Cauvery Water: ರೈತರು ಸುಪ್ರೀಂ ಕೋರ್ಟ್ ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿ?: ಬೊಮ್ಮಾಯಿ ಪ್ರಶ್ನೆ
ಬೆಂಗಳೂರು, ಆಗಸ್ಟ್ 17: ತಮಿಳು ನಾಡುಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ. ಕಾವೇರಿ ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂ ಕೊರ್ಟ್ ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಕಾವೇರಿ ನೀರು ಹಂಚಿಕೆ ಬಗ್ಗೆ ಮಾತನಾಡಿದ ಅವರು, ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೀಗದ ಕೈ ನಮ್ಮ ಕಡೆ ಇಲ್ಲ ಎಂದು ಹೇಳಿದ್ದಾರೆ. ನಮ್ಮ ರಾಜ್ಯಕ್ಕೆ ಹಕ್ಕಿದೆ, ನೀರು ಸಂಗ್ರಹವಾದ ಡ್ಯಾಮ್ ನಮ್ಮ ರಾಜ್ಯದಲ್ಲಿದ್ದು, ನಮ್ಮ ಹಕ್ಕನ್ನು ಇವರು ಬಿಟ್ಟು ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಡ್ಯಾಮ್ಗಳು ನಮ್ಮ ರಾಜ್ಯದಲ್ಲಿವೆ ಎಂಬ ಮಾಹಿತಿ ಅವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮ ಹಕ್ಕನ್ನು ಅವರಿಗೆ ಬಿಟ್ಟು ಕೊಟ್ಟು, ತಾವು ಮಾಡಿದ ತಪ್ಪಿಗೆ ರೈತರಿಗೆ ಸುಪ್ರೀಂ ಕೋರ್ಟಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ರೈತರು ಸುಪ್ರೀಂಕೋರ್ಟಿಗೆ ಹೋಗಬೇಕಾದರೆ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕಿತ್ತು?. ಇವರು ಯಾಕೆ ಸರಕಾರದಲ್ಲಿ ಅಧಿಕಾರ ಮಾಡಬೇಕು. ನೀವು ರಕ್ಷಣೆ ಮಾಡಲಿ ಎಂದೇ ಜನರು ನಿಮ್ಮನ್ನ ಆಯ್ಕೆ ಮಾಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಜನರು ಶಾಸಕರನ್ನು ಕೊಟ್ಟಿದ್ದಾರೆ ಎಂದರು.
ರೈತರನ ರಕ್ಷಣೆ ಮಾಡದೇ ಇದ್ದರೆ ನೀವುಗಳು ಯಾಕೆ ಬೇಕು?. ಇದರಲ್ಲಿ ಏನೋ ರಾಜಕೀಯ ಹಿತಾಸಕ್ತಿ ಇದೆ ಎಂದು ಕಾಣಿಸುತ್ತಿದೆ. ನಾನು ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ. ನೀವು ರಾಜಯಕೀಯ ಹಿತಾಸಕ್ತಿಯನ್ನು ಕಾಪಾಡುವ ರಾಜಕಾರಣ ಮಾಡಿದರೆ, ನಾವು ರೈತರ ರಕ್ಷಣೆಯನ್ನು ಮಾಡುತ್ತೇವೆ. ರೈತರ ರಕ್ಷಣೆ ಮಾಡದೆ ಇವರು ನಿಜವಾದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಕುರುವೈ ಬೆಳೆಗೆ ಅಗತ್ಯಕ್ಕಿಂತ ಹೆಚ್ಚು ನೀರು
ಕಾವೇರಿ ಜಲಾನಯನದ ವಿವಾದ ಹೊಸದಲ್ಲ ಟ್ರಿಬ್ಯುನಲ್ ಆದೇಶ ಆಗಿದೆ. ಯಾವ ರೈತರು ಎಷ್ಟು ಬೆಳೆ ಬೆಳೆಯಬೇಕು ಎಂದು ಹಿಂದೆಯೇ ನಿರ್ಧಾರ ಆಗಿದೆ. ತಮಿಳುನಾಡು ರೈತರು 32 ಟಿಎಂಸಿ ನೀರು ಬಳಕೆ ಮಾಡಿಕೊಂಡು 1.80 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬೇಕು ಎಂಬ ನಿಯಮ ಮಾಡಲಾಗಿದೆ.

ಆದರೆ ತಮಿಳುನಾಡಿನವರು 60 ಟಿಎಂಸಿ ನೀರು ಬಳಕೆ ಮಾಡಿಕೊಂಡು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದಾರೆ. ಅದನ್ನು ನಮ್ಮ ರಾಜ್ಯ ಸರ್ಕಾರ ಪ್ರಶ್ನಿಸಬೇಕಿದೆ. ಆದರೆ ಕಾಂಗ್ರೆಸ್ನವರು ಆ ಬಗ್ಗೆ ಪ್ರಶ್ನೆಯೇ ಮಾಡುತ್ತಿಲ್ಲ. ನಮ್ಮ ಜಲಾಶಯದ ನೀರನ್ನು ನಮ್ಮ ರೈತರಿಗೆ ಸರಿಯಾದ ಸಮಯದಲ್ಲಿ ಬಿಡಲಿಲ್ಲ. ಈಗ ತಮಿಳು ನಾಡಿನವರು ನೀರು ಕೇಳುತ್ತಿದ್ದಾರೆ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ತಿಳಿಸಿದರು.
ರೈತರ ಹಿತ ಬಲಿ ಕೊಡುತ್ತಿರುವ ಸರ್ಕಾರ
ಮುಖ್ಯಮಂತ್ರಿ ಗಳು ನೀರು ಬಿಡುವುದಿಲ್ಲ ಎಂದು ಹೇಳಿದ್ದರೆ, ಉಪಮುಖ್ಯಮಂತ್ರಿಗಳು ನಾವು ಲೀಗಲ್ ಅಡ್ವೈಸರ್ ಮಾತು ಕೇಳುತ್ತೇವೆ ಎಂದು ಹೇಳುತ್ತಾರೆ. ಸರ್ಕಾರ ಲೀಗಲ್ ಟೀಂಗೆ ಸುಪ್ರೀಂ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡಲು ಹೇಳಬೇಕು. 10 ಟಿಎಂಸಿ ನೀರು ಬೀಡಲು ಮುಂದಾಗಿದ್ದು ಈ ಸರ್ಕಾರ ರಾಜ್ಯದ ರೈತರ ಹಿತ ಬಲಿಕೊಡುತ್ತಿದೆ.
ರೈತರ ಹಿತ ಕಾಯಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ 'ಇಂಡಿಯಾ ಒಕ್ಕೂಟ' ಕಟ್ಟಿಕೊಂಡಿದ್ದು, ಡಿಎಂಕೆ ಸರ್ಕಾರದ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಯಾರೂ ಬಿಜೆಪಿ ಬಿಡುವುದಿಲ್ಲ
ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಹೋಗುತ್ತಾರೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಕೇಳಿ ಬಂದಿರುವುದರಿಂದ ಅದನ್ನು ಡೈವರ್ಟ್ ಮಾಡಲು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ಥಳಿಯವಾಗಿ ಕೆಲವು ಸಮಸ್ಯೆ ಇರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಹರಿಸಲಾಗುವುದು. ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.












Click it and Unblock the Notifications