ಸಿದ್ದರಾಮಯ್ಯ ಪರಮಾಪ್ತ ಸಿಎಂ ಇಬ್ರಾಹಿಂ ಬಿಜೆಪಿಗೆ?
ಬೆಂಗಳೂರು, ಅ.10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸ್ನೇಹಿತ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕೀಯವಲಯದಲ್ಲಿ ಹಬ್ಬಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ತಮ್ಮ ಸ್ನೇಹಿತರೇ ಸಿಎಂ ಆಗಿರುವಾಗ ಇಬ್ರಾಹಿಂ ಕಾಂಗ್ರೆಸ್ಗೆ ಕೈಕೊಡಲಿದ್ದಾರೆಯೇ? ಎಂಬುದು ಕುತೂಹಲದ ಪ್ರಶ್ನೆ.
ಸಿ.ಎಂ.ಇಬ್ರಾಹಿಂ ಬಿಜೆಪಿ ಸೇರುತ್ತಾರೆ. ಅವರು ರಾಜ್ಯದ ಹಿರಿಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಈ ಕುರಿತು ಮಾತನಾಡಿದ್ದಾರೆ. ಬಿಜೆಪಿ ಸೇರುವ ಕುರಿತು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಸ್ವತಃ ಇಬ್ರಾಹಿಂ ಮತ್ತು ಯಾವುದೇ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ಕೊಟ್ಟಿಲ್ಲ.

ನವೆಂಬರ್ ತಿಂಗಳಿನಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಲಿರುವ ಇಬ್ರಾಹಿಂ ನಂತರ ಬಿಜೆಪಿಗೆ ಬರಲಿದ್ದಾರೆ ಎಂಬುದು ಸದ್ಯದ ಸುದ್ದಿ. 2013ರ ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಇಬ್ರಾಹಿಂ ಅವರಿಗೆ ಸಿದ್ದರಾಮಯ್ಯ ಅವರೇ ಖುದ್ದು ಟಿಕೆಟ್ ಕೊಡಿಸಿದ್ದರೂ ಅವರು, ಸೋಲು ಅನುಭವಿಸಿದರು. ನಂತರ ರಾಜ್ಯಸಭೆ ಸದಸ್ಯರಾಗಲು ಅವರು ಪ್ರಯತ್ನಿಸಿದ್ದರು. [ಯೋಜನಾ ಆಯೋಗಕ್ಕೆ ಇಬ್ರಾಹಿಂ]
ರಾಜ್ಯಸಭೆ ಪ್ರವೇಶಿಸಿಸುವ ಪ್ರಯತ್ನ ವಿಫಲವಾದ ನಂತರ ಇಬ್ರಾಹಿಂ ಅವರನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ. ಆದರೆ, ಇದರಿಂದ ಅಸಮಾಧಾನಗೊಂಡಿರುವ ಇಬ್ರಾಹಿಂ ಪಕ್ಷ ತೊರೆಯುತ್ತಾರೆ ಎಂಬುದು ಸದ್ಯದ ವಾದ. ಇದರ ಸತ್ಯಾಸತ್ಯತೆ ಬಗ್ಗೆ ಇಬ್ರಾಹಿಂ ಮಾತ್ರ ಸ್ಪಷ್ಟನೆ ನೀಡಬೇಕಾಗಿದೆ. [ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ]
ಕರ್ನಾಟಕ ಬಿಜೆಪಿಯಲ್ಲಿ ಮುಸ್ಲಿಂ ನಾಯಕರ ಕೊರತೆ ಇದೆ. ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಗೊಂಡರೆ ರಾಜ್ಯದಲ್ಲಿ ಬಿಜೆಪಿ ಶಕ್ತಿ ಹೆಚ್ಚುತ್ತದೆ. ಆದ್ದರಿಂದ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಾಯಕರು ಸಮ್ಮತಿ ಸೂಚಿಸಿರಬಹುದು ಎಂಬ ಸುದ್ದಿಗಳು ಹಬ್ಬಿವೆ. ರಾಜ್ಯ ಬಿಜೆಪಿಯ ನಾಯಕರು ಈ ಬಗ್ಗೆ ಯಾವುದೇ ಅಧಿಕೃತವಾದ ಹೇಳಿಕೆಗಳನ್ನು ನೀಡಿಲ್ಲ.
ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಸಾಲು-ಸಾಲು ಡೈಲಾಗ್ ಹೇಳಿ ಚಪ್ಪಾಳೆ ಗಿಟ್ಟಿಸುವ ಸಿ.ಎಂ.ಇಬ್ರಾಹಿಂ ಜೆಡಿಎಸ್ನಿಂದ ಸಿದ್ದರಾಮಯ್ಯ ಅವರ ಜೊತೆಗೆ ಬಂದವರು. ಸಿಎಂ ಪರಮಾಪ್ತರಲ್ಲಿವೊಬ್ಬರು. ಕೆಲವು ದಿನಗಳ ಹಿಂದೆ ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇಬ್ರಾಹಿಂ ಬಿಜೆಪಿ ಸೇರಲಿದ್ದಾರೆಯೇ? ಎಂಬ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.












Click it and Unblock the Notifications