ಕಾಂಗ್ರೆಸ್ ಶಾಸಕಾಂಗ ಸಭೆಗೆ ಬರದವರ ಸದಸ್ಯತ್ವ ರದ್ದು: ಎಚ್ಚರಿಕೆ
ಬೆಂಗಳೂರು, ಜನವರಿ 16: ಇದೇ ತಿಂಗಳ 18 ರಂದು ಕಾಂಗ್ರೆಸ್ ಪಕ್ಷವು ಶಾಸಕಾಂಗ ಸಭೆ ಕರೆದಿದ್ದು, ಸಭೆಗೆ ಹಾಜರಾಗದ ಶಾಸಕರ ಸದಸ್ಯತ್ವವನ್ನು ರದ್ದು ಮಾಡಲಾಗುತ್ತದೆ ಎಂದು ಕೆಪಿಸಿಸಿ ಖಾರವಾಗಿ ಎಚ್ಚರಿಕೆ ನೀಡಿದೆ.
ಆಪರೇಷನ್ ಕಮಲ ಭರ್ಜರಿಯಾಗಿ ನಡೆಯುತ್ತಿರುವ ಹೊತ್ತಿನಲ್ಲಿ ಕರೆದಿರುವ ಸಭೆ ಇದಾಗಿರುವ ಕಾರಣ ಸಭೆಗೆ ಹಾಜರಾಗದಿರುವ ಶಾಸಕರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದಲೇ ರದ್ದು ಮಾಡುವ ಬೆದರಿಕೆಯನ್ನು ಕೆಪಿಸಿಸಿ ಹಾಕಿದೆ.
ಈ ಕುರಿತು ಎಲ್ಲ ಶಾಸಕರಿಗೂ ಪತ್ರವನ್ನು ಕೆಪಿಸಿಸಿ ಬರೆದಿದ್ದು, ಸಭೆಯಲ್ಲಿ ಎಲ್ಲ 80 ಶಾಸಕರು ಹಾಜರಿರಬೇಕು ಯಾರೇ ಗೈರಾದರೂ ಅವರ ಸದಸ್ಯತ್ವವನ್ನು ರದ್ದು ಮಾಡುವ ಹಕ್ಕು ನಮಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಮುಂಬೈನಲ್ಲಿದ್ದ ಅತೃಪ್ತ ಶಾಸಕರಲ್ಲಿ ಕೆಲವರು ಮುನಿಸು ಮರೆತು ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿ ಇನ್ನೂ ಒಂದಿಬ್ಬರು ಶಾಸಕರ ಮುನಿಸು ಮುಗಿದಿಲ್ಲ ಎನ್ನಲಾಗಿದೆ. ಹಾಗಾಗಿ ಅವರು ಶಾಸಕಾಂಗ ಸಭೆಗೆ ಬರುತ್ತಾರೋ ಇಲ್ಲವೋ ಅನುಮಾನವಾಗಿದೆ.
ಶಾಸಕಾಂಗ ಸಭೆಗಳಿಗೆ ಸತತವಾಗಿ ಗೈರಾಗುತ್ತಿರುವ ರಮೇಶ್ ಜಾರಕಿಹೊಳಿ ಜನವರಿ 18ರಂದು ನಡೆವ ಶಾಸಕಾಂಗ ಸಭೆಗೂ ಗೈರಾಗುವ ಸಾಧ್ಯತೆ ಹೆಚ್ಚಾಗಿದೆ. ಅಕಸ್ಮಾತ್ ಅವರು ಗೈರಾದರೆ ಅವರ ಸದಸ್ಯತ್ವ ರದ್ದಾಗುತ್ತದೆಯೇ ಕಾದುನೋಡಬೇಕು.
ತಮ್ಮ ಅತೃಪ್ತ ಶಾಸಕರಲ್ಲಿ ಭಯ ಹುಟ್ಟಿಸಿ ಪಕ್ಷದ ಅಡಿಯಲ್ಲಿಯೇ ಅವರನ್ನು ಉಳಿಸಿಕೊಳ್ಳುವ ಉಮೇದಿನಿಂದಾಗಿ ಕೆಪಿಸಿಸಿ ಹೀಗೊಂದು ಖಡಕ್ ಎಚ್ಚರಿಕೆಯನ್ನು ಶಾಸಕರಿಗೆ ರವಾನಿಸಿದೆ.











Click it and Unblock the Notifications