ಸದನದಲ್ಲಿ ಸಿಡಿ ಗದ್ದಲ; ಸಿಎಂ ಮನವಿಗೂ ಒಪ್ಪದ ಕಾಂಗ್ರೆಸ್
ಬೆಂಗಳೂರು, ಮಾರ್ಚ್ 24: ಕಾಂಗ್ರೆಸ್ ಸದಸ್ಯರು ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಬಿಗಿಪಟ್ಟನ್ನು ಮುಂದುವರೆಸಿದ್ದಾರೆ. ವಿಧಾನಸಭೆಯಲ್ಲಿ ಗದ್ದಲ ಮುಂದುವರೆದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನವಿಗೂ ಸದಸ್ಯರು ಸ್ಪಂದಿಸಿಲ್ಲ.
ಬುಧವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. ಕೈಯಲ್ಲಿ ಸಿಡಿ ಹಿಡಿದು, ಸಿಡಿ ಸರ್ಕಾರ, ಅನ್ಯಾಯ ಅನ್ಯಾಯ, ನ್ಯಾಯಬೇಕು ಎಂದು ಘೋಷಣೆಗಳನ್ನು ಕೂಗಿ ಸದಸನದ ಬಾವಿಗೆ ಆಗಮಿಸಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರರಕರಣ ದಾಖಲು ಮಾಡಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ಕೋರ್ಟ್ ಮೊರೆ ಹೋಗಿರುವ 6 ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡುವೆಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಜೆಟ್ ಮೇಲಿನ ಚರ್ಚೆಗೆ ಸದನಕ್ಕೆ ಲಿಖಿತ ಉತ್ತರವನ್ನು ನೀಡಿದರು. ಪ್ರತಿಭಟನೆ ಮಾಡಬೇಡಿ ಎಂದು ಹಲವು ಬಾರಿ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿದರು.
ಮಂಗಳವಾರ ಇಡೀ ದಿನದ ಕಲಾಪ ಸಿಡಿ ಗದ್ದಲದಿಂದಾಗಿ ವ್ಯರ್ಥವಾಗಿತ್ತು. ಇಂದು ಸಹ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದೆ. ನಿಗದಿಯಂತೆ ಮಾರ್ಚ್ 31ರ ತನಕ ಕಲಾಪ ನಡೆಯಬೇಕಿದೆ. ಪ್ರತಿಭಟನೆ ಮುಂದುವರೆದರೆ ಕಲಾಪವನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ.












Click it and Unblock the Notifications