ಯಲ್ಲಾಪುರ: ಅತಿಥಿ ಉಪನ್ಯಾಕರ ನೇಮಕದಲ್ಲಿ ಗೊಂದಲ, ಉಪನ್ಯಾಸಕಿಯ ದಿಢೀರ್ ಪ್ರತಿಭಟನೆ
ಕಾರವಾರ, ಸೆಪ್ಟೆಂಬರ್ 27: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಉಪನ್ಯಾಸಕಿ ಜ್ಯೋತಿ ರಾಯ್ಕರ್ ಎಂಬುವವರು ಕಾಲೇಜಿನ ಮುಂದೆಯೇ ಒಬ್ಬರೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ 7 ವರ್ಷಗಳಿಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿರುವ ಜ್ಯೋತಿ, ಎಂ.ಎ., ಪಿ.ಎಚ್.ಡಿ ಮಾಡಿದ್ದಾರೆ. ಈ ಬಾರಿ ಅತಿಥಿ ಉಪನ್ಯಾಸಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರ ಜ್ಯೇಷ್ಠತಾ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲೇ ಇವರ ಹೆಸರಿದ್ದರೂ ಕೂಡ ಕಡೆಗಣಿಸಿ ಮತ್ತೊಬ್ಬರನ್ನು ನೇಮಿಸಿಕೊಳ್ಳಲಾಗಿದೆ ಎಂದು ಜ್ಯೋತಿ ಆರೋಪಿಸಿದ್ದಾರೆ.
"ಸಮಾಜಶಾಸ್ತ್ರ ವಿಷಯಕ್ಕೆ ಈಗ ನೇಮಕವಾಗಿರುವ ಅತಿಥಿ ಉಪನ್ಯಾಸಕಿ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎಡ್ ವ್ಯಾಸಂಗ ಮಾಡುತ್ತಿದ್ದರೂ ಕೂಡ ಅವರನ್ನು ಉಪನ್ಯಾಸಕಿಯಾಗಿ ನೇಮಿಸಿಕೊಂಡಿರುವುದೇಕೆ? ಜ್ಯೇಷ್ಠತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಅನಗತ್ಯ ಕಾರಣಗಳನ್ನು ಹೇಳಿ ನನ್ನನ್ನು ಕಡೆಗಣಿಸಲಾಗಿದೆ. ಪ್ರಾಂಶುಪಾಲರು ವೈಯಕ್ತಿಕ ದ್ವೇಷ ಸಾಧನೆಗೆ ಮುಂದಾಗಿದ್ದಾರೆ," ಎಂದು ಜ್ಯೋತಿ ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲೆ ಡಾ.ದಾಕ್ಷಾಯಿಣಿ ಹೆಗಡೆ, "ಪಿ.ಎಚ್.ಡಿ ಆಗಿರುವುದರಿಂದ ಜ್ಯೋತಿ ಅವರ ಹೆಸರು ಪಟ್ಟಿಯಲ್ಲಿ ಪ್ರಥಮ ಸ್ಥಾನ ಬಂದಿರುವುದು ಹೌದು. ಆದರೆ ಪಿ.ಎಚ್.ಡಿ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅವರು ಪೂರೈಸಿರುವ ದಾಖಲೆಗಳು ನಿಯಮಾನುಸಾರವಾಗಿ ಇರದ ಕಾರಣ ಅವರನ್ನು ಬಿಟ್ಟು, ದೀಪಿಕಾ ನಾಯ್ಕ ಎಂಬುವವರನ್ನು ಅತಿಥಿ ಉಪನ್ಯಾಸಕಿಯಾಗಿ ನೇಮಿಸಿಕೊಳ್ಳಲಾಗಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ.
ಜ್ಯೇಷ್ಠತಾ ಪಟ್ಟಿಯಲ್ಲಿ ಹೆಸರಿದ್ದರೂ ಅವರ ದಾಖಲೆಗಳನ್ನು ಪರಿಶೀಲಿಸಿ, ಸಮರ್ಪಕವಾಗಿದ್ದರೆ ಮಾತ್ರ ನೇಮಿಸಿಕೊಳ್ಳುವಂತೆ ಇಲಾಖೆಯ ಆದೇಶವಿದೆ. ಅದರಂತೆ ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ, ದ್ವೇಷಕ್ಕೆ ಅವಕಾಶವಿಲ್ಲ. ಅದನ್ನು ನಾನು ಮಾಡಿಯೂ ಇಲ್ಲ ಎಂದು ಪ್ರಾಂಶುಪಾಲೆ ಸಮಜಾಯಿಷಿ ನೀಡಿದ್ದಾರೆ.
"ದೀಪಿಕಾ ನಾಯ್ಕ ಅವರು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದುಕೊಂಡೇ ಬಿ.ಎಡ್ ಓದುತ್ತಿರುವ ವಿಷಯ ತಿಳಿದಿರಲಿಲ್ಲ. ಅತಿಥಿ ಉಪನ್ಯಾಸಕರು ಎರಡು ಸರ್ಕಾರಿ ಸಂಸ್ಥೆಗಳಿಂದ ಏಕಕಾಲದಲ್ಲಿ ಸಂಬಳ ಪಡೆಯಬಾರದು. ಕಾಲೇಜಿನಲ್ಲಿ ವಾರಕ್ಕೆ 8 ತಾಸು ಪಾಠ ಮಾಡಬೇಕೆಂಬ ನಿಯಮವಿದೆ. ಉಳಿದ ಸಮಯದಲ್ಲಿ ಅವರು ವ್ಯಾಸಂಗ ಮಾಡಬಾರದೆಂದೇನೂ ಇಲ್ಲ," ಎಂದು ಪ್ರಾಂಶುಪಾಲೆ ವಿವರ ನೀಡಿದ್ದಾರೆ
ಹೀಗಿದ್ದೂ ವಿಷಯ ತಿಳಿದ ತಕ್ಷಣ ದೀಪಿಕಾ ಅವರಿಗೆ ಮೆಮೊ ನೀಡಲಾಗಿದ್ದು, ಈ ಕಾಲೇಜಿನಲ್ಲಿ ಪಾಠ ಮಾಡುವ ಮೂರು ದಿನಗಳಲ್ಲಿ ವ್ಯಾಸಂಗಕ್ಕೆ ತೆರಳುತ್ತಿಲ್ಲ. ಉಳಿದ ಸಮಯವನ್ನು ಮಾತ್ರ ವ್ಯಾಸಂಗಕ್ಕೆ ಮೀಸಲಿಟ್ಟಿರುವುದಾಗಿ ಉತ್ತರಿಸಿದ್ದಾರೆ ಎಂದು ದಾಕ್ಷಾಯಿಣಿ ಮಾಹಿತಿ ನೀಡಿದ್ದಾರೆ.
ಈಗಲೂ ಜ್ಯೋತಿ ಅವರು ನೀಡಿದ ದಾಖಲಾತಿಗಳನ್ನು ಪರಿಶೀಲಿಸಿ, ಮೇಲಾಧಿಕಾರಿಗಳು ಅವು ಸಮರ್ಪಕವಾಗಿದೆ ಎಂದರೆ ಅವರನ್ನು ನೇಮಿಸಿಕೊಳ್ಳುವಲ್ಲಿ ಯಾವ ಅಭ್ಯಂತರವೂ ಇಲ್ಲ. ನೇಮಕಾತಿಯಲ್ಲಿ ಯಾವುದೇ ಅನ್ಯಾಯ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ದಾಕ್ಷಾಯಿಣಿ ತಿಳಿಸಿದ್ದಾರೆ.