ರಮೇಶ್ ಜಾರಕಿಹೊಳಿ ಮನೆಗೆ ವಿಪ್ ತಲುಪಿಸಿದ ಸಿಬ್ಬಂದಿ
ಬೆಂಗಳೂರು, ಜುಲೈ 12 : ಕರ್ನಾಟಕ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೂ ವಿಪ್ ಜಾರಿಗೊಳಿಸಿದೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೂ ವಿಪ್ ತಲುಪಿಸಲಾಗಿದೆ.
ಜುಲೈ 6ರ ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ಮುಂಬೈನ ಹೋಟೆಲ್ನಲ್ಲಿದ್ದಾರೆ. ಆದರೆ, ಶುಕ್ರವಾರ ಬೆಳಗ್ಗೆ ಅವರ ಮನೆಗೆ ವಿಪ್ ತಲುಪಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಅವರ ಸರ್ಕಾರಿ ಬಂಗಲೆಯ ಕಾಪೌಂಡಿಗೆ ಸಿಎಲ್ಪಿ ಸಿಬ್ಬಂದಿ ವಿಪ್ ಅಂಟಿಸಿದರು. ಇಂದಿನ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು,ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಪ್ನಲ್ಲಿ ಸೂಚನೆ ನೀಡಲಾಗಿದೆ.
ವಿಪ್ನಲ್ಲೇನಿದೆ? : ಸದನದಲ್ಲಿ ಮಂಡನೆಯಾಗುವ ವಿತ್ತೀಯ ವಿಧೇಯಕ, ವಿಧೇಯಕ, ಶಾಸನಗಳು ಹಾಗೂ ಇತರೆ ಕಾರ್ಯ ಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರವಾಗಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಈ ವಿಪ್ ಮೂಲಕ ತಿಳಿಸಿದೆ.
ಒಂದು ವೇಳೆ ಸದನಕ್ಕೆ ತಾವು ಹಾಜರಾಗದಿದ್ದಲ್ಲಿ ಅಥವ ಸರ್ಕಾರದ ಪರವಾಗಿ ಮತ ಚಲಾಯಿಸದೇ ಇದ್ದಲ್ಲಿ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಅನುಚ್ಛೇಧ-10ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.
ಜುಲೈ 6ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಅವರು ಅಂದಿನಿಂದ ಮುಂಬೈ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಗುರುವಾರ ಸ್ಪೀಕರ್ ಭೇಟಿಗೆ ಬಂದಿದ್ದ ಅವರು ಮುಂಬೈಗೆ ವಾಪಸ್ ಆಗಿದ್ದಾರೆ.












Click it and Unblock the Notifications