ಯಡಿಯೂರಪ್ಪ ಬಜೆಟ್; ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ
ಬೆಂಗಳೂರು, ಮಾರ್ಚ್ 5: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
''ಯಡಿಯೂರಪ್ಪ ಬಜೆಟ್ ಒಂದು ನೀರಸ ಬಜೆಟ್ ಆಗಿದೆ. ಇದನ್ನು ಯಾವುದೇ ಹಣಕಾಸು ತಜ್ಞರು ಉತ್ತಮ ಬಜೆಟ್ ಎನ್ನಲು ಸಾಧ್ಯವಿಲ್ಲ. ಬಜೆಟ್ನಲ್ಲಿ ಅನುದಾನ ನೀಡಲು ರಾಜ್ಯದಲ್ಲಿ ಸಂಪನ್ಮೂಲದ ಕೊರತೆಯಿದೆ. ಏಕೆಂದರೆ ರಾಜ್ಯದ ಜಿಡಿಪಿ ಕುಸಿದಿದೆ. 12 ಸಾವಿರ ಕೋಟಿ ರುಪಾಯಿ ಬಜೆಟ್ ಕೊರತೆ ಇದೆ. ಇದೊಂದು ಕಳಪೆ ಬಜೆಟ್'' ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಬಜೆಟ್ ಬಗ್ಗೆ ವಾಗ್ದಾಳಿ ನಡೆಸಿದರು.
ಬಜೆಟ್ ಕೊರತೆ ನೀಗಿಸಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬಂದಿಲ್ಲ. ಅದನ್ನು ಸ್ವತಃ ಮುಖ್ಯಮಂತ್ರಿ ಅವರೇ ಒಪ್ಪಿಕೊಂಡಿದ್ದಾರೆ. ಕೃಷಿ, ನೀರಾವರಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡದೇ, ಬಡವರ ಮೂಗಿದೆ ತುಪ್ಪ ಹಚ್ಚುವ ಕೆಲಸವನ್ನು ಮಾಡಲಾಗಿದೆ. ಇಷ್ಟೊಂದು ಕೆಟ್ಟ ಬಜೆಟ್ ಕಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ
ಸಿಎಂ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದು 7 ತಿಂಗಳಾಯಿತು. ಈ ಬಾರಿ ಸಿಎಂ ಆಗಿ ಮೊದಲ ಬಜೆಟ್ ಮಂಡಿಸಿದ್ದಾರೆ. ನಮ್ಮ ಅವಧಿಯಲ್ಲಿ, ಈ ಸರ್ಕಾರದಲ್ಲಿ ಹಣ ಇಲ್ಲ. ತಮ್ಮ ಸರ್ಕಾರ ಎಂದಾಗ ಬಜೆಟ್ ಮೂಲಕ ಉತ್ತರ ಕೊಡುತ್ತೇನೆ ಎಂದಿದ್ದರು.
ರೈತ ಹೋರಾಟಗಾರ, ಕೃಷಿಗೆ ಆದ್ಯತೆ, ರೈತರ ಎಲ್ಲ ಕಷ್ಟ ಪರಿಹರಿಸುತ್ತೇನೆ ಎನ್ನುತ್ತಿದ್ದರು. ಆದರೆ, ಕೃಷಿಗೆ ಮಹತ್ವ ಕೊಡುವ ಯಾವ ಕಾರ್ಯಕ್ರಮವೂ ಬಜೆಟ್ನಲ್ಲಿ ಇಲ್ಲ.
ಕಳೆದ ವರ್ಷ 2.34 ಲಕ್ಷ ಕೋಟಿ ಬಜೆಟ್ ಇತ್ತು. 2.37 ಲಕ್ಷ ಕೋಟಿ ಇದೆ. 4 ಸಾವಿರ ಕೋಟಿ ರೂ.ಗಳಷ್ಟೇ ಬೆಳವಣಿಗೆ ಆಗಿದೆ. ಅಂದರೆ, ಶೇ.2 ಕ್ಕಿಂತ ಕಡಿಮೆ ಬೆಳವಣಿಗೆ. ನಮ್ ಕಾಲದಲ್ಲಿ ಬಜೆಟ್ ಗಾತ್ರ ಶೇ.9 ರವರೆಗೂ ಹೋಗಿತ್ತು.
ಸಂಪನ್ಮೂಲಗಳ ಕೊರತೆ ಕಾಣಿಸುತ್ತಿದೆ. ಸರ್ಕಾರವೂ ಒಪ್ಪಿಕೊಂಡಿದೆ. 12 ಸಾವಿರ ಕೋಟಿ ರೂ. ಕಡಿಮೆಯಾಗಿದೆ. 14 ನೇ ಹಣಕಾಸು ಆಯೋಗದಡಿ ಶೇ. 4.71 ರಷ್ಟು ಹಂಚಿಕೆಯಾಗಿತ್ತು. 39,806 ಸಾವಿರ ಕೋಟಿ ಬರೇಕಿತ್ತು.
15ನೇ ಹಣಕಾಸು ಆಯೋಗದಡಿ ಶೇ.3 ಅಷ್ಟೇ ಇದೆ. ನಿರೀಕ್ಷೆಯೇ 11,215 ಕೋಟಿ ಕಡಿಮೆಯಿದೆ. ದೇಶದ ಜಿಡಿಪಿ 4.6 ಅಷ್ಟೇ ಇದೆ. ಜಿಡಿಪಿ ಕುಸಿತಕ್ಕೆ ಸಮ್ಮಿಶ್ರ ಸರ್ಕಾರ ಇದ್ದದ್ದೇ 4 ತಿಂಗಳು. ಉಳಿದ 8 ತಿಂಗಳು ಆಡಳಿತ ಮಾಡಿದ ಬಿಜೆಪಿ ಪಾತ್ರವೇ ಹೆಚ್ಚು.
ಹಸಿರು ಶಾಲು ಹಾಕಿದ ತಕ್ಷಣ ರೈತರ ಮಗ ಎಂದ ಕೂಡಲೇ ಆಗುವುದಿಲ್ಲ. ನಾವೆಲ್ಲರೂ ರೈತ ಕುಟುಂಬದಿಂದಲೇ ಬಂದಿದ್ದು. ಅವ್ರು ಮಂಡ್ಯದಲ್ಲಿದ್ದರು, ಅಲ್ಲಿಂದ ಶಿಕಾರಿಪುರಕ್ಕೆ ಹೋದ್ರು. ಆಮೇಲೆ ನಿಂಬೆಹಣ್ಣು ಮಾರಿದರು. ವ್ಯವಸಾಯ ಎಲ್ಲಿ ಮಾಡಿದ್ದಾರೆ. ರೈತರ ಮಗ ಎಂದು ಹೇಳೋದಷ್ಟೇ. ಬಜೆಟ್ನಲ್ಲಿ ಕಾಣಿಸುತ್ತಿಲ್ಲ.
ಮಹದಾಯಿ ನೀರು ಹಂಚಿಕೆ ಯಶಸ್ಸನ್ನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರ ಪಾತ್ರ, ಕೊಡುಗೆ ಏನೇನೂ ಇಲ್ಲ. ನಾವು ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್ ಎಲ್ಲೆಡೆ ಶ್ರಮ ಹಾಕಿದೆವು. ಕನಿಷ್ಠ 2 ವರ್ಷದಲ್ಲಿ ಮುಗಿಸಬೇಕು. 500 ಕೋಟಿ ನಿಗದಿಪಡಿಸಿದಾರೆ. ಎಷ್ಟು ಬಿಡುಗಡೆ ಮಾಡುತ್ತಾರೆ ನೋಡಬೇಕು.
ಈ ಬಜೆಟ್ನಲ್ಲಿ ಒಂದೇ ಒಂದು ಹೊಸ ಕಾರ್ಯಕ್ರಮ ಇಲ್ಲ. ಭಾಗ್ಯಲಕ್ಷ್ಮೀ, ಸೈಕಲ್ ಕೊಡುವುದನ್ನಷ್ಟೇ ಹೇಳಿದ್ದಾರೆ. ಆಹಾರ ಇಲಾಖೆಗೆ ಶೇ.1 ರಷ್ಟು ಕಡಿಮೆ ಅನುದಾನ ಇಟ್ಟಿದಾರೆ. ಅನ್ನಭಾಗ್ಯದ ಬಗ್ಗೆ ಸ್ಪಷ್ಟತೆ ಇಲ್ಲ. ಎಲ್ಲವೂ ಗುಪ್ತವಾಗಿದೆ. ಬಹಿರಂಗಪಡಿಸಿಲ್ಲ.
ರೈತ ವಿರೋಧಿ ಬಜೆಟ್, ಮುನ್ನೋಟ ಇಲ್ಲದ ಬಜೆಟ್. ಸಾಮಾಜಿಕ ನ್ಯಾಯಕ್ಕೆ ಹೊಡೆತ ಬಿದ್ದಿದೆ. ಆದ್ಯತಾ ವಲಯಗಳಿಗೆ ಒತ್ತು ಕೊಟ್ಟಿಲ್ಲ. ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಅನ್ಯಾಯ ಆಗಿದೆ.
ಉಪ ನಗರ ರೈಲು ಯೋಜನೆಗೆ ಒಟ್ಟಾರೆ 18 ಸಾವಿರ ಕೋಟಿ ರೂ. ಬೇಕು. ಕೇಂದ್ರ ಸರ್ಕಾರ 1 ಕೋಟಿ ಇಟ್ಟಿದೆ. ರಾಜ್ಯ ಸರ್ಕಾರ 500 ಕೋಟಿ ಇಟ್ಟಿದೆ ಇದು ಟೇಕಾಫ್ ಆಗಲ್ಲ ಎಂದು ಹೇಳಿದರು.












Click it and Unblock the Notifications