ಪುನಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಯಾರು, ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 01 : 15 ಕ್ಷೇತ್ರಗಳ ಉಪ ಚುನಾವಣೆಗೆ 4 ದಿನಗಳು ಬಾಕಿ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚುನಾವಣೆ ಹೊಸ್ತಿಲಲ್ಲಿ ಮೈತ್ರಿ ಬಗ್ಗೆ ಮಾತನಾಡಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಡಿಸೆಂಬರ್ 9ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಸೂಚನೆ ಸಿಕ್ಕಿದೆ. ಆದರೆ, ಮೈತ್ರಿ ಬಗ್ಗೆ ಏಕೆ ಉಭಯ ಪಕ್ಷಗಳ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ?.
"ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಗೋಕಾಕ್ ಕ್ಷೇತ್ರದ ಅಭ್ಯರ್ಥಿ ಅಶೋಕ ಪೂಜಾರಿ ಕೇವಲ ಶಾಸಕರಾಗಲು ಮಾತ್ರ ಚುನಾವಣೆಗೆ ನಿಂತಿಲ್ಲ. ಅವರು ಮುಂದಿನ ದಿನಗಳಲ್ಲಿ ಮುಂತ್ರಿ ಆಗುವುದರಲ್ಲಿ ಸಂಶಯವಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಸಹ ಮೈತ್ರಿ ಸರ್ಕಾರ ರಚನೆ ಕುರಿತು ಸುಳಿವು ನೀಡಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಹ ಈ ಬಗ್ಗೆ ಮಾತನಾಡಿದ್ದಾರೆ. ಯಾರು, ಏನು ಹೇಳಿದರು? ನೋಡೋಣ ಬನ್ನಿ..

ಎಚ್. ಡಿ. ಕುಮಾರಸ್ವಾಮಿ ಹೇಳಿದ್ದೇನು?
"ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಮತದಾರರು ಕಿಂಗ್ ಮೇಕರ್ಗಳಾಗಿದ್ದಾರೆ. ನಾನು ಅಥವ ಜೆಡಿಎಸ್ ಅಲ್ಲ" ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಹಳೇ ತಪ್ಪನ್ನು ಮಾಡೋದಿಲ್ಲ
"ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದ ದಿನದಿಂದ ಅಧಿಕಾರ ಕಳೆದುಕೊಳ್ಳುವ ತನಕ ಎಚ್. ಡಿ. ಕುಮಾರಸ್ವಾಮಿಗೆ ಹಿಂಸೆ ನೀಡಲಾಯಿತು. ಹಳೇ ತಪ್ಪನ್ನು ಮಾಡೋದಿಲ್ಲ, ಮತ್ತೆ ಮೈತ್ರಿಯಾಗಲು ಸಿದ್ದರಾಮಯ್ಯ ಹಾಗೂ ನಾವು ಒಟ್ಟು ಸೇರಬೇಕಲ್ಲವೇ?" ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದರು.

ಸತೀಶ್ ಜಾರಕಿಹೊಳಿ ಹೇಳಿದ್ದೇನು?
"ಉಪ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದರೆ ಜೆಡಿಎಸ್ ಜೊತೆ ಮಾತುಕತೆ ಆಗುತ್ತೆ. ಅಧಿಕಾರ ಬಿಟ್ಟುಕೊಟ್ಟು ಕೂರಲು ಯಾರೂ ತಯಾರಿಲ್ಲ. ಬಹುಶಃ ಈಗಾಗಲೇ ಬಿಟ್ಟು ಕೊಟ್ಟಿದ್ದೇ ತಪ್ಪಾಗಿದೆ" ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಡಾ. ಜಿ. ಪರಮೇಶ್ವರ್ ಹೇಳಿಕೆ
ಡಾ. ಜಿ. ಪರಮೇಶ್ವರ ಮಾತನಾಡಿ, "ಡಿಸೆಂಬರ್ 9ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಎರಡು ಆಯ್ಕೆಗಳಿವೆ. ಒಂದು ವಿಪಕ್ಷ ಸ್ಥಾನದಲ್ಲಿ ಕೂರುವುದು. ಮತ್ತೊಂದು ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡುವುದು. ಇದರಲ್ಲಿ 2ನೇ ಅವಕಾಶ ಹೆಚ್ಚಿದೆ. ಒಂದು ವೇಳೆ ಅಂಥ ಸಂದರ್ಭ ಬಂದರೆ ಸರ್ಕಾರ ರಚನೆಯ ತೀರ್ಮಾನವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ" ಎಂದರು.

ಬಿ. ಕೆ. ಹರಿಪ್ರಸಾದ್ ಹೇಳಿಕೆ
"ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ. ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಒಪ್ಪಿದರೆ ಮತ್ತೊಮ್ಮೆ ಮೈತ್ರಿ ಸರ್ಕಾರ ರಚಿಸಬಹುದು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು ಖಚಿತ" ಎಂದು ರಾಜ್ಯಸಭಾ ಸದಸ್ಯ ಬಿ. ಕೆ. ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications