Congress Manifesto 2023: ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳಿಗೆ ಕೆಲಸ: ಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ!
ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಭಾರಿ ಪೈಪೋಟಿ ಮಾಡುತ್ತಿವೆ. ಮತದಾರರನ್ನು ಸೆಳೆಯಲು ಭರಪೂರ ಕೊಡುಗೆಗಳನ್ನು ಪ್ರಕಟಿಸಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಪ್ರಣಾಳಿಕೆಗಳು ಬಿಡುಗಡೆಯಾಗಿದ್ದವು, ಈಗ ಕಾಂಗ್ರೆಸ್ ಕೂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿದ ಭರವಸೆ ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಾಕಷ್ಟು ಗಮನ ಸೆಳೆಯುವ ವಿಚಾರಗಳಿವೆ, ಪೊಲೀಸ್ ಇಲಾಖೆಯ ಸುಧಾರಣೆಗೆ ಕೂಡ ಕಾಂಗ್ರೆಸ್ ಗಮನ ಹರಿಸಿದೆ. ಪೊಲೀಸ್ ಇಲಾಖೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಸಿಬ್ಬಂದಿ ಇರುವಂತೆ ನೇಮಕಾತಿ ಮಾಡುವುದಾಗಿ ಭರವಸೆ ನೀಡಿದ್ದು, ಶೇಕಡಾ 1 ರಷ್ಟು ತೃತೀಯ ಲಿಂಗಿಗಳಿಗೆ ನೇಮಕಾತಿಯ ಭರವಸೆ ನೀಡಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 5 ಸಾವಿರ ರೂಪಾಯಿ ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ ಮಾಡುವುದಾಗಿ ಭರವಸೆ ನೀಡಿದೆ. ಸೈಬರ್ ಮತ್ತು ಆರ್ಥಿಕ ಅಪರಾಧಗಳ ತನಿಖಾ ಔನ್ಯತ್ಯದ ಸಂಶೋಧನೆಗಾಗಿ ರೂ 200 ಕೋಟಿಗಳ ಮೂಲನಿಧಿ ಇಡುವುದಾಗಿ ಕಾಂಗ್ರೆಸ್ ಹೇಳಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಕಠಿಣ ನಿಯಮಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಪಾರದರ್ಶಕವಾಗಿ ನಿಯಂತ್ರಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದು, ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎಂದು ಹೇಳಿದೆ.
ಸರ್ಕಾರದಲ್ಲಿ ಬಾಕಿ ಇರುವ ಎಲ್ಲಾ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲಾ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರುವುದಾಗಿ ಭರವಸೆ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಕಳೆದ 5-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳ ಕಾಂಗ್ರೆಸ್ ಸರಕಾರಗಳ ಅದೇಶಗಳ ಮಾದರಿಯಲ್ಲಿ ಕಾಯಂಗೊಳಿಸುವ ಭರವಸೆ ನೀಡಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್
ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 1,500 ರುಪಾಯಿಗಳಿಂದ 15,000 ರುಪಾಯಿಗಳಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 7,500 ರುಪಾಯಿಗಳಿಂದ 10000 ರುಪಾಯಿಗಳಿಗೆ ಹೆಚ್ಚಿಸುವ ಭರವಸೆ ನೀಡಿದೆ.
ಆಶಾ ಕಾರ್ಯಕರ್ತೆಯರಿಗೆ ಕೂಡ ಕಾಂಗ್ರೆಸ್ ಭರ್ಜರಿ ಕೊಡುಗೆ ಘೋಷಣೆ ಮಾಡಿದೆ. ಗೌರವಧನವನ್ನು 5000 ರುಪಾಯಿಗಳಿಂದ 9000 ರುಪಾಯಿಗಳಿಗೆ ಹೆಚ್ಚಿಸುವುದಾಗಿ ಹೇಳಿದೆ. ಬಿಸಿಯೂಟ ಅಡಿಗೆಯವರ ಮಾಸಿಕ ಗೌರವಧನವನ್ನು ಕೂಡ 3600 ರುಪಾಯಿಗಳಿಂದ 6000 ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ.
ಗ್ರಾಮೀಣ ಮೂಲ ಸೌಲಭ್ಯಕ್ಕೂ ಕಾಂಗ್ರೆಸ್ ಒತ್ತು
ಹಬ್ಬಗಳಲ್ಲಿ ಸಾರ್ವನಿಕ ಸೌಲಭ್ಯ ಸುಧಾರಣೆ, ಎಲ್ಲಾ ಮನೆಗಳಗೂ ಶುದ್ಧ ಕುಡಿಯುವ ನೀರು, ಶೌಚಾಲಯ, ಮೂಲ ಶಿಕ್ಷಣ, ಆರೋಗ್ಯ, ಸರ್ವ ಋತು ರಸ್ತೆಗಳಗಾಗಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆಗೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡುವ ಭರವಸೆ ನೀಡಿದೆ.












Click it and Unblock the Notifications