ಮಠಗಳ ಅನುದಾನಕ್ಕೆ ಕಮಿಷನ್: ಆರಂಭವಾಗಿದ್ದು ಯಾರ ಅವಧಿಯಲ್ಲಿ?
ಮಠಮಾನ್ಯ, ದೇವಾಲಯಗಳಿಗೆ ಸರಕಾರದಿಂದ ಅನುದಾನ ಹೋಗುತ್ತಿರುವುದು, ಬರೀ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ನಂತರವಲ್ಲ. ಹಿಂದಿನಿಂದಲೂ, ಈ ಪದ್ದತಿ ಜಾರಿಯಲ್ಲಿದೆ. ಆದರೆ, ಅನುದಾನದ ಪ್ರಮಾಣ ಮಾತ್ರ ಜಾತಿ ಆಧಾರಿತವಾಗಿ ತೀರ್ಮಾನಗೊಳ್ಳುತ್ತಿತ್ತು.
ಗುತ್ತಿಗೆದಾರರ ಸಂಘ, ರಾಜ್ಯದಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿರುವ ನಲವತ್ತು ಪರ್ಸೆಂಟ್ ಕಮಿಷನ್ ದಂಧೆಯ ವಿಚಾರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಹೋದ ನಂತರ, ಈ ವಿಚಾರ ವೇಗವನ್ನು ಪಡೆದುಕೊಂಡಿತು. ಇನ್ನು, ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರ ಇನ್ನಷ್ಟು ವೇಗವನ್ನು ಪಡೆಯಿತು.
ಕಮಿಷನ್ ದಂಧೆಯ ಬೆಂಕಿ ಇನ್ನಷ್ಟು ಕಾವನ್ನು ಪಡೆದುಕೊಂಡಿದ್ದು, ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ನಾವೂ ಮೂವತ್ತು ಪರ್ಸೆಂಟ್ ಕೊಟ್ಟು ಅನುದಾನ ಪಡೆದುಕೊಳ್ಳಬೇಕಿದೆ ಎನ್ನುವ ಹೇಳಿಕೆಯ ನಂತರ. ಸ್ವಾಮೀಜಿಗಳ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ನಾಡಿನ ಇತರ ಪೀಠದ ಸ್ವಾಮೀಜಿಗಳೂ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಲಾರಂಭಿಸಿದ್ದಾರೆ.
"ಜವಾಬ್ದಾರಿಯುತ ಸ್ಥಾನದಲ್ಲಿರುವ ಪೀಠಾಧಿಪತಿಗಳು ಬರೀ ಹೇಳಿಕೆ ನೀಡಿದರ ಸಾಲದು, ಕಮಿಷನ್ ಕೊಟ್ಟಿದ್ದರೆ ಅದಕ್ಕೆ ಸಂಬಂಧ ಪಟ್ಟ ದಾಖಲೆ ಕೊಡಲಿ," ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಇನ್ನೊಂದು ಕಡೆ, ಸ್ವಾಭಾವಿಕವಾಗಿ ವಿರೋಧ ಪಕ್ಷಗಳು ದಿಂಗಾಲೇಶ್ವರ ಶ್ರೀಗಳ ಹೇಳಿಕೆಯನ್ನು ಮುಂದಿಟ್ಟುಕೊಂಡು ಸರಕಾರವನ್ನು ರುಬ್ಬಲು ಆರಂಭಿಸಿವೆ. ಹಾಗಾದರೆ, ಈ ಪರ್ಸೆಂಟೇಜ್ ಪದ್ದತಿ ಆರಂಭವಾಗಿದ್ದು ಯಾರ ಅಧಿಕಾರದ ವೇಳೆ?

ಅನುದಾನ ಕೆಲವೊಮ್ಮೆ ಆಯವ್ಯಯದಲ್ಲೇ ಇದು ಘೋಷಣೆಯಾಗುತ್ತದೆ
ಪ್ರತೀ ಸರಕಾರವೂ ಮಠ, ದೇವಾಲಯಗಳ ವಿವಿಧ ಕೆಲಸಗಳಿಗೆ ಅನುದಾನ ನೀಡಿಕೊಂಡು ಬಂದಿದೆ, ಕೆಲವೊಮ್ಮೆ ಆಯವ್ಯಯದಲ್ಲೇ ಇದು ಘೋಷಣೆಯಾಗುತ್ತದೆ. ಅನುದಾನ ನೀಡುವ ವಿಚಾರದಲ್ಲಿ ಯಾವ ಪಕ್ಷವೂ ಹೊರತಾಗಿಲ್ಲ. ತಮ್ಮತಮ್ಮ ಸಮುದಾಯದ ಪೀಠಾಧಿಪತಿಗಳು ಕೇಳದಿದ್ದರೂ ಅನುದಾನ ಬಿಡುಗಡೆಯಾಗುತ್ತಿತ್ತು. ಇನ್ನು, ಮತ್ತೊಂದು ಸಮುದಾಯದ ಸ್ವಾಮೀಜಿಗಳು ಕೇಳಿದರೂ ಸಿಗದ ಉದಾಹರಣೆಗಳೂ ಇವೆ. ಆದರೆ, ಅನುದಾನ ಬಿಡುಗಡೆ ಮಾಡಲು ಕಮಿಷನ್ ನೀಡಬೇಕೇ? ಹೌದೆಂದಾರೆ ಯಾರ ಅವಧಿಯಲ್ಲಿ ಇದು ಆರಂಭವಾಗಿತ್ತು ಎನ್ನುವುದಕ್ಕೆ ಖಚಿತ ಉತ್ತರ ಸಿಗುವುದು ಕಷ್ಟ.

ಆಂದೋಲ ಮಠದ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿಗಳು ಹೇಳಿದ ನಂತರ ಕಮಿಷನ್ ವಿಚಾರ ಮುನ್ನಲೆಗೆ ಬಂದಿದೆ. ಈ ವಿಚಾರದಲ್ಲಿ ನಾಡಿನ ಕೆಲವು ಸ್ವಾಮೀಜಿಗಳೂ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಮಠಗಳಿಗೆ ಘೋಷಣೆಯಾಗುವ ಅನುದಾನ ಬಿಡುಗಡೆಯಾಗಲು ಕಮಿಷನ್ ನೀಡಬೇಕು ಎನ್ನುವ ದಿಂಗಾಲೇಶ್ವರ ಶ್ರೀಗಳ ಮಾತನ್ನು ನಾವು ಕೂಡಾ ಒಪ್ಪಿಕೊಳ್ಳುತ್ತೇವೆ. ಆದರೆ, ಇದನ್ನು ಬಿಜೆಪಿ ಸರಕಾರಕ್ಕೆ ಮಾತ್ರ ತಗಲಿ ಹಾಕುವುದು ಸರಿಯಲ್ಲ. ನಾವು ಕೂಡಾ ಸರ್ಕಾರದಿಂದ 50 ಲಕ್ಷ ರೂ. ಅನುದಾನ ಪಡೆಯಲು, 15 ಲಕ್ಷ ರೂ. ಕಮಿಷನ್ ಕೊಟ್ಟಿದ್ದೆವು. ಇದು ಸಿದ್ದರಾಮಯ್ಯನವರ ಅವಧಿಯಲ್ಲಿ"ಎಂದು ಆಂದೋಲ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ
"ದಿಂಗಾಲೇಶ್ವರ ಶ್ರೀಗಳ ಹೇಳಿಕೆ ಪ್ರಲೋಭನೆಗೆ ಒಳಗಾಗಿ ನೀಡಿದ ಹೇಳಿಕೆಯಂತಿದೆ. ಅನುದಾನ ನೀಡುವಲ್ಲಿ ವಿಳಂಬ, ತಾರತಮ್ಯ ನಡೆದಿರಬಹುದು. ಆದರೆ, ಯಾವುದೇ ಲಂಚ ಅಥವಾ ಕಮಿಷನ್ ಪಾತ್ರ ಕಾಣಿಸುವುದಿಲ್ಲ"ಎಂದು ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇನ್ನು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗಳು ಮಾತನಾಡುತ್ತಾ, "ನಮಗೂ ಸರಕಾರದಿಂದ ಐವತ್ತು ಲಕ್ಷ ಅನುದಾನ ಬಂದಿತ್ತು. ಇದಕ್ಕಾಗಿ ಚಿಕ್ಕಾಸು ಕಮಿಷನ್ ನೀಡಿರಲಿಲ್ಲ"ಎಂದು ಹೇಳಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್
"ದಿಂಗಾಲೇಶ್ವರ ಸ್ವಾಮೀಜಿಗಳು ಮೂವತ್ತು ಪರ್ಸೆಂಟ್ ಯಾರಿಗೆ ಕೊಟ್ಟರು? ಸ್ವಾಮೀಜಿಯಾಗಿದ್ದವರು ಸಾಕ್ಷಿ ಸಮೇತ ಮಾತನಾಡಬೇಕು. ಮೂವತ್ತು ಪರ್ಸೆಂಟ್ ಲಂಚ ಕೊಟ್ಟು ಅನುದಾನ ಯಾಕಾಗಿ ಅವರು ತೆಗೆದುಕೊಂಡರು? ವಿಜಯೇಂದ್ರ ಅವರಿಂದ ದುಡ್ಡು ತೆಗೆದುಕೊಂಡು, ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಬಿಜೆಪಿ ಸರ್ವನಾಶವಾಗುತ್ತೆ ಎಂದು ಹಿಂದೆ ಹೇಳಿದ್ರಿ. ಆವಾಗ ನಿಮಗೆ ವಿಜಯೇಂದ್ರ ಎಷ್ಟು ಪರ್ಸಂಟೇಜ್ ಕೊಟ್ಟಿದ್ದರು"ಎಂದು ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ದಿಂಗಾಲೇಶ್ವರ ಶ್ರೀಗಳನ್ನು ಪ್ರಶ್ನಿಸಿದ್ದಾರೆ.












Click it and Unblock the Notifications