನಾಯಕರು ತಾವು ಅಧಿಕಾರಕ್ಕೆ ಬಂದರೆ ನೀಡುವ ಯೋಜನೆಗಳ ಕುರಿತು ಜನವರಿ ಭರವಸೆ ನೀಡುತ್ತಿದ್ದಾರೆ.
ಈಗಾಗಲೇ ಜೆಡಿಎಸ್ ಪಂಚರತ್ನ ಯಾತ್ರೆ, ಬಿಜೆಪಿ ಜನ ಸಂಕಲ್ಪ ಯಾತ್ರೆ ಮೂಲಕ ಜನರ ಬಳಿ ಹೋಗಿದೆ. ಜಿಲ್ಲಾವಾರು ಪ್ರಜಾಧ್ವನಿ ಯಾತ್ರೆ ನಡೆಸಿದ್ದ ಕಾಂಗ್ರೆಸ್ ಈಗ ವಿಧಾನಸಭಾವಾರು ಯಾತ್ರೆಯನ್ನು ಆರಂಭಿಸಲಿದೆ. ಏಪ್ರಿಲ್ ಅಂತ್ಯ ಅಥವ ಮೇ 2ನೇ ವಾರದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications