ಪರಿಷತ್ ಸ್ಥಾನಕ್ಕಾಗಿ ದೆಹಲಿಯಲ್ಲಿ ಕಾಂಗ್ರೆಸಿಗರ ಲಾಬಿ
ಬೆಂಗಳೂರು, ಜೂ. 5 : ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ದೆಹಲಿಯಲ್ಲಿ ಕಸರತ್ತು ಮುಂದುವರೆದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದು, ನಂತರ ಅಭ್ಯರ್ಥಿಯಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿಯೊಂದನ್ನು ಸಿದ್ದಪಡಿಸಿದ್ದರು. ಸದ್ಯ ಅದಕ್ಕೆ ಹೆಚ್ಚುವರಿ ಅಭ್ಯರ್ಥಿಗಳನ್ನು ಸೇರಿಸಲಾಗಿದೆ. ಎರಡೂ ಪಟ್ಟಿಗಳು ಸೇರಿ 10-14 ಹೆಸರುಗಳಿದ್ದು, 8 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ.

ಗುರುವಾರ ಸಿದ್ದರಾಮಯ್ಯ ಮತ್ತು ಡಾ.ಪರಮೇಶ್ವರ್ ಅವರು ಸೋನಿಯಾ ಗಾಂಧಿ ಅವರ ಜೊತೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಸಲು ಜೂ.9 ಅಂತಿಮ ದಿನವಾಗಿದ್ದು, ಅದಕ್ಕೂ ಮೊದಲು ಪಟ್ಟಿ ಬಿಡುಗಡೆಯಾಗಲಿದೆ.
ಆಕಾಂಕ್ಷಿಗಳು ಯಾರು? : ಪರಿಶಿಷ್ಟ ಜಾತಿ ವಿಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪರಿಶಿಷ್ಟ ಪಂಗಡದ ಆಧಾರದ ಮೇಲೆ ವಿ.ಎಸ್. ಉಗ್ರಪ್ಪ ಅವರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯವಿದೆ. ಕ್ರಿಶ್ಚಿಯನ್ನರ ಪೈಕಿ ಲೋಕಸಭೆ ಟಿಕೆಟ್ ತಪ್ಪಿಸಿಕೊಂಡಿದ್ದ ಎಚ್.ಟಿ. ಸಾಂಗ್ಲಿಯಾನ ಮತ್ತು ಐವಾನ್ ಡಿಸೋಜಾ ಅವರ ಹೆಸರು ಕೇಳಿಬರುತ್ತಿದೆ. [ಜೂ.19ರಂದು ಚುನಾವಣೆ]
ಹಿಂದುಳಿದ ವರ್ಗ ವಿಭಾಗದಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ. ನಂಜುಂಡಿ ಅವರ ಹೆಸರಿದೆ. ಕುರುಬರಿಗೂ ಒಂದು ಸ್ಥಾನ ನೀಡಬೇಕು ಎಂದು ಸಮುದಾಯದಿಂದ ಬೇಡಿಕೆ ಇದ್ದು, ಸಿಎಂ ಪರಮಾಪ್ತ ಎಚ್.ಎಂ.ರೇವಣ್ಣ ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಹೆಸರು ಪಟ್ಟಿಯಲ್ಲಿದೆ.
ನಾಮನಿರ್ದೇಶಿತರಾಗಿ ಆಯ್ಕೆಯಾಗುವ ಸಾಹಿತಿಗಳ ಪಟ್ಟಿಯಲ್ಲಿ ಮರುಳ ಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ರಾಣಿ ಸತೀಶ್ ಹೆಸರುಗಳಿವೆ. ಸಿ.ಜೆ. ಚಂದ್ರಶೇಖರ್, ಬಿ.ಎಲ್. ಶಂಕರ್ ಹೆಸರುಗಳು ಕೇಳಿಬರುತ್ತಿದೆ. ವಾಟಾಳ್ ನಾಗರಾಜ್ ನಾಮ ನಿರ್ದೇಶನವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಇದೆ.
ಯಾರಿಗೆ ವಿಧಾನಪರಿಷತ್ ಸ್ಥಾನ ಸಿಗಲಿದೆ ಎಂಬುದು ಇಂದು ಮಧ್ಯಾಹ್ನ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಿದ ಬಳಿಕ ಅಂತಿಮವಾಗುವ ಸಾಧ್ಯತೆ ಇದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪರಿಷತ್ ಪ್ರವೇಶಿಸಿ ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.











Click it and Unblock the Notifications