ಕಾಂಗ್ರೆಸ್ ನಾಯಕರ ಆರೋಪಕ್ಕೆ ಟ್ವೀಟ್ ಬಾಣ ಬಿಟ್ಟ ವಿಜಯೇಂದ್ರ!
ಬೆಂಗಳೂರು, ಆಗಸ್ಟ್ 26 : "ಕಟ್ಟು ಕಥೆ ಕಟ್ಟುವುದರಲ್ಲಿ, ಹಸೀ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ. ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಆರೋಪವನ್ನು ಮಾಡಲಾಗಿದೆ" ಎಂದು ಬಿ. ವೈ. ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
Recommended Video
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ರಾಜ್ಯದಲ್ಲಿ ತಮ್ಮದೇ ಆದ ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ. ಈ ಕುರಿತು ಬಿಜೆಪಿಯ 7 ಶಾಸಕರು ಹೈಕಮಾಂಡ್ಗೆ ಬರೆದಿದ್ದಾರೆ ಎಂಬ ಪತ್ರವನ್ನು ಬಿಡುಗಡೆ ಮಾಡಿದ್ದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಟ್ವೀಟ್ ಮೂಲಕ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. "ದುರುದ್ದೇಶ ಪೂರಿತ,ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು" ಎಂದು ಅವರು ಹೇಳಿದ್ದಾರೆ.
"ಅಧಿಕಾರಿಗಳ ವರ್ಗಾವಣೆ, ಟೆಂಡರ್ ಪ್ರತಿಯೊಂದಕ್ಕೂ ವಿಜಯೇಂದ್ರ ಅನುಮತಿ ಬೇಕಿದೆ. ಪ್ರತಿ ಇಲಾಖೆಯ ಮೇಲುಸ್ತುವಾರಿಗಾಗಿ 31 ಜನರ ಆಪ್ತಕೂಟವನ್ನು ರಚಿಸಿಕೊಂಡು, ಅವರ ಮೂಲಕ ಪರ್ಯಾಯ ಸರ್ಕಾರದ ದಂಧೆಯನ್ನು ನಡೆಸುತ್ತಿದ್ದಾರೆ" ಎಂದು ಎಂ. ಲಕ್ಷ್ಮಣ್ ದೂರಿದ್ದರು.

ಮತ್ತಷ್ಟು ದಾಖಲೆಗಳ ಬಿಡುಗಡೆ
"ಬಿಜೆಪಿ ಶಾಸಕರ ಪತ್ರದ ಕುರಿತಂತೆ ಇನ್ನಷ್ಟು ಸಾಕ್ಷ್ಯಗಳು ನಮ್ಮಲ್ಲಿ ಇವೆ. ಸೆಪ್ಟೆಂಬರ್ನಲ್ಲಿ ವಿಜಯೇಂದ್ರ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಲಿದ್ದೇವೆ" ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಕಾನೂನು ಹೋರಾಟ
"ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. 10 ದಿನದಲ್ಲಿ ಯಾವುದೇ ಪ್ರಕ್ರಿಯೆ ನಡೆಯದಿದ್ದರೆ ನಾವೇ ಎಸಿಬಿ, ಲೋಕಾಯುಕ್ತ, ಐಟಿ, ಇಡಿ ಮತ್ತು ನ್ಯಾಯಾಲಯದ ಮೊರೆ ಹೋಗುತ್ತೇವೆ" ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಪತ್ರ ಬರೆದ ಶಾಸಕರು ಯಾರು?
ಬಿ. ವೈ. ವಿಜಯೇಂದ್ರ ವಿರುದ್ಧ ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದ ಶಾಸಕರು ಯಾರು? ಎಂಬುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಿಲ್ಲ. "ಗೌಪತ್ಯೆಯ ವಿಷಯವಿದು, ಪತ್ರದ ಮೂಲ ಕೆದಕಬೇಡಿ" ಎಂದು ಎಂ. ಲಕ್ಷ್ಮಣ್ ಹೇಳಿದರು.
|
ಬಿ. ವೈ. ವಿಜಯೇಂದ್ರ ಟ್ವೀಟ್
"ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಆರೋಪವನ್ನು ಮಾಡಲಾಗಿದೆ" ಎಂದು ಬಿ. ವೈ. ವಿಜಯೇಂದ್ರ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.












Click it and Unblock the Notifications