ಗೋರಕ್ಷಕರ ರಕ್ಷಣೆಗೆ ಪಣ ತೊಟ್ಟ ಸಿದ್ದರಾಮಯ್ಯ ಸರ್ಕಾರ!
ಗೋ ರಕ್ಷಕ ಗುಂಪುಗಳ ನಿಷೇಧ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಸರಕಾರ ಕೇಳಿಕೊಂಡಿದೆ.
ಬೆಂಗಳೂರು, ಮೇ 4: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗೋ ರಕ್ಷಕರ ಹಾವಳಿಯ ಬಗ್ಗೆ ಇಲ್ಲಿಯವರೆಗೆ ಕೇಸರಿ ಪಕ್ಷವನ್ನು ಟೀಕಿಸುತ್ತಾ ಬಂದಿತ್ತು ಕಾಂಗ್ರೆಸ್. ಇದೀಗ ಇದೇ ಪಕ್ಷದ ಆಡಳಿತವಿರುವ ಕರ್ನಾಟಕ ಸರಕಾರ ತಾನೇ ಗೋ ರಕ್ಷಕರ ರಕ್ಷಣೆಗೆ ಮುಂದಾಗಿದೆ.
ಗೋ ರಕ್ಷಕ ಗುಂಪುಗಳ ನಿಷೇಧ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಸರಕಾರ ಕೇಳಿಕೊಂಡಿದೆ. ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕ ಗೋ ವಧೆ ಮತ್ತು ಜಾನುವಾರ ಸಂರಕ್ಷಣಾ ಖಾಯ್ದೆಯಲ್ಲಿ ಗೋ ರಕ್ಷಕರಿಗೆ ನೀಡಲಾಗಿರುವ ವಿನಾಯತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಪಿಐಎಲ್ ಸಲ್ಲಿಸಲಾಗಿತ್ತು.
ಅರ್ಜಿಯಲ್ಲಿ ಕರ್ನಾಟಕ, ಗುಜರಾತ್, ರಾಜಸ್ತಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಸರಕಾರಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿಸಲಾಗಿತ್ತು. ಆದರೆ ಯಾರೂ ಉತ್ತರ ನೀಡದಿದ್ದರೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಪಿಐಎಲ್ ತಿರಸ್ಕರಿಸುವಂತೆ ಕೇಳಿಕೊಂಡಿದೆ.
ರಾಜ್ಯ ಸರಕಾರದ ಕಾನೂನಿನಲ್ಲಿ ಗೋ ರಕ್ಷಕರಿಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ತೆಹ್ಸೀನ್ ಪೂನವಾಲಾ ಸುಪ್ರೀಂ ಕೋರ್ಟಿಗೆ ಪಿಐಎಲ್ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಗೋ ರಕ್ಷಕರು ಹಿಂಸೆ ಮತ್ತು ದಲಿತರು ಹಾಗು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯದಲ್ಲಿ ತೊಡಗಿದ್ದಾರೆ ಎದು ದೂರಿದ್ದರು. ಮಾತ್ರವಲ್ಲ ಈ ಗುಂಪುಗಳನ್ನು ನಿಷೇಧಿಸಬೇಕು ಎಂದು ಕೇಳಿಕೊಂಡಿದ್ದರು.
ಈ ಸಂಬಂಧ ಸುಪ್ರೀಂ ಕೋರ್ಟ್ ಮೇಲೆ ಹೇಳಿದ ರಾಜ್ಯಗಳಿಗೆ ಏಪ್ರಿಲ್ 7ರಂದು ನೊಟೀಸ್ ಜಾರಿ ಮಾಡಿ ಮೂರು ವಾರದಲ್ಲಿ ಉತ್ತರಿಸುವಂತೆ ತಿಳಿಸಿತ್ತು. ಮಾತ್ರವಲ್ಲ ಯಾಕೆ ಈ ಗೋ ರಕ್ಷಕರ ಗುಂಪುಗಳನ್ನು ಬ್ಯಾನ್ ಮಾಡಬಾರದು ಎಂಬುದಾಗಿ ಪ್ರಶ್ನೆಯನ್ನೂ ಕೇಳಿತ್ತು.
ಈ ಸಂಬಂಧ ಉತ್ತರ ನೀಡಿದ ಕರ್ನಾಟಕ ಕಾನೂನಿನಲ್ಲಿ ಒಳ್ಳೆಯ ಉದ್ದೇಶದಿಂದ ಗೋ ರಕ್ಷಣೆ ಮಾಡುವವರಿಗೆ ಮಾತ್ರ ವಿನಾಯಿತಿ ನೀಡಿದ್ದೇವೆ ಎಂದು ಹೇಳಿದೆ. ಮಾತ್ರವಲ್ಲ ಹಿಂಸೆ ಹಾಗೂ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಗೋ ರಕ್ಷಕರಿಗೆ ವಿನಾಯಿತಿ ನೀಡಿಲ್ಲ ಎಂದು ಹೇಳಿದೆ.
ಇದರ ಜತೆಗೆ ಸರಕಾರಿ ಸಂಸ್ಥೆಯಿಂದ ಮಾನ್ಯತೆ ಪಡೆದ ಸಂಸ್ಥೆಗಳಿಗೆ ಮಾತ್ರ ಇದರಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂದು ಕರ್ನಾಟಕ ಸರಕಾರ ಸ್ಪಷ್ಟಪಡಿಸಿದೆ. ನೋಂದಣಿ ಮಾಡಿಕೊಳ್ಳದೆ ತಮ್ಮಷ್ಟಕ್ಕೆ ಗೋ ರಕ್ಷಣೆಯಲ್ಲಿ ತೊಡಗಿರುವವರಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದೆ. (ಒನ್ ಇಂಡಿಯಾ ಸುದ್ದಿ)