"ರಾಹುಲ್ ಗಾಂಧಿ ಆ ಹುದ್ದೆಯಲ್ಲಿ ಇರುವವರೆಗೂ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ, ದೇಶಕ್ಕೆ ಹಿತ ಇಲ್ಲ"
ಬೆಂಗಳೂರು, ಆಗಸ್ಟ್ 09: ಭಾರತದ ಲೋಕಸಭೆಯ ಒಂದು ದುರದೃಷ್ಟದಂತೆ ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ಟೀಕಿಸಿದ್ದಾರೆ. ರಾಹುಲ್ ಗಾಂಧಿಗೆ ರಚನಾತ್ಮಕತೆಯ ಅರಿವೇ ಇಲ್ಲ. ನಡೆ- ನುಡಿಯಲ್ಲಿ ವಿಶ್ವಾಸಾರ್ಹತೆ ಗಳಿಸದ ಒಬ್ಬ ವ್ಯಕ್ತಿ ಎಂದು ಆರೋಪಿಸಿದರು. ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ಮುಂದುವರೆಯುವ ವರೆಗೆ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ, ದೇಶಕ್ಕೆ ಹಿತ ಇಲ್ಲ ಎಂದು ಹೇಳಿದರು.
ಸಿಗರೇಟ್ ಪೊಟ್ಟಣದಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುತ್ತದೆ. ರಾಹುಲ್ ಗಾಂಧಿಯವರನ್ನು ಲೋಕಸಭೆ ವಿಪಕ್ಷ ನಾಯಕರಾಗಿ ಮುಂದುವರೆಸುವುದು ಕಾಂಗ್ರೆಸ್ ಮಾತ್ರವಲ್ಲದೇ, ದೇಶಕ್ಕೆ ಹಾನಿಕರ. ಹಿಂದಿನ ಲೋಕಸಭಾ ವಿಪಕ್ಷ ನಾಯಕರ ಸಾಮಥ್ರ್ಯ, ತಿಳಿವಳಿಕೆ, ವಿಶ್ವಾಸಾರ್ಹತೆ, ಅಗತ್ಯ ಬಿದ್ದಾಗ ದೇಶಕ್ಕೆ, ಆಳುವ ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ರೀತಿಯನ್ನು ಗಮನಿಸಿ ಹೋಲಿಸಿದರೆ, ಭಾರತದ ಲೋಕಸಭೆಯ ಒಂದು ದುರದೃಷ್ಟದಂತೆ ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿದ್ದಾರೆ ಎಂದು ಟೀಕಿಸಿದರು.

ಲೋಕಸಭೆಯಲ್ಲಿ 1969ರಲ್ಲಿ ರಾಮ್ ಸುಭಾಸ್ ಸಿಂಗ್, 1977ರಲ್ಲಿ ದೇಶ ಕಂಡ ಬಲಿಷ್ಠ ನಾಯಕ ವೈ.ಬಿಚವ್ಹಾಣ್ ವಿಪಕ್ಷ ನಾಯಕರಾಗಿದ್ದರು. ಬಳಿಕ ಸ್ವಲ್ಪ ಕಾಲ ಸಿ.ಎಂ.ಸ್ಟೀಫನ್ ಎಂಬುವರು ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅವರು ಕಲಬುರ್ಗಿಯಿಂದ ಒಂದು ಬಾರಿ ಉಪ ಚುನಾವಣೆಯಲ್ಲಿ ಗೆದ್ದವರು. ಅದಾದ ನಂತರ ವೈ.ಬಿಚವ್ಹಾಣ್ ಕಾರ್ಯವೆಸಗಿದರು. ಜಗಜೀವನ್ ರಾಮ್ ಅವರು ನಮ್ಮ ವಿಪಕ್ಷ ನಾಯಕರಾಗಿದ್ದರು. 1984ರಲ್ಲಿ ಬಿಜೆಪಿ ಎರಡೇ ಸೀಟ್ ಗೆದ್ದಾಗ ದೇಶದಲ್ಲಿ ವಿಪಕ್ಷ ನಾಯಕರು ಇರಲಿಲ್ಲ. 400 ಕ್ಕೂ ಹೆಚ್ಚು ಸೀಟನ್ನು ರಾಜೀವ್ ಅವರ ಪಕ್ಷವೇ ಪಡೆದಿತ್ತು ಎಂದು ಹೇಳಿದರು.
1989ರಲ್ಲಿ ರಾಜೀವ್ ಗಾಂಧಿಯವರು ವಿಪಕ್ಷ ನಾಯಕರಾದರು. 1991ರಲ್ಲಿ ಎಲ್.ಕೆ.ಆಡ್ವಾಣಿ ಅವರು ವಿಪಕ್ಷ ನಾಯಕರಾಗಿದ್ದರು. 1993ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಪಕ್ಷ ನಾಯಕರಾದರು. 1996ರಲ್ಲಿ ನರಸಿಂಹರಾವ್, ಮತ್ತೆ 1998ರವರೆಗೆ ಅಟಲ್ ಬಿಹಾರಿ ವಾಜಪೇಯಿ, 2004ರಲ್ಲಿ ಶರದ್ ಪವಾರ್, 2009ರಲ್ಲಿ ಸುಷ್ಮಾ ಸ್ವರಾಜ್ ಈ ಸ್ಥಾನದಲ್ಲಿದ್ದರು. 2014ರಿಂದ 2019ರವರೆಗೆ ಈ ಹುದ್ದೆ ಇರಲಿಲ್ಲ. ಈಗ ರಾಹುಲ್ ಗಾಂಧಿಯವರು ಈ ದೇಶದ ವಿಪಕ್ಷ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಫ್ರೀಡಂ ಪಾರ್ಕಿನಲ್ಲಿ ರಾಹುಲ್ ಅವರು ಭಾಷಣ ಮಾಡಿದ್ದಾರೆ. ಅಲ್ಲಿಂದ ಚುನಾವಣಾ ಆಯೋಗದ ಕಚೇರಿಗೆ 500 ಮೀಟರ್ ದೂರ. ಭಾಷಣ ಮುಗಿಸಿ ಅಲ್ಲಿಗೆ ಹೋಗಿ ದೂರು ಕೊಡುವುದನ್ನು ಬಿಟ್ಟು ಹಿಟ್ ಆಂಡ್ ರನ್, ಸ್ಪಿಟ್ ಆಂಡ್ ರನ್ (ಉಗಿಯೋದು ಓಡೋದು) ಮಾಡಿದ್ದಾರೆ. ಕೇಳಿದರೆ ನಾನು ಪ್ರತಿಜ್ಞೆ ಪಡೆಯುವುದಿಲ್ಲ, ನನ್ನ ಶಬ್ದಗಳೇ ಪ್ರತಿಜ್ಞೆ ಎನ್ನುತ್ತಾರೆ ಎಂದು ಸುರೇಶ್ ಕುಮಾರ್ ಅವರು ಟೀಕಿಸಿದರು.
ದೂರುವವರು ಇವರು. ದೂರು ಕೊಡಲು ಡಿ.ಕೆ.ಶಿವಕುಮಾರರನ್ನು ಕಳಿಸಿದ್ದಾರೆ. ಒಂದು ಕುಟುಂಬಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾಹುಲ್ ಅವರ ಠೇಂಕಾರ, ಅಹಂಕಾರದ ನಡವಳಿಕೆ ಎಂದು ದೂರಿದರು. ನಾನು ಚುನಾವಣಾ ಆಯೋಗಕ್ಕೆ ದೂರು ಕೊಡುವುದಿಲ್ಲ. ಚೀನಾದ ವಿಷಯ ಬಂದಾಗ ನೀವು ನಿಜವಾದ ಭಾರತೀಯರೇ ಎಂದು ಸುಪ್ರೀಂ ಕೋರ್ಟ್ ಕೇಳಿದರೆ, ಅವರ ಸಹೋದರಿ ಸುಪ್ರೀಂ ಕೋರ್ಟಿನವರು ಯಾರೆಂದು ಪ್ರಶ್ನಿಸುತ್ತಾರೆ ಎಂದು ಆಕ್ಷೇಪಿಸಿದರು.
ರಾಜಾಜಿನಗರ, ಬೆಂಗಳೂರಿಗೆ ಬಹಳಷ್ಟು ಜನರು ವ್ಯಾಪಾರದ ನಿರೀಕ್ಷೆಯಲ್ಲಿ ಶಿವಕಾಶಿಯಿಂದ ಪಟಾಕಿ ತರುತ್ತಾರೆ. ಅವರ ಗ್ರಹಚಾರಕ್ಕೆ ಮಳೆ ಬರುತ್ತದೆ. ಆ ಪಟಾಕಿಯೆಲ್ಲ ಟುಸ್ ಆಗಿಬಿಡುತ್ತದೆ. ನಿನ್ನೆ ರಾಹುಲ್ ಗಾಂಧಿಯವರ ಭಾಷಣ ಶಿವಕಾಶಿಯಿಂದ ತಂದು ಮಳೆಯಲ್ಲಿ ನೆನೆದ ಟುಸ್ ಪಟಾಕಿ ಆಗಿದೆ ಎಂದು ಸುರೇಶ್ ಕುಮಾರ್ ಅವರು ತಿಳಿಸಿದರು.ಈ ಶ್ರೇಷ್ಠ ದೇಶದ ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಯವರನ್ನು ನೋಡಬೇಕಾಗಿ ಬಂದುದು ನಮ್ಮ ದುರದೃಷ್ಟ ಎಂದರು. ಜಾಮೀನು ಪಡೆಯುವಾಗ ಮಾತ್ರ ಇವರಿಗೆ ಕೋರ್ಟ್ ಬೇಕು. ಚುನಾವಣಾ ಆಯೋಗದ ಮುಂದೆ ಪ್ರತಿಜ್ಞೆ ಮಾಡುವುದಿಲ್ಲ ಎನ್ನುವವರು ಕೋರ್ಟಿನಲ್ಲೂ ನಾನು ವಿಪಕ್ಷ ನಾಯಕ; ನಾನು ಪ್ರತಿಜ್ಞೆ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರಾ ಎಂದು ಪ್ರಶ್ನಿಸಿದರು.












Click it and Unblock the Notifications