ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ರೂ. 2000 : ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಘೋಷಣೆ
ಬೆಂಗಳೂರು, ಜನವರಿ 16: ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ 2000 ರೂಪಾಯಿಯನ್ನು ನೀಡುವ ಭರವಸೆಯನ್ನು ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದೆ.
ಈ ಕುರಿತು ಸೋಮವಾರ ಅರಮನೆ ಮೈದಾನದಲ್ಲಿ ನಡೆದ ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್ ಈ ಭರವಸೆಯನ್ನು ಘೋಷಣೆ ಮಾಡಿದೆ. ಗೃಹ ಲಕ್ಷ್ಮಿ ಯೋಜನೆ ಹೆಸರಿನಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುವ ಗ್ಯಾರಂಟಿ ಮಾದರಿ ಬೆಕ್ ಮಾದರಿಯನ್ನು ಬಿಡುಗಡೆ ಮಾಡಲಾಯಿತು.
ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಲು ತೀರ್ಮಾನಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರದಿಂದ ರಾಜ್ಯದ ಮಹಿಳೆಯರು ಏನನ್ನು ಬಯಸುತ್ತಾರೆ? ಎಂಬುದನ್ನ ತಿಳಿಯಲು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರಾಜ್ಯದ ಮಹಿಳೆಯರಿಗೆ ತಮ್ಮ ಭಾವನೆ, ಸಮಸ್ಯೆ, ಸಲಹೆ, ಅಭಿಪ್ರಾಯ ಹಂಚಿಕೊಳ್ಳುವಂತೆ ಕರೆ ನೀಡಿದ್ದರು.
ಈ ಕರೆಗೆ ಸ್ಪಂದಿಸಿ ಸಾಮಾಜಿಕ ಜಾಲತಾಣ, ಇ ಮೇಲ್, ವಾಟ್ಸಪ್ ಹಾಗೂ ಪಕ್ಷದ ಕಚೇರಿಗೆ ಪತ್ರದ ರೂಪದಲ್ಲಿ ಸಾವಿರಾರು ಸಲಹೆಗಳು ಸ್ವೀಕಾರವಾಗಿವೆ. ಇದರಲ್ಲಿ ಬಹುತೇಕ ಮಹಿಳೆಯರು ಬೆಲೆ ಏರಿಕೆ ಸಮಸ್ಯೆಗೆ ಕಾಂಗ್ರೆಸ್ ಪಕ್ಷದಿಂದ ಪರಿಹಾರ ನಿರೀಕ್ಷಿಸುತ್ತಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಲೆ ಏರಿಕೆ ಪರಿಣಾಮವಾಗಿ ಮನೆಯಲ್ಲಿ ದುಡಿಯುವವರ ವೇತನ ಸಾಲದೇ ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ಮಹಿಳೆಯರು ನಮ್ಮ ಮನೆ ಹಾಗೂ ರಾಜ್ಯದ ಶಕ್ತಿ ಮೂಲವಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ಹಾಗೂ ಮನೆ ನಿರ್ವಹಣೆಯಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟ ಅತೀವವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳೆಯರ ಸಂಕಷ್ಟಕ್ಕೆ ಪ್ರಮಾಣದ ನೆರವು ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ₹2,000ರಂತೆ ವರ್ಷಕ್ಕೆ ₹24 ಸಾವಿರ ಆರ್ಥಿಕ ನೆರವನ್ನು ಕಾಂಗ್ರೆಸ್ ಸರ್ಕಾರ ಒದಗಿಸಲಿದೆ. ಈ ಯೋಜನೆಯು ರಾಜ್ಯದ 1.5 ಕೋಟಿ ಗೃಹಣಿಯರಿಗೆ ನೆರವಾಗಲಿದೆ ಎಂದು ಕಾಂಗ್ರೆಸದ ತಿಳಿಸಿದೆ.
ಮಾದರಿ ಚೆಕ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿ ಕೂಡಾ ಇದೆ. ಇನ್ನೂ ಕಾಂಗ್ರೆಸ್ ಬಸ್ ಯಾತ್ರೆಯ ಸಮಾವೇಶದಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿತ್ತು. ಇದೀಗ ನಾ ನಾಯಕಿ ಸಮಾವೇಶದಲ್ಲಿ ಗೃಹ ಲಕ್ಷ್ಮಿ ಯೋಜನೆ ಘೋಷಣೆಯನ್ನು ಕಾಂಗ್ರೆಸ್ ಮಾಡಿದೆ.