'ದಿ ವಿಲನ್' ನಿರ್ದೇಶಕ ಪ್ರೇಮ್, ನಟ ಕಿಚ್ಚ ಸುದೀಪ್ ವಿರುದ್ಧ ದೂರು
ಬೆಂಗಳೂರು, ನವೆಂಬರ್ 16: 'ದಿ ವಿಲನ್' ಚಿತ್ರ ಬಿಡುಗಡೆ ಆದಾಗಿನಿಂದಲೂ ಅದರ ನಿರ್ದೇಶಕ ಪ್ರೇಮ್ಗೆ ಒಂದಲ್ಲಾ ಒಂದು ಸಮಸ್ಯೆಗಳು ಬೆನ್ನಿಗೆ ಬೀಳುತ್ತಲೇ ಇವೆ. ಮೊದಲಿಗೆ ಅಭಿಮಾನಿಗಳ ಆಕ್ರೋಶವಾದರೆ ಈಗ ಕನ್ನಡಪರ ಸಂಘಟನೆಗಳ ಆಕ್ರೋಶ.
'ದಿ ವಿಲನ್' ಚಿತ್ರದ ಹಾಡೊಂದರ ದೃಶ್ಯದಲ್ಲಿ ನಟ ಸುದೀಪ್ ಅವರ ಸೊಂಟಕ್ಕೆ ಕನ್ನಡ ಧ್ವಜವನ್ನು ಸುತ್ತಿಕೊಂಡು ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟವು ಕನ್ನಡ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಕನ್ನಡ ಧ್ವಜಕ್ಕೆ ಅವಮಾನ ಮಾಡಿದ ಪ್ರೇಮ್ ಹಾಗೂ ನಟ ಸುದೀಪ್ ಇಬ್ಬರೂ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ದೂರು ನೀಡಿರುವ ಚಳುವಳಿ ನಾಗೇಶ್ ಎಂಬುವರು ಆಗ್ರಹಿಸಿದ್ದಾರೆ. ಕ್ಷಮೆ ಕೇಳದಿದ್ದಲ್ಲಿ ಚಿತ್ರಮಂದಿರಗಳ ಎದುರು ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ದಿ ವಿಲನ್ ಚಿತ್ರದ ಹಾಡೊಂದರ ದೃಶ್ಯದಲ್ಲಿ ಬಿಲ್ಲು ಹಿಡಿದ ಸುದೀಪ್ ಅವರು ಕನ್ನಡದ ಧ್ವಜವನ್ನೇ ಹೋಲುವ ಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿರುವ ಚಿತ್ರವಿದೆ. ಇದು ಕನ್ನಡ ಸಂಘಟನೆಗಳ ಕಣ್ಣು ಕೆಂಪಗೆ ಮಾಡಿದೆ.
ಚಿತ್ರವು ಸೆನ್ಸಾರ್ ಆಗಿ, ಬಿಡುಗಡೆ ಆಗಿ ಬಹಳ ದಿನ ಆಗಿರುವ ಕಾರಣ ಈ ಸಂಬಂಧ ವಾಣಿಜ್ಯ ಮಂಡಳಿ ಏನೂ ಮಾಡಲು ಆಗದು, ದೂರುದಾರರು ನೇರವಾಗಿ ನಿರ್ದೇಶಕ ಹಾಗೂ ನಟನನ್ನು ಭೇಟಿಯಾಗಲು ತಿಳಿಸಿದ್ದೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications