ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಫೈಟ್: ಒಕ್ಕಲಿಗ ಮತಗಳನ್ನು ಸೆಳೆಯಲು ಮೋದಿ ವಿಫಲ
ಬೆಂಗಳೂರು, ಮೇ 13: ಭಾರೀ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವು ಹೊರಬರುತ್ತಿದೆ. ಮೊದಲ ಹಂತದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಪ್ರಬಲ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಇರುವುದು ತಿಳಿದುಬರುತ್ತಿದೆ. ಇಲ್ಲಿ ಬಿಜೆಪಿ ಮಾತ್ರ ಪ್ರಾಬಲ್ಯ ಸಾಧಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಹಳೇ ಮೈಸೂರು ಭಾಗವು ಬಿಜೆಪಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಇಲ್ಲಿ ಪ್ರಧಾನಿ ಮೋದಿ ಅವರು ಚುನಾವಣಾ ಪೂರ್ವ ಪ್ರಚಾರದಲ್ಲಿ ತೊಡಗಿದ್ದರು. ಕಳೆದ ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಒಕ್ಕಲಿಗ ನಾಯಕನ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಇದರಿಂದ ಒಕ್ಕಲಿಗ ಸಮುದಾಯವನ್ನು ಸೆಳೆಯುವಲ್ಲಿ ಪ್ರಧಾನಿ ಮೋದಿ ಮುಂದಾಗಿದ್ದರು.

ಮಂಡ್ಯ, ಮೈಸೂರು ಹಾಗೂ ಕೋಲಾರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಮೈಸೂರು ಹಾಗೂ ತುಮಕೂರಿನಲ್ಲಿ ರೋಡ್ ಶೋ ಮಾಡಿದ್ದರು. ಆ ಮೂಲಕ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಭಾರೀ ಯತ್ನ ನಡೆಸಿದ್ದರು.
ರಾಜ್ಯದ ಮಧ್ಯ ಮತ್ತು ಉತ್ತರ ಭಾಗಗಳು ಗಮನಾರ್ಹ ಲಿಂಗಾಯತ ಜನಸಂಖ್ಯೆಯನ್ನು ಹೊಂದಿವೆ. ಲಿಂಗಾಯತ ಪ್ರಭಾವಿ ಸಮುದಾಯವಾಗಿದ್ದು, ಬಿಜೆಪಿಯ ಮತಬ್ಯಾಂಕ್ ಎಂದು ಪರಿಗಣಿಸಲಾಗಿದೆ. ಕೋಮು ರಾಜಕಾರಣದ ಕೇಂದ್ರವಾಗಿರುವ ಕರಾವಳಿ ಕರ್ನಾಟಕ ಬಿಜೆಪಿಯ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲವನ್ನು ಪಡೆಯಲು, ಬಿಜೆಪಿಯು ಒಕ್ಕಲಿಗ ಸಮುದಾಯದ ಹೆಚ್ಚಿನ ಮತಗಳನ್ನು ಗೆಲ್ಲುವ ಅಗತ್ಯವಿದೆ.
ಬಿಜೆಪಿ ಇಷ್ಟೆಲ್ಲಾ ಯತ್ನ ನಡೆಸಿದ ಹೊರತಾಗಿಯೂ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯವನ್ನು ಸೆಳೆಯಲು ಇನ್ನೂ ಸಾಧ್ಯವಾಗಿಲ್ಲ. ಹಾಸನ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಗ್ರಾಮಂತರ ಜಿಲ್ಲೆಗಳನ್ನು ಒಳಗೊಂಡಿರುವ ಹಳೇ ಮೈಸೂರು ಭಾಗವು ಬಿಜೆಪಿಗೆ ಮುನ್ನೆಡೆಯನ್ನು ತೋರಿಸಿಲ್ಲ.
ಈ ಭಾಗವು ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಜೆಡಿಎಸ್ನ ಭದ್ರಕೋಟೆಯಾಗಿದೆ. ಈಗಲೂ ಅದು ಮುಂದುವರಿದಿದೆ. ಬಹಳಷ್ಟು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಗುಟ್ಟನ್ನು ಹೊರಹಾಕಿವೆ. ಒಂದು ವೇಳೆ, ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಮತ್ತೆ ಎಚ್ಡಿ ಕುಮಾರಸ್ವಾಮಿ ಅವರು ಕಿಂಗ್ಮೇಕರ್ ಆಗುವುದು ನಿಶ್ಚಿತವೆಂಬ ಮಾತುಗಳು ಕೇಳಿಬಂದಿದೆ.












Click it and Unblock the Notifications