ರಾಯಣ್ಣ ಬ್ರಿಗೇಡ್ಗೆ ಸೆಡ್ಡು ಹೊಡೆಯಲು ಯುವ ಅಹಿಂದ ಸ್ಥಾಪನೆ?
ಬೆಂಗಳೂರು, ಆಗಸ್ಟ್ 22 : ಕೆ.ಎಸ್.ಈಶ್ವರಪ್ಪ ಅವರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆಗೆ ವೇದಿಕೆ ಸಿದ್ಧಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರು 'ಯುವ ಅಹಿಂದ' ಹೆಸರಿನಲ್ಲಿ ಸಂಘಟನೆ ಕಟ್ಟಲು ಸಿದ್ಧತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು 'ಯುವ ಅಹಿಂದ' ಸಂಘಟನೆಯ ಹಿಂದಿದ್ದಾರೆ. ಭಾನುವಾರ ಶಾಸಕರ ಭವನದಲ್ಲಿ ರೇವಣ್ಣ ಅಧ್ಯಕ್ಷತೆಯಲ್ಲಿ ಯುವ ಅಹಿಂದ ಸಮಾಲೋಚನಾ ಸಭೆಯ ನಡೆಯಿತು.[ಯಡಿಯೂರಪ್ಪ ಸಿಎಂ ಮಾಡುವೆ : ಈಶ್ವರಪ್ಪ]
ಈ ಸಭೆಯಲ್ಲಿ ಪ್ರೊ.ಜಿ.ಕೆ. ಗೋವಿಂದರಾವ್, ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮರ್ಶಕ ಡಾ.ಕೆ. ಮರುಳಸಿದ್ದಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ಮಟ್ಟು, ವಿಧಾನಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ, ಎಂ.ಡಿ. ಲಕ್ಷ್ಮೀನಾರಾಯಣ ಪಾಲ್ಗೊಂಡಿದ್ದರು.[ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ]
ಸಭೆಯಲ್ಲಿ ಮಾತನಾಡಿದ ಎಚ್.ಎಂ.ರೇವಣ್ಣ ಅವರು, 'ಕೆ.ಎಸ್. ಈಶ್ವರಪ್ಪ ಅವರ 'ರಾಯಣ್ಣ ಬ್ರಿಗೇಡ್'ಗೆ ಹೆದರಿ 'ಯುವ ಅಹಿಂದ' ಸ್ಥಾಪಿಸಲು ಹೊರಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಬಲಪಡಿಸಲೂ ಈ ಸಂಘಟನೆ ಹುಟ್ಟು ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
'ಅಹಿಂದ ಸ್ಥಾಪಿಸಿದ ಸಂದರ್ಭದಲ್ಲಿ ಈಶ್ವರಪ್ಪ ಅವರು ಒಂದು ದಿನವೂ ಬರಲಿಲ್ಲ. ಉಡುಪಿಯಲ್ಲಿ ಕನಕಗೋಪುರ ಉರುಳಿಸಿದ ಸಂದರ್ಭದಲ್ಲಿ ಸಂಘಟಿತರಾಗಿ ನಾವು ಅಲ್ಲಿಗೆ ಹೋದಾಗ ಈಶ್ವರಪ್ಪ ಮಠದವರೆಗೆ ಬಂದು ನಂತರ ಓಡಿ ಹೋದರು' ಎಂದು ರೇವಣ್ಣ ಲೇವಡಿ ಮಾಡಿದರು.....
'ನರೇಂದ್ರ ಮೋದಿ ಆಟಾಟೋಪಕ್ಕೆ ಕಡಿವಾಣ ಹಾಕಬೇಕು'
ಸಭೆಯಲ್ಲಿ ಮಾತನಾಡಿದ ವಿಚಾರವಾದಿ ಜಿ.ಕೆ. ಗೋವಿಂದರಾವ್ ಅವರು, 'ಕರ್ನಾಟಕದಲ್ಲಿ ಮುಂದಿನ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದು ಒಂದು ರೀತಿಯಲ್ಲಿ ಸಾವು ಬದುಕಿನ ಪ್ರಶ್ನೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಎತ್ತಿ ಹಿಡಿಯುವ ಸಂಘಟನೆ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಟಾಟೋಪಕ್ಕೆ ಕಡಿವಾಣ ಹಾಕಬೇಕು' ಎಂದರು.
'ಅಭದ್ರತೆ ಕಾಡಿದೆ'
ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು, 'ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಅಭದ್ರತೆ ಕಾಡಿದೆ. ಆದ್ದರಿಂದ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡುತ್ತಿದ್ದಾರೆ. ನಮ್ಮದು ಅವರಂತೆ ಬೂಟಾಟಿಕೆಯ ಸಂಘಟನೆ ಅಲ್ಲ. ನಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಇರುವ ಸಂಘಟನೆ' ಎಂದು ಹೇಳಿದರು.
'ಹಿಂದುತ್ವ ಎಂಬುದು ಸುಳ್ಳು'
ಸಭೆಯಲ್ಲಿ ಪಾಲ್ಗೊಂಡಿದ್ದ ಸಾಹಿತಿ ಡಾ. ಕೆ. ಮರುಳಸಿದ್ದಪ್ಪ ಅವರು, 'ಅಹಿಂದ ಎಂಬುದು ಒಂದು ಅಸ್ಮಿತೆ. ಆದರೆ, ಹಿಂದುತ್ವ ಎಂಬುದು ಸುಳ್ಳು. ಈ ಸುಳ್ಳಿನ ಮೇಲೆ ದೇಶವನ್ನು ಛಿದ್ರ ಮಾಡುವ ಕೆಲಸ ನಡೆದಿದೆ. ಹಿಂದು ಧರ್ಮವು ಧರ್ಮವೇ ಅಲ್ಲ' ಎಂದು ಹೇಳಿದರು.
'ಅಹಿಂದ ವರ್ಗ ಸಂಘಟಿತವಾಗಿ ಎದುರಿಸಬೇಕು'
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ಮಟ್ಟು ಅವರು, 'ಜಾತಿ ಸಮೀಕ್ಷೆ ವರದಿ ಪ್ರಕಟಗೊಳ್ಳುತ್ತಿದ್ದಂತೆ ಅದರ ವಿರುದ್ಧ ಹೋರಾಟ ನಡೆಯುವ ಸಾಧ್ಯತೆ ಇದ್ದು, ಅದನ್ನು ಅಹಿಂದ ವರ್ಗ ಸಂಘಟಿತವಾಗಿ ಎದುರಿಸಬೇಕು' ಎಂದು ಕರೆ ನೀಡಿದರು.
ಸೆಪ್ಟೆಂಬರ್ 26ಕ್ಕೆ ಸ್ಥಾಪನೆ
ಸೆಪ್ಟೆಂಬರ್ 26ರ ಸೋಮವಾರ ಹಾವೇರಿಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಸ್ಥಾಪನೆಯಾಗಲಿದ್ದು, ಅಂದು ಮೊದಲ ಸಮಾವೇಶ ನಡೆಯಲಿದೆ. ಬ್ರಿಗೇಡ್ ಸ್ಥಾಪನೆ ಮಾಡುವ ಮೂಲಕ ಕೆ.ಎಸ್.ಈಶ್ವರಪ್ಪ ಅವರು ಹಿಂದುಳಿದ ಮತ್ತು ಕುರುಬ ಸಮುದಾಯದ ನಾಯಕರಾಗಿ ಹೊರಹೊಮ್ಮಲಿದ್ದಾರೆ.