ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ
Recommended Video
ಬೆಂಗಳೂರು, ಮೇ 27 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದೆ. 8 ಶಾಸಕರು ಹೊಸದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟವನ್ನು ಸೇರುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರದ ಸಂಪುಟ ಪುನಾರಚನ ನಡೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ತಲಾ ಮೂವರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದು, ಹೊಸ ಶಾಸಕರು ಸಂಪುಟ ಸೇರಲಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ಪುನಾರಚನೆ ಕುರಿತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಪಟ್ಟಿಯನ್ನು ನೀಡಿದರೆ, ಬುಧವಾರ ಸಂಪುಟ ಪುನಾರಚನೆ ನಡೆಯುವ ನಿರೀಕ್ಷೆ ಇದೆ.
ರಮೇಶ್ ಜಾರಕಿಹೊಳಿ ಅವರ ಜೊತೆ ಗುರುತಿಸಿಕೊಂಡಿರುವ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆ? ಎಂಬ ಬಗ್ಗೆ ಕಾಂಗ್ರೆಸ್ ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ... ಅತೃಪ್ತರಿಗೆ ಸಚಿವ ಸ್ಥಾನಗಳನ್ನು ನೀಡಿ ಬಿಜೆಪಿಯ ಆಪರೇಷನ್ ಕಮಲದ ತಂತ್ರವನ್ನು ವಿಫಲಗೊಳಿಸಲು ಮೈತ್ರಿಕೂಟ ಮುಂದಾಗಿದೆ.

ಸಚಿವ ಸ್ಥಾನ ಕಳೆದುಕೊಳ್ಳುವವರು?
ಕಾಂಗ್ರೆಸ್ ಪಕ್ಷದ ಮೂವರು ಸಚಿವ ಸಂಪುಟದಿಂದ ಹೊರ ಹೋಗಲಿದ್ದಾರೆ. ಅವರಲ್ಲಿ ಸಿ.ಎಸ್.ಪುಟ್ಟರಂಗ ಶೆಟ್ಟಿ, ಡಾ.ಜಯಮಾಲಾ, ಯು.ಟಿ.ಖಾದರ್, ಕೃಷ್ಣ ಭೈರೇಗೌಡ ಅವರ ಹೆಸರು ಕೇಳಿ ಬರುತ್ತಿದೆ. ಕೃಷ್ಣ ಬೈರೇಗೌಡರನ್ನು ಉಳಿಸಿಕೊಂಡು ಪುಟ್ಟರಂಗ ಶೆಟ್ಟಿ ಅವರನ್ನು ಸಂಪುಟದಿಂದ ಕೈ ಬಿಡುವ ಕುರಿತು ಚರ್ಚೆಗಳು ನಡೆದಿವೆ.

ಯಾರು ಸಂಪುಟ ಸೇರಲಿದ್ದಾರೆ?
ಕಾಂಗ್ರೆಸ್ ಪಕ್ಷದಿಂದ ಮೂವರು ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಶಾಸಕರಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆದಿದೆ. ಸದ್ಯ ದೊರಕಿರುವ ಮಾಹಿತಿಯಂತೆ
* ಲಿಂಗಾಯತ ಕೋಟಾದಡಿ ಬಿ.ಸಿ.ಪಾಟೀಲ್ (ಹಿರೇಕೆರೂರು)
* ಒಕ್ಕಲಿಗ ಕೋಟಾದಡಿ ಡಾ.ಸುಧಾಕರ್ (ಚಿಕ್ಕಬಳ್ಳಾಪುರ)
* ಅಲ್ಪ ಸಂಖ್ಯಾತ ಕೋಟಾದಡಿ ರೋಷನ್ ಬೇಗ್ (ಶಿವಾಜಿನಗರ) ಸಂಪುಟ ಸೇರುವ ಸಾಧ್ಯತೆ ಇದೆ.

ಸಚಿವ ಸ್ಥಾನ ನೀಡಬೇಕೆ?
ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆ? ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಮಹೇಶ್ ಕಮಕಟಳ್ಳಿ ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ಅವರನ್ನು ಸಚಿವರನ್ನಾಗಿ ಮಾಡುವ ಕುರಿತು ತೀರ್ಮಾನ ಕೈಗೊಂಡಿಲ್ಲ.

ಜೆಡಿಎಸ್ನಿಂದ ಯಾರು?
ಬಿಎಸ್ಪಿ ಶಾಸಕ ಎನ್.ಮಹೇಶ್ ರಾಜೀನಾಮೆ ಬಳಿಕ ಜೆಡಿಎಸ್ ಕೋಟಾದ 2 ಸಚಿವ ಸ್ಥಾನ ಖಾಲಿ ಆಗಿದೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಂಪುಟ ಸೇರುವ ಸಾಧ್ಯತೆ ಇದೆ. ದೇವೇಗೌಡರ ಜೊತೆ ಚರ್ಚಿಸಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಸರು ಅಂತಿಮಗೊಳಿಸಲಿದ್ದಾರೆ.











Click it and Unblock the Notifications