ಒಬ್ಬ ಆರೋಪಿ ಶಾಸಕನನ್ನು ಪತ್ತೆ ಮಾಡಲಾಗದಷ್ಟು ರಾಜ್ಯ ಪೊಲೀಸರು ನಿಶ್ಯಕ್ತರಾಗಿದ್ದಾರೆಯೇ?
ಪೊಲೀಸ್ ಗನ್ ಮ್ಯಾನ್ ಹೊಂದಿರುವ ಶಾಸಕನ ಸುಳಿವು ಇಲ್ಲಿಯ ವರೆಗೆ ಪೊಲೀಸರಿಗೆ ಸಿಗುತ್ತಿಲ್ಲ ಎಂದು ನಂಬಲು ಸಾಧ್ಯವೇ..? ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಮಾರ್ಚ್ 07: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ಗೆ ಅಸ್ತ್ರವಾಗಿ ಸಿಕ್ಕಿರುವುದು ಪ್ರಶಾಂತ್ ಮಾಡಾಳ್ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿರುವುದು. ಬಿಜೆಪಿ ಭ್ರಷ್ಟ ಸರ್ಕಾರ ಎನ್ನುವ ಕಾಂಗ್ರೆಸ್ಗೆ ಚುನಾವಣಾ ಸಮಯದಲ್ಲಿ ಇದು ಒಳ್ಳೇ ಅಸ್ತ್ರವಾಗಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡ ಇದನ್ನು ಚೆನ್ನಾಗಿ ಬಸಿ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಕಾರಣದಿಂದಾಗಿ ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಅವರು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಸೋಮವಾರ ಕರ್ನಾಟಕ ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯ ವಿಚಾರಣೆ ಮಾರ್ಚ್ 7ರ ಮಂಗಳವಾರ ನಡೆಯಲಿದೆ. ಲೋಕಾಯುಕ್ತ ಪೊಲೀಸರು ಶಾಸಕರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಇದರ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

"ಒಬ್ಬ ಆರೋಪಿ ಶಾಸಕನನ್ನು ಪತ್ತೆ ಮಾಡಲಾಗದಷ್ಟು ರಾಜ್ಯದ ಪೊಲೀಸರು ನಿಶ್ಯಕ್ತರಾಗಿದ್ದಾರೆಯೇ..? ನರೇಂದ್ರಮೋದಿ - ಅಮಿತ್ ಶಾ ಜೋಡಿ ರಾಜ್ಯಕ್ಕೆ ಭೇಟಿ ನೀಡಿದಾಗ ತಮ್ಮ ಪಕ್ಷದ ಶಾಸಕನೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲಲ್ಲಿದ್ದು ಮುಜುಗರ ಉಂಟುಮಾಡಬಾರದು ಎಂದು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸುತ್ತಿಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ..?" ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಒಬ್ಬ ಆರೋಪಿ ಶಾಸಕನನ್ನು ಪತ್ತೆ ಮಾಡಲಾಗದಷ್ಟು ರಾಜ್ಯದ ಪೊಲೀಸರು ನಿಶ್ಯಕ್ತರಾಗಿದ್ದಾರೆಯೇ? @narendramodi - @AmitShah ಜೋಡಿ ರಾಜ್ಯಕ್ಕೆ ಭೇಟಿ ನೀಡಿದಾಗ ತಮ್ಮ ಪಕ್ಷದ ಶಾಸಕನೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲಲ್ಲಿದ್ದು ಮುಜುಗರ ಉಂಟುಮಾಡಬಾರದು ಎಂದು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸುತ್ತಿಲ್ಲವೇ @BSBommai?
— Siddaramaiah (@siddaramaiah) March 6, 2023
1/5
"ಪೊಲೀಸ್ ಗನ್ ಮ್ಯಾನ್ ಹೊಂದಿರುವ ಶಾಸಕನ ಸುಳಿವು ಇಲ್ಲಿಯ ವರೆಗೆ ಪೊಲೀಸರಿಗೆ ಸಿಗುತ್ತಿಲ್ಲ ಎಂದು ನಂಬಲು ಸಾಧ್ಯವೇ..? ಹೇಗಾದರೂ ಮಾಡಿ ನಿರೀಕ್ಷಣಾ ಜಾಮೀನು ಕೊಡಿಸಿ ಆರೋಪಿ ಶಾಸಕನನ್ನು ಜೈಲು ವಾಸದಿಂದ ಪಾರು ಮಾಡಲು ಮುಖ್ಯಮಂತ್ರಿಗಳು ಹೊರಟಿದ್ದಾರೆಯೇ..?" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರಿ ವಕೀಲರು ಬಲವಾದ ಆಕ್ಷೇಪಣೆ ಸಲ್ಲಿಸಲಿದ್ದಾರೆ ಎಂದು ನಂಬಬಹುದೇ..? ಇಲ್ಲವೇ ಮೌನ ಸಮ್ಮತಿ ಮೂಲಕ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯಕ್ಕೆ ಅವಕಾಶ ಮಾಡಿಕೊಡುವ ಹುನ್ನಾರವನ್ನೇನಾದರೂ ಸರ್ಕಾರ ನಡೆಸುತ್ತಿದೆಯೇ..?. ಸಿಸೋಡಿಯ ಬಳಿ 10 ಸಾವಿರ ಸಿಕ್ಕಿದ್ದಕ್ಕೆ ಸಿಬಿಐ ಐದು ದಿನ ಕಸ್ಟಡಿಯಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸಿತು. ಮಾಡಾಳ್ ವಿರೂಪಾಕ್ಷಪ್ಪರ ಪುತ್ರನನ್ನು ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆಗಾಗಿ ತಮ್ಮ (ಪೊಲೀಸ್ ) ಕಸ್ಟಡಿಗೆ ಕೇಳದೇ ಸೀದಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಏನಿದು ವಿಚಿತ್ರ..?" ಎಂದು ಬಿಜೆಪಿ ವಿರೋಧ ಪಕ್ಷಗಳ ಮೇಲೆ ನಡೆಸುವ ತನಿಖೆ ಬಗ್ಗೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
"ಶಾಸಕ ಮಾಡಾಳ್ ಪುತ್ರನ ಬಳಿ ತಕ್ಷಣಕ್ಕೆ 40 ಲಕ್ಷ ರೂಪಾಯಿ, ಮನೆಯಲ್ಲಿ ಸುಮಾರು 8 ಕೋಟಿ ರೂಪಾಯಿ ನಗದು ಜತೆಗೆ ನೂರಾರು ಕೋಟಿ ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕರೂ ಈ ಬಗ್ಗೆ ಅರ್ಧ ಗಂಟೆ ಕೂಡ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಯಾಕೆ ಅನಿಸಲಿಲ್ಲ..?" ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತ, ಕಾಂಗ್ರೆಸ್ ಕೂಡ ಈ ವಿಷಯದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕರನ್ನು ಬಿಜೆಪಿ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದೆ. "ನಮ್ಮ ಪೊಲೀಸರಿಗೆ ಎಂತೆಂತಹ ನಿಗೂಢ ಪ್ರಕರಣಗಳನ್ನೇ ಬೇಧಿಸಿದ, ಎಂತೆಂತಹ ಕ್ರಿಮಿನಲ್ಗಳನ್ನೇ ಹುಡುಕಿ ತಂದ ಇತಿಹಾಸವಿದೆ. ಹೀಗಿರುವಾಗ ಒಬ್ಬ ಭ್ರಷ್ಟಾಚಾರದ ಆರೋಪಿ ಶಾಸಕರನ್ನು ಪತ್ತೆ ಹಚ್ಚಲಾಗುತ್ತಿಲ್ಲ ಎಂದರೆ ಏನರ್ಥ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಭ್ರಷ್ಟಾಚಾರ ಹಾಗೂ ಭ್ರಷ್ಟರನ್ನು ರಕ್ಷಿವುದೇ ನಿಮ್ಮ ಏಕೈಕ ಗುರಿಯೇ..?" ಎಂದು ಕಿಡಿ ಕಾರಿದೆ.












Click it and Unblock the Notifications