ಸಚಿವ ಪರಮೇಶ್ವರ್ ಕರೆದಿದ್ದ ಡಿನ್ನರ್ ಸಭೆ ರದ್ದು; ಸ್ಪಷ್ಟನೆ ನೀಡಿದ ಮಹದೇವಪ್ಪ
ಗೃಹ ಸಚಿವ ಡಾ. ಜಿ ಪರಮೇಶ್ವರ್ ಕರೆದಿದ್ದ ಔತಣಕೂಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ. ಬುಧವಾರ ಕಾಂಗ್ರೆಸ್ ಪಕ್ಷದಲ್ಲಿರುವ ಎಸ್ಸಿ, ಎಸ್ಟಿ ಶಾಸಕರು, ಸಚಿವರು, ಮುಖಂಡರಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಹೈಕಮಾಂಡ್ ಸೂಚನೆ ಕೊಟ್ಟ ಬೆನ್ನಲ್ಲೇ ಔತಣಕೂಟ ರದ್ದು ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಕುಟುಂಬದ ಜೊತೆ ವಿದೇಶ ಪ್ರವಾಸದಲ್ಲಿರುವಾಗಲೇ ಕಾಂಗ್ರೆಸ್ನಲ್ಲಿ ಡಿನ್ನರ್ ಪಾರ್ಟಿ ರಾಜಕೀಯ ಶುರುವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದಿದ್ದ ಔತಣಕೂಟ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಒಂದು ಕಡೆ ಸೇರಿ ಔತಣಕೂಟ ನಡೆಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಸಿದ್ದರಾಮಯ್ಯ ಔತಣಕೂಟದ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಎಸ್ಸಿ, ಎಸ್ಟಿ ಶಾಸಕರು, ಸಚಿವರನ್ನು ಒಂದೆಡೆ ಸೇರಿಸಲು ಔತಣಕೂಟ ಏರ್ಪಡಿಸಿದ್ದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಬುಧವಾರ ಸಂಜೆ ಎಸ್ಸಿ, ಎಸ್ಟಿ ಸಚಿವರು, ಶಾಸಕರು ಮತ್ತು ಮುಖಂಡರಿಗೆ ಔತಣಕೂಟ ಏರ್ಪಡಿಸುತ್ತಿದ್ದು, ಕಾಂಗ್ರೆಸ್ ಬ್ಯಾನರ್ನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವುದಾಗಿ ಹೇಳಿದ್ದ ಪರಮೇಶ್ವರ್, ಇದು ದಲಿತರನ್ನು ಒಗ್ಗೂಡಿಸಲು ಮಾಡುತ್ತಿರುವ ಕೆಲಸ ಎಂದು ಹೇಳಿದ್ದರು. ಸಮಾವೇಶವನ್ನು ಎಲ್ಲಿ, ಯಾವಾಗ ನಡೆಸಬೇಕು ಎಂದು ಚರ್ಚಿಸಲು ಇದು ಪೂರ್ವ ಸಿದ್ಧತಾ ಸಭೆಯಾಗಿದೆ ಎಂದು ಹೇಳಿದ್ದರು.
ಅದರೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಬುಧವಾರ ಆಯೋಜಿಸಿದ್ದ ಔತಣಕೂಟವನ್ನು ರದ್ದು ಮಾಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ನಿರ್ದೇಶನದ ಬೆನ್ನಲ್ಲೇ ಬುಧವಾರದ ಔತಣಕೂಟವನ್ನು ಮುಂದೂಡಿರುವುದಾಗಿ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಬದಲಾವಣೆ ಕೂಗು?
ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಈಗ ಗುಟ್ಟಾಗೇನೂ ಉಳಿದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಗಟ್ಟಿಯಾಗಿ ಕೂತಿದ್ದರೂ, ಸಿಎಂ ಬದಲಾವಣೆ ಕೂಗು ಆಗಾಗ ಕೇಳಿಬರುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದರೆ ಈ ಕಡೆ ದಲಿತ ಸಿಎಂ ಕೂಗು ಕೂಡ ಜೋರಾಗಿದೆ.
ಎಸ್ಸಿ ಎಸ್ಟಿ ಶಾಸಕರು, ಸಚಿವರ ಔತಣಕೂಟದ ಬಗ್ಗೆ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೂಡಲೇ ವೇಣುಗೋಪಾಲ್ ಅವರಿಗೆ ಫೋನಾಯಿಸಿದ್ದು ಇಂತಹ ಸಭೆಗಳನ್ನು ನಿಲ್ಲಿಸದೇ ಇದ್ದರೆ ರಾಜ್ಯ ರಾಜಕೀಯದಲ್ಲಿ ವದಂತಿಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ಡಿಎಚ್ ವರದಿ ಮಾಡಿದೆ.
ಹೆಚ್ಚು ಮಹತ್ವ ನೀಡಬೇಕಿಲ್ಲ
ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಔತಣಕೂಟ ಮತ್ತು ಬುಧವಾರ ನಡೆಯಬೇಕಿದ್ದ ಔತಣಕೂಟದ ಬಗ್ಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ. ಊಟಕ್ಕೆ ಎಂದು ಸೇರಿದರೆ ಸಿಎಂ ಬದಲಾವಣೆ ಚರ್ಚೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಚರ್ಚೆ ಎಂದು ಮಾಧ್ಯಮಗಳೇ ಗೊಂದಲ ಸೃಷ್ಟಿಸುತ್ತಿದ್ದಾರೆ.
ಸಿಎಂ ಸ್ಥಾನಕ್ಕೆ ಯಾವುದೇ ಅಪಾಯವಿಲ್ಲ, ನಾನಾಗಲೀ, ಪರಮೇಶ್ವರ್ ಆಗಲೀ ಪಕ್ಷಕ್ಕೆ ಹೊಸಬರೂ ಅಲ್ಲ, ಸಿಎಂ ಹುದ್ದೆ ಮೇಲೆ ದೃಷ್ಟಿ ಇಟ್ಟುಕೊಂಡು ಕೂತಿಲ್ಲ, ದಲಿತ ಸಮುದಾಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದು ಅವುಗಳ ಬಗ್ಗೆ ಚರ್ಚೆ ಮಾಡಲು ಪರಮೇಶ್ವರ್ ಮೀಟಿಂಗ್ ಕರೆದಿದ್ದರು ಎಂದರು.












Click it and Unblock the Notifications