105 ಮತಗಳ ಅಂತರದಲ್ಲಿ ಗೆದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ!
ಬೆಂಗಳೂರು, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಘೋಷಣೆಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯದ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿದೆ.
ಬೆಂಗಳೂರಿನ ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಜಯಗಳಿಸಿದ್ದಾರೆ. ಆದರೆ ಈ ಜಯ ಅಷ್ಟು ಸುಲಭವಾಗಿರಲಿಲ್ಲ. ಅವರ ಗೆಲುವಿನ ಅಂತ ಕೇವಲ 105 ಮತಗಳು.

ಬಿಜೆಪಿಯ ಸಪ್ತಗಿರಿ ಗೌಡ ಎ. ಆರ್. ದಿನೇಶ್ ಗುಂಡೂರಾವ್ಗೆ ಪ್ರಬಲ ಪೈಪೋಟಿ ನೀಡಿದರು. ಮತ ಎಣಿಕೆ ಪೂರ್ಣಗೊಂಡಾಗ ಸಪ್ತಗಿರಿ ಗೌಡ ಮತ್ತು ದಿನೇಶ್ ಗುಂಡೂರಾವ್ ನಡುವಿನ ಗೆಲುವಿನ ಅಂತರ 113 ಮತಗಳಾಗಿತ್ತು. ಆದ್ದರಿಂದ ಮರು ಎಣಿಕೆಗೆ ಮನವಿ ಮಾಡಲಾಯಿತು.
105 ಮತಗಳ ಅಂತರ; ಚುನಾವಣೆ ಫಲಿತಾಂಶದ ಮರು ಮತ ಎಣಿಕೆ ಬಳಿಕ ದಿನೇಶ್ ಗುಂಡೂರಾವ್ 54,118 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿಯ ಸಪ್ತಗಿರಿ ಗೌಡ 54013 ಮತಗಳನ್ನು ಪಡೆದು ಸೋಲು ಕಂಡರು. ಗೆಲುವಿನ ಅಂತರ ಕೇವಲ 105 ಮತಗಳು.
ಚುನಾವಣಾ ಕಣದಲ್ಲಿದ್ದ ಜೆಡಿಎಸ್ನ ಎನ್. ನಾರಾಯಣ ಸ್ವಾಮಿ 12857 ಮತಗಳನ್ನ್ಉ ಪಡೆದರು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಂ. ಕೃಷ್ಣಯ್ಯ ಶೆಟ್ಟಿ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಅವರು ಪಡೆದ ಮತಗಳು ಕೇವಲ 6871.
ಗಾಂಧಿ ನಗರ ಎಂದರೆ ತಕ್ಷಣ ನೆನಪಾಗುವುದು ಕನ್ನಡ ಚಿತ್ರರಂಗ. ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕ್ಷೇತ್ರವಿದು. 1999 ರಿಂದ 2018ರ ತನಕ ಕಾಂಗ್ರೆಸ್ನ ದಿನೇಶ್ ಗುಂಡೂರಾವ್ ಸತತವಾಗಿ ಜಯಗಳಿಸುವ ಮೂಲಕ ಕ್ಷೇತ್ರವನ್ನು ಪಕ್ಷದ ಭದ್ರಕೋಟೆಯಾಗಿ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಗೆಲುವು ಸಾಧಿಸಿದ್ದಾರೆ.












Click it and Unblock the Notifications