ಬಿಜೆಪಿಯ ಜನರು ರಜನಿಕಾಂತ್ ಜತೆ ಹೋಗುತ್ತಿದ್ದಾರೆ: ದಿನೇಶ್ ಗುಂಡೂರಾವ್
ಬೆಂಗಳೂರು, ಡಿಸೆಂಬರ್ 5: ತಮಿಳುನಾಡಿನಲ್ಲಿ ನಟ ರಜನಿಕಾಂತ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ತಮಿಳುನಾಡಿನ ರಾಜಕೀಯದ ಮೇಲೆ ಅದರ ಪರಿಣಾಮವನ್ನು ಇಷ್ಟು ಬೇಗನೆ ಅಂದಾಜಿಸುವುದು ಕಷ್ಟಕರ ಎಂದಿದೆ.
ರಜನಿಕಾಂತ್ ಅವರ ಉದ್ದೇಶಿತ ರಾಜಕೀಯ ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳು ಮತ್ತು ಚುನಾವಣಾ ಹಾದಿಯ ಬಗ್ಗೆ ಇನ್ನೂ ಸ್ಪಷ್ಟತೆ ದೊರಕಿಲ್ಲ ಎಂದು ಕಾಂಗ್ರೆಸ್ನ ತಮಿಳುನಾಡು ವ್ಯವಹಾರಗಳ ಮೇಲುಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜತೆಗೆ ಈಗ ರಜನಿಕಾಂತ್ ಅವರೊಂದಿಗೆ ಬಿಜೆಪಿಯ ಅನೇಕ ಪ್ರಮುಖ ವ್ಯಕ್ತಿಗಳು ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಜನಿಕಾಂತ್ ಅವರ ಪಕ್ಷ ಇನ್ನೂ ನೋಂದಣಿಯಾಗಿಲ್ಲ. ಅವರ ಪ್ರಸ್ತಾವಿತ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳು ಹೇಗಿರಲಿವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಮುಂದಿನ ವರ್ಷದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ವತಂತ್ರವಾಗಿ ಸ್ಪರ್ಧಿಸುತ್ತಾರೋ ಅಥವಾ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತಾರೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಮುಂದೆ ಇದೆ.

ಮೌಲ್ಯಮಾಪನ ಈಗ ಸಾಧ್ಯವಿಲ್ಲ
ಒಮ್ಮೆ ಸ್ಪಷ್ಟನೆ ಬಂದ ಬಳಿಕ ಅವರ ಪಕ್ಷದ ರಾಜಕೀಯ ಪರಿಣಾಮವನ್ನು ನಾವು ಮೌಲ್ಯಮಾಪನ ಮಾಡಲು ಸಾಧ್ಯವಾಗಲಿದೆ. ಈಗ ಅದರ ಬಗ್ಗೆ ಆಲೋಚನೆ ಮಾಡುವುದು ಬಹಳ ಬೇಗ ಎನಿಸುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕಾದು ನೋಡೋಣ
'ಅವರ ಪಕ್ಷದ ರಚನೆ ಹೇಗಿರಲಿದೆ, ಅವರು ವಾಸ್ತವವಾಗಿ ಏನನ್ನು ಮಾಡಲು ಹೊರಟಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಲ್ಲಿಯವರೆಗೂ ನಾವು ಹೇಗೆ ತಾನೆ ಯಾವುದನ್ನಾದರೂ ತೀರ್ಮಾನಿಸಲು ಸಾಧ್ಯ? ಅವರು ಬಿಜೆಪಿ ಜತೆಗೆ ಹೋಗುತ್ತಾರೆಯೇ? ಅವರು ಏನು ಮಾಡಲು ಬಯಸಿದ್ದಾರೆ? ಇದೆಲ್ಲವನ್ನೂ ಕಾದು ನೋಡಬೇಕು' ಎಂದಿದ್ದಾರೆ.

ರಾಜಕೀಯ ಪಕ್ಷ ಘೋಷಣೆ
ತಮಿಳುನಾಡಿನಲ್ಲಿ ಜನವರಿಯಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುವುದು. ಇದರ ಬಗ್ಗೆ ಡಿ. 31ರಂದು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ರಜನಿಕಾಂತ್ ಗುರುವಾರ ಪ್ರಕಟಿಸಿದ್ದರು. ತಮಿಳುನಾಡು ಬಿಜೆಪಿ ಬೌದ್ಧಿಕ ಘಟಕದ ಅಧ್ಯಕ್ಷರಾಗಿದ್ದ ಡಾ. ಅರ್ಜುನ್ ಮೂರ್ತಿ, ಈಗ ರಜನಿಕಾಂತ್ ಅವರ ಜತೆಗೂಡಿದ್ದಾರೆ.

ಜೀವ ನೀಡಲೂ ಸಿದ್ಧ
'ಸಿಂಗಪುರದಲ್ಲಿ ಚಿಕಿತ್ಸೆ ಪಡೆದ ಬಳಿಕ ನಾನು ತಮಿಳುನಾಡಿನ ಜನತೆಯ ಪ್ರಾರ್ಥನೆಯಿಂದಾಗಿಯೇ ಗುಣಮುಖನಾದೆ. ಹೀಗಾಗಿ ಅವರ ಸಲುವಾಗಿ ನಾನು ಜೀವವನ್ನು ನೀಡಲು ಸಂತೋಷ ಪಡುತ್ತೇನೆ. ತಮಿಳುನಾಡಿನ ಜನತೆಗೆ ನೀಡಿದ ಮಾತಿನಿಂದ ನಾನು ಹಿಂದೆ ಸರಿಯುವುದಿಲ್ಲ. ಇದು ಸಮಯದ ಅಗತ್ಯ ಮತ್ತು ಅದು ಈಡೇರಲೇಬೇಕು. ಅದು ಈಗ ಸಾಧ್ಯವಾಗದೆ ಹೋದರೆ ಎಂದೆಂದಿಗೂ ಸಾಧ್ಯವಾಗುವುದಿಲ್ಲ. ಎಲ್ಲವನ್ನೂ ಪರಿವರ್ತನೆ ಮಾಡೋಣ' ಎಂದು ರಜನಿಕಾಂತ್ ಹೇಳಿದ್ದಾರೆ.












Click it and Unblock the Notifications