ಕಾಂಗ್ರೆಸ್ ಕಾರ್ಯದರ್ಶಿಗೆ ಮಹಿಳಾ ಕಾರ್ಪೊರೇಟರ್ನಿಂದ ಥಳಿತ
ದಕ್ಷಿಣ ಕನ್ನಡ, ಮಾರ್ಚ್ 13: ಶಾಸಕರ ಮನೆಯಲ್ಲೇ ತಮ್ಮದೇ ಪಕ್ಷದ ಮಹಿಳಾ ಕಾರ್ಪೊರೇಟರ್ ಜೊತೆ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್ ಕಾರ್ಯದರ್ಶಿಯನ್ನು ಮಹಿಳಾ ಕಾರ್ಪೊರೇಟರ್ ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಉತ್ತರ ಕ್ಷೇತ್ರದ ಕಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ಅವರ ನಿವಾಸ ಕಮ್ ಕಚೇರಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಭೆಯ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರು ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೇ ಅಲ್ಲಿಯೇ ಪ್ರತಿಭಾ ಅವರು ಅಬ್ದುಲ್ ಅವರಿಗೆ ಥಳಿಸಿದ್ದಾರೆ.
ಪ್ರತಿಭಾ ಅವರು ಹೊಡೆಯಲು ಶುರು ಮಾಡುತ್ತಿದ್ದಂತೆ ಅಬ್ದುಲ್ ಅಲ್ಲಿಂದ ಪೇರಿ ಕಿತ್ತಿದ್ದಾನೆ, ಆದರೆ ಅಂಗಳಕ್ಕೂ ಬಂದು ಹಿಡಿದು ಅಬ್ದುಲ್ನನ್ನು ಥಳಿಸಲಾಗಿದೆ. ಪ್ರತಿಭಾ ಅವರಿಗೆ ಅವರ ಬೆಂಬಲಿಗರೂ ಸಾಥ್ ನೀಡಿ ಅಬ್ದುಲ್ನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಮಾಡಿದ ಪಾಪಕ್ಕೆ ಏಟು ತಿಂದ ಅಬ್ದುಲ್ ಈಗ ಆಸ್ಪತ್ರೆ ಸೇರಿದ್ದಾನೆ. ಅಬ್ದುಲ್ ಸತ್ತಾರ್ನ ಕೈ ಮುರಿದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯಾವುದೇ ದೂರು ಇನ್ನೂ ದಾಖಲಾಗಿಲ್ಲ, ಪೊಲೀಸರು ಸ್ವತಃ ದೂರು ದಾಖಲಿಸಿಕೊಳ್ಳುವ ಸಂಭವ ಇದೆ.
ಅದ್ಬುಲ್ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂಚಿನಿಂದಲೂ ಅಸಮಧಾನ ಇತ್ತು ಎನ್ನಲಾಗಿದ್ದು, ಈಗ ಆತನಿಗೆ ತಕ್ಕ ಶಾಸ್ತಿಯಾಗಿದೆ ಎಂದು ಮಂಗಳೂರು ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಶಾಸಕ ಮೊಯಿದ್ದೀನ್ ಬಾವಾ ಅವರ ಮನೆಯಲ್ಲೇ ಈ ಘಟನೆ ನಡೆದಿದೆ. ಆದರೆ ಘಟನೆ ಬಗ್ಗೆ ಬಾವಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.