ಹೈಕಮಾಂಡ್ ಹೇಳಿದ್ರು ಅಷ್ಟೇ ನಾನು ಸ್ಪರ್ಧೆ ಮಾಡಲ್ಲ: ಪ್ರಕಾಶ್ ಹುಕ್ಕೇರಿ
ಬೆಳಗಾವಿ, ಫೆಬ್ರವರಿ 02: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ಶಿಫಾರಸು ಮಾಡಿರುವ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ಮಾತನಾಡಿ, ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಎಂಎಲ್ಸಿ ಆಗಿಯೇ ಮುಂದುವರಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಿಎಂ ಹೇಳಿದರೂ, ಹೈಕಮಾಂಡ್ ಹೇಳಿದರೂ ಸಹ ನಾನು ಸ್ಪರ್ಧಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಮತ್ತೆ ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಹೆಸರು ಪ್ರಸ್ತಾಪವಾಗಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿ, ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ನಾನು ಏನಾದರೂ ಫುಟ್ಬಾಲಾ? ಈ ಹಿಂದೆ ನನ್ನನ್ನು ದೆಹಲಿಗೆ ಹೋಗಿ ಎಂದು ಒಗೆದರು. ಈಗ ಎರಡನೇ ಬಾರಿ ಒದೆಯಲು ನಿಂತಿದ್ದಾರೆ, ಮತ್ತೆ ದಿಲ್ಲಿಗೆ ಹೋಗಿ ಬೀಳಬೇಕು. ನಾನೇನು ಫುಟ್ಬಾಲಾ ಎಂದು ಸ್ವಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷ, ಒಂದೂವರೆ ವರ್ಷಕ್ಕೊಮ್ಮೆ ಒದೆಯುತ್ತಾರೆ? ಇದೇನು ಫುಟ್ಬಾಲ್ ಮ್ಯಾಚಾ? ನನ್ನ ಅವಧಿ ಇನ್ನೂ 5 ವರ್ಷ ಇದೆ, ಸಾಕಷ್ಟು ಕೆಲಸ ಮಾಡಿದ್ದೇನೆ. ಶಿಕ್ಷಕರ ಸೇವೆ ಮಾಡಲು ನನ್ನನ್ನು ಆಯ್ಕೆ ಮಾಡಿದ್ದಾರೆಯೇ ವಿನಹ ಚುನಾವಣೆಗೆ ನಿಲ್ಲಲು ನನ್ನನ್ನು ಆಯ್ಕೆ ಮಾಡಿಲ್ಲ. ಶಿಕ್ಷಕರ ಸಾಕಷ್ಟು ಬೇಡಿಕೆಗಳು ಈಡೇರಿಸಬೇಕಿದೆ. ಅದಕ್ಕಾಗಿ ಇಲ್ಲೇ ಕೆಲಸ ಮಾಡುವೆ, ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.
ಚಿಕ್ಕೋಡಿ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಬಳಿ ವಿಚಾರಿಸಿ ಎಂದು ಹೇಳಿದ್ದಾರೆ. ನೀವು ಬೇಕಾದರೆ ಶಿಫಾರಸು ಮಾಡಿ. ಯಾವುದೇ ಸಂದರ್ಭದಲ್ಲಿ ಎಷ್ಟೇ ಒತ್ತಡ ಬಂದರೂ ಸಹ ನಾನು ಸ್ಪರ್ಧೆ ಮಾಡಲ್ಲ. ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಎಂಎಲ್ಸಿ ಆಗಿಯೇ ಮುಂದುವರಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾನೇನೂ ಸಿಎಂ ಅವರಿಗೆ ಮಾತು ಕೊಟ್ಟಿಲ್ಲ. ಶಿಕ್ಷಕರ ಬೇಡಿಕೆಗಳ ಈಡೇರಿಕೆಗೇ ಕೆಲಸ ಮಾಡುವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications