ಗ್ಯಾರಂಟಿ ಯೋಜನೆಗಳು; ಹೊಸ ಬಿಪಿಎಲ್ ಕಾರ್ಡ್ಗಾಗಿ ಜನರ ಕ್ಯೂ!
ಬೆಂಗಳೂರು, ಮೇ 29; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಚಿವ ಸಂಪುಟ ವಿಸ್ತರಣೆಯಾಗಿ, ಹೊಸ ಸಚಿವರಿಗೆ ಖಾತೆಯೂ ಹಂಚಿಕೆಯಾಗಿದೆ. ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ಕುರಿತಾಗಿ ಚರ್ಚೆಗಳು ಆರಂಭವಾಗಿವೆ. ಯಾರಿಗೆ ಗ್ಯಾರಂಟಿ ಸಿಗಲಿದೆ?, ಮಾನದಂಡಗಳೇನು? ಎಂಬುದು ಸದ್ಯದ ವಿಚಾರ.
ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜನರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಜನರು ಆರಂಭಿಸಿದ್ದಾರೆ. ಕಾರ್ಡ್ ಮಾಡಿಸಲು ಸೈಬರ್ ಸೆಂಟರ್ಗಳತ್ತ ಮುಖ ಮಾಡಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಸಿಗಲಿವೆ ಎಂಬ ಸುದ್ದಿಯೇ ಬಿಪಿಎಲ್ ಕಾರ್ಡ್ಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಪ್ರತಿದಿನ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ಬಿಪಿಎಲ್ ಕಾರ್ಡ್ಗಾಗಿ ಸಲ್ಲಿಕೆಯಾಗುತ್ತಿವೆ.
ಬೆಳಗಾವಿಯಲ್ಲಿ ಹೆಚ್ಚು; ಸದ್ಯದ ಮಾಹಿತಿ ಪ್ರಕಾರ ಹೊಸ ಬಿಪಿಎಲ್ ಕಾರ್ಡ್ಗಾಗಿ ಬೆಳಗಾವಿಯಲ್ಲಿ 27,411, ವಿಜಯಪುರದಲ್ಲಿ 17,228, ಬೆಂಗಳೂರು ನಗರದಲ್ಲಿ 12,765 ಮತ್ತು ಬೀದರ್ನಲ್ಲಿ 12,498 ಅರ್ಜಿಗಳು ಹೊಸ ಕಾರ್ಡ್ಗಾಗಿ ಸಲ್ಲಿಕೆಯಾಗಿವೆ. ಪ್ರತಿ ದಿನ ಹೊಸ ಅರ್ಜಿ ದಾಖಲಾಗುತ್ತಲೇ ಇದ್ದು, ಅಧಿಕಾರಿಗಳಿಗೆ ತಲೆ ನೋವಾಗಿದೆ.

ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯವೂ ಒಂದು. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅಧಿಕೃತವಾಗಿ ಇದು ಇನ್ನೂ ಜಾರಿಗೆ ಬಂದಿಲ್ಲ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾರ್ಚ್ 29ರಂದು ಅಧಿಸೂಚನೆ ಪ್ರಕಟವಾಗಿತ್ತು. ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಆಗ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಈ ನೀತಿ ಸಂಹಿತೆ ತೆರವುಗೊಂಡ ಬಳಿಕ ಮತ್ತೆ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಪಡಿತರ ಧಾನ್ಯ ಪಡೆದುಕೊಳ್ಳುವುದಕ್ಕಾಗಿ ಬಡವರಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಿಸಲು ಸಾಧ್ಯ ಎಂದು ಆಹಾರ ಇಲಾಖೆ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಈಗ ಬಂದಿರುವ ಅರ್ಜಿಗಳನ್ನು ಜುಲೈ ನಂತರ ಪರಿಶೀಲನೆ ಮಾಡಿ, ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಜಿಗಳ ಸಂಖ್ಯೆ ಹೆಚ್ಚಳ; ಪಡಿತರ ಕಾರ್ಡ್ ಪಡೆಯಲು ಅದರಲ್ಲೂ ಬಿಪಿಎಲ್ ಕಾರ್ಡ್ ಪಡೆಯಲು ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಇಲಾಖೆಯ ಮಾಹಿತಿ ಅನ್ವಯ 2017ರಲ್ಲಿ 2 ಲಕ್ಷ, 2018ರಲ್ಲಿ 5 ಲಕ್ಷ, 2019ರಲ್ಲಿ 3 ಲಕ್ಷ ಮತ್ತು 2020 ರಿಂದ 2023ರವರೆಗೂ 8 ಲಕ್ಷದಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೂರು ತಿಂಗಳ ಹಿಂದೆ ಇಲಾಖೆ ಒಂದೂವರೆ ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ ಮಾಡಿದೆ.
ಈಗ ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳ ಪೈಕಿ 'ಗೃಹಲಕ್ಷ್ಮೀ' ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯಧನ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಪಡೆಯಲು ಬಿಪಿಎಲ್ ಕಾರ್ಡ್ ಅಗತ್ಯ ಎಂಬ ಸುದ್ದಿ ಹಬ್ಬಿದೆ. ಆದ್ದರಿಂದ ಈಗ ಹೊಸ ಕಾರ್ಡ್ಗಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಕಳೆದ 2 ವರ್ಷದಿಂದ ಇಲ್ಲಿಯವರೆಗೆ 2.87 ಲಕ್ಷ ಬಿಪಿಎಲ್ ಕಾರ್ಡ್, 46,576 ಎಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಕೆಯಾಗಿದೆ. ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ನೀಡಿರುವ ಮಿತಿಯನ್ನು ರಾಜ್ಯ ಈಗಾಗಲೇ ತಲುಪಿದೆ. ಆದ್ದರಿಂದ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ಹಣಕಾಸು ಇಲಾಖೆ ಅನುಮತಿ ಪಡೆಯಬೇಕಿದೆ.
ಕಾಂಗ್ರೆಸ್ ಘೋಷಣೆ ಮಾಡಿರುವ 5 ಗ್ಯಾರಂಟಿಗಳು ಇನ್ನೂ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ. ಜೂನ್ 1ರಂದು ಮತ್ತೆ ಸಚಿವ ಸಂಪುಟ ಸಭೆ ಕರೆದಿದ್ದು, ಗ್ಯಾರಂಟಿಗಳ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.












Click it and Unblock the Notifications