ಸಚಿವ ಮಹದೇವ ಪ್ರಸಾದ್ ವಿರುದ್ದ ಎಸಿಬಿಗೆ ದೂರು
ಚಾಮರಾಜನಗರ, ಜೂನ್ 21 : ಅಕ್ರಮ ಗಣಿಗಾರಿಕೆ ಸಂಬಂಧ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ವಿರುದ್ದ ಎಸಿಬಿಗೆ ದೂರು ಸಲ್ಲಿಸಲಾಗಿದೆ. ಗುಂಡ್ಲುಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ಎಲ್.ಸುರೇಶ್ ದೂರು ನೀಡಿದ್ದಾರೆ.
ಸಚಿವ ಎಚ್.ಎಸ್. ಮಹದೇವಪ್ರಸಾದ್ ಪುತ್ರ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚವಾಡಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ. [ಸಚಿವರಿಂದಲೇ ಕಲ್ಲು ಗಣಿಗಾರಿಕೆ]

ಮಹದೇವ ಪ್ರಸಾದ್ ಪುತ್ರ ಎಚ್.ಎಂ. ಗಣೇಶ್ ಪ್ರಸಾದ್ ಅವರು ಬೆಳಚವಾಡಿ ಗ್ರಾಮದ ಸರ್ವೆ ನಂಬರ್ 243 ರಲ್ಲಿ ಅಕ್ರಮ ಗಣಿಕೆಗಾರಿಕೆ ನಡೆಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು 4 ಲಕ್ಷ ರೂ. ಗಳ ದಂಡ ವಿಧಿಸಿದ್ದಾರೆ. [ಗಣಿಗಾರಿಕೆ ನಿಷೇಧದಿಂದ 10 ಲಕ್ಷ ಉದ್ಯೋಗ ನಷ್ಟ]
ಅದರಂತೆ ಗಣೇಶ್ ಪ್ರಸಾದ್ ಇಲಾಖೆಗೆ ಕಳೆದ ಮಾರ್ಚ್ 28 ರಂದು 4 ಲಕ್ಷ ರೂ.ಗಳನ್ನು ದಂಡ ಪಾವತಿಸಿದ್ದಾರೆ. ಇದೆಲ್ಲಾ ಗಮನಿಸಿದರೆ ಗಣೇಶ್ ಪ್ರಸಾದ್ ಬೆಳಚವಾಡಿ ಗ್ರಾಮದಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಸ್ಪಷ್ಟವಾಗಿದ್ದು, ಅದರಲ್ಲೂ ತಂದೆಯ ಪ್ರಭಾವದಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಖಚಿತವಾಗಿದೆ.

ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ, ಬೆಳಚವಾಡಿ, ಕೋಟೆಕೆರೆ ಹೀಗೆ ಹಲವಾರು ಕಡೆ ಇರುವ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಚಿವ ಮಹದೇವ ಪ್ರಸಾದ್ ತಾವೇ ಸ್ವತಃ ನಡೆಸುತ್ತಿದ್ದಾರೆ. ಅದಲ್ಲದೆ ಅವರ ಪುತ್ರ ಗಣೇಶ್ ಪ್ರಸಾದ್ ಮತ್ತು ಸಹೋದರ ಎಚ್.ಎಸ್.ನಂಜುಂಡ ಪ್ರಸಾದ್ ಹಾಗೂ ಭಾವಮೈದುನ ಮಲ್ಲಿಕಾರ್ಜುನ ಎಲ್ಲರೂ ಸೇರಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಂಚಿನಲ್ಲಿ ಈ ಅಕ್ರಮಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.













Click it and Unblock the Notifications