ರಾಹುಲ್ಗೆ ಮಕ್ಕಳಾಗಲ್ಲ ಎಂಬ ನಳೀನ್ ಹೇಳಿಕೆ: ಆಟಕ್ಕುಂಟು ಲೆಕ್ಕಕ್ಕಿಲ್ಲದ ಜೋಕರ್ 'ಕಟೀಲ್' ಎಂದ ಸುರ್ಜೇವಾಲಾ
ಕರ್ನಾಟಕ ಬಿಜೆಪಿ ಘಟಕದ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಹುಲ್ ಕುರಿತು ವಿವಾದಿತ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರು, ಮಾರ್ಚ್ 06: ಕರ್ನಾಟಕದ ಚುನಾವಣೆಗಳು ಹತ್ತಿರದಲ್ಲೇ ಇವೆ. ಈ ಸಮಯದಲ್ಲಿ ರಾಜಕೀಯ ನಾಯಕರ ಆರೋಪ ಹಾಗೂ ಪ್ರತ್ಯಾರೋಪಗಳು ಜೋರಾಗಿಯೇ ಕೇಳಿಬರುತ್ತಿವೆ. ಕರ್ನಾಟಕ ಬಿಜೆಪಿ ಘಟಕದ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಹುಲ್ ಕುರಿತು ವಿವಾದಿತ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ. ನಳೀನ್ ಕುಮಾರ್ ಕಟೀಲ್ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹರಿಹಾಯ್ದಿದ್ದಾರೆ.
ಈ ವಿಚಾರವಾಗಿ ಕನ್ನಡದಲ್ಲೇ ಟ್ವೀಟ್ ಮಾಡಿರುವ ಅವರು, 'ಕರ್ನಾಟಕದ ಬಿಜೆಪಿ ಸರ್ಕಸ್ ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಜೋಕರ್ ಒಬ್ಬರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ಯಾರು ಅವರತ್ತ ಗಮನ ಹರಿಸದ ಕಾರಣ ಅವಿವೇಕದ ಹೇಳಿಕೆಯನ್ನು ನೀಡುತ್ತಿರುತ್ತಾರೆ. ನೀವು ಸರಿಯಾಗಿ ಊಹಿಸಿದ್ದಿರಿ - ನಳೀನ್ ಕುಮಾರ್ ಕಟೀಲ್. ಇಂತಹವರನ್ನು ಗಂಭೀರವಾಗಿ ಪರಿಗಣಿಸಿಬಾರದು' ಎಂದೂ ಸುರ್ಜೇವಾಲ್ ಹೇಳಿದ್ದಾರೆ.

'ಇಂತಹ ಅವಿವೇಕದ ವಿಚಾರಧಾರೆಗಳು ಬಿಜೆಪಿಯ ವಿಶಿಷ್ಟ ಗುಣ ಲಕ್ಷಣಗಳು. ಅವರು ವಿಜ್ಞಾನ ಮತ್ತು ವಿಜ್ಞಾನಿಗಳನ್ನು ಅವಮಾನಿಸುತ್ತಾರೆ. ಅವರು ವೈಜ್ಞಾನಿಕತೆಯನ್ನು ವಿರೋಧಿಸುತ್ತಾರೆ. ಅವರು ಮೂಡನಂಬಿಕೆಗಳನ್ನು ಉತ್ತೇಜಿಸುತ್ತಾರೆ. ಅವರು ಮಾನಹಾನಿ ಮಾಡುವುದನ್ನು ಉತ್ತೇಜಿಸುತ್ತಾರೆ. ಅವರನ್ನು ಇತಿಹಾಸದ ಕಸದ ಬುಟ್ಟಿಗೆ ಎಸೆಯಬೇಕು' ಎಂದೂ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಹೇಳಿಕೆ ನೀಡಿರುವ ನಳೀನ್ ಕಟೀಲ್, 'ರಾಹುಲ್ ಗಾಂಧಿ ಹಾಗೂ ಹಾಗೂ ಸಿದ್ದರಾಮಯ್ಯ ಕೋವಿಡ್ 19 ಲಸಿಕೆಗಳನ್ನು ತೆಗೆದುಕೊಳ್ಳಬೇಡಿ ಎಂದು ಜನರಿಗೆ ಹೇಳಿದ್ದರು. ಅದು ಪುರುಷತ್ವವನ್ನು ನಾಶಮಾಡುತ್ತದೆ ಎಂದು ಅವರು ತಿಳಿಸಿದ್ದರು. ಆದರೆ ಅವರು ಅದನ್ನು ರಹಸ್ಯವಾಗಿ ತೆಗೆದುಕೊಂಡರು. ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ. ಇದಕ್ಕೆ ಕಾರಣ, ಅವರಿಗೆ ಮಕ್ಕಳಾಗುವುದಿಲ್ಲ' ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಚುನಾವಣೆಯಲ್ಲಿ ಜನರ ಮುಂದಿಡಲು ಸಾಧನೆಯ ರಿಪೋರ್ಟ್ ಕಾರ್ಡ್ ಇಲ್ಲದ ಬಿಜೆಪಿ ನಾಯಕರು ಸೊಂಟದ ಕೆಳಗಿನ ಹೊಲಸು ರಾಜಕೀಯಕ್ಕೆ ಮುಂದಾಗಿದ್ದಾರೆ. ರಾಜಕೀಯದಲ್ಲಿ ರಚನಾತ್ಮಕ ಟೀಕೆಗಳಿರಬೇಕು ಆದರೆ ಬಿಜೆಪಿಯ ನಾಲಾಯಕ್ ನಾಯಕರು ಕೀಳು ನಿಂದನೆಗಳನ್ನೇ ತಮ್ಮ ಸಾಧನೆ ಹಾಗೂ ರಾಜಕೀಯ ಚತುರತೆ ಎಂದುಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

'ಮೆದುಳಿಗೂ ನಾಲಿಗೆಗೂ ಕನೆಕ್ಷನ್ ತಪ್ಪಿಹೋರುವ ನಳೀನ್ ಕುಮಾರ್ ಕಟೀಲ್ ಎಂಬ ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆಯ ಅಗತ್ಯವಿದೆ. ಕಟೀಲ್ ಅವರ ಮಾನಸಿಕ ಚಿಕಿತ್ಸೆಯ ವೆಚ್ಚವನ್ನು ಕಾಂಗ್ರೆಸ್ ಭರಿಸಲು ತಯಾರಿದೆ. ಬಿಎಸ್ ಬೊಮ್ಮಾಯಿ ಅವರೇ, ಹುಚ್ಚು ಹೆಚ್ಚಾಗುವ ಮುನ್ನ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ. ಇಲ್ಲವಾದಲ್ಲಿ ರಾಜಕೀಯ ವ್ಯವಸ್ಥೆಗೆ ಕಳಂಕ ತಪ್ಪದು' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.












Click it and Unblock the Notifications