Get Updates
Get notified of breaking news, exclusive insights, and must-see stories!

ಉಪ ಚುನಾವಣೆ ಫಲಿತಾಂಶ : ದೆಹಲಿ ಬಿಜೆಪಿ ಚಾಣಕ್ಯರ ಅಹಂಕಾರಕ್ಕೆ ಕೊಡಲಿ ಏಟು

ಬೆಂಗಳೂರು, ನವೆಂಬರ್ 06 : ಕರ್ನಾಟಕ ಉಪ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ಮಾತ್ರವಲ್ಲ, ಕರ್ನಾಟಕವನ್ನು ಕಡೆಗಣಿಸಿ ದೆಹಲಿಯಲ್ಲಿ ಕುಳಿತು ಸ್ಟ್ರಾಟಜಿಗಳನ್ನು ರೂಪಿಸುತ್ತಿರುವ ಭಾರತೀಯ ಜನತಾ ಪಕ್ಷದ ಚಾಣಕ್ಯರ ಅಹಂಕಾರಕ್ಕೆ ಕೊಡಲಿ ಏಟು ನೀಡಿದೆ.

ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಬೆಂಬಲ ಅಥವಾ ಮೈತ್ರಿ ನಮಗೆ ಅವಶ್ಯಕತೆಯಿಲ್ಲ, ಏಕಾಂಗಿಯಾಗಿಯೇ ನಾವು ರಾಷ್ಟ್ರೀಯ ಪಕ್ಷವನ್ನಾಗಲಿ, ಪ್ರಾದೇಶಿಕ ಪಕ್ಷಗಳನ್ನಾಗಲಿ ಚುನಾವಣೆಯಲ್ಲಿ ಎದುರಿಸಿ ಜಯಿಸುತ್ತೇವೆ ಎಂಬ ಹುಂಬತನದಿಂದ ಬೀಗುತ್ತಿರುವ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ನೀಡಿದೆ ಕರ್ನಾಟಕ ಉಪ ಚುನಾವಣೆ ಫಲಿತಾಂಶ.

ಮತ್ತೊಂದೆಡೆ, ರಾಷ್ಟ್ರೀಯ ಪಕ್ಷವಾದರೇನು ಪ್ರಾದೇಶಿಕ ಪಕ್ಷವಾದರೇನು, ಹಾವು ಮುಂಗುಸಿಗಳಂತೆ ಕಚ್ಚಾಡುತ್ತಿದ್ದರೂ ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ಒಗ್ಗಟ್ಟಿನಿಂದ ಮುನ್ನುಗ್ಗಿದರೆ, ಎಷ್ಟೇ ಬಲಶಾಲಿಗಳಾಗಿದ್ದರೂ ಮಣ್ಣು ಮುಕ್ಕಿಸಬಹುದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಕರ್ನಾಟಕದಲ್ಲಿ ತೋರಿಸಿಕೊಟ್ಟಿದೆ.

ದೀಪಾವಳಿ ವಿಶೇಷ ಪುರವಣಿ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಗೆಲುವು ಹೊಸ ಅಧ್ಯಾಯವನ್ನು ತೆರೆದಿಟ್ಟಿದೆ. ಶಿವಮೊಗ್ಗವೊಂದನ್ನು ಹೊರತುಪಡಿಸಿದರೆ, ಲೋಕಸಭೆ ಕ್ಷೇತ್ರಗಳಾದ ಬಳ್ಳಾರಿ ಮತ್ತು ಮಂಡ್ಯ, ಹಾಗು ವಿಧಾನಸಭೆ ಕ್ಷೇತ್ರಗಳಾದ ಜಮಖಂಡಿ ಮತ್ತು ರಾಮನಗರದಲ್ಲಿ ನಡೆದ ಚುನಾವಣೆಯನ್ನು ಮೈತ್ರಿಕೂಟಗಳು ನಿರಾಯಾಸವಾಗಿ ಗೆದ್ದುಕೊಂಡಿವೆ.

ಈ ಗೆಲುವು ಕರ್ನಾಟಕದ ರಾಜಕಾರಣಕ್ಕೆ ಮಾತ್ರ ಮುಖ್ಯವಾದುದಲ್ಲ. ನವೆಂಬರ್ ಕೊನೆಯಲ್ಲಿ ಮತ್ತು ಡಿಸೆಂಬರ್ ಆದಿಯಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಬಹುಶಃ ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ್ ಘಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳು ಕೂಡ ಕರ್ನಾಟಕದಲ್ಲಿ ನಡೆದಿರುವ ಬೆಳವಣಿಗೆಗಳನ್ನು ನೋಡುತ್ತಿರಬಹುದು. ನೋಡಿ ಒಂದಿಷ್ಟು ಪಾಠಗಳನ್ನೂ ಕಲಿತಿರಬಹುದು.

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದ ಬಿಜೆಪಿ

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದ ಬಿಜೆಪಿ

ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಸಿಕ್ಕ ಜಯದಿಂದಾಗಿ ದೇಶವನ್ನು ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುತ್ತೇನೆ ಎಂದು ಹೊರಟಿದ್ದ ಭಾರತೀಯ ಜನತಾ ಪಕ್ಷದ ಹುನ್ನಾರಗಳನ್ನೆಲ್ಲ ಸದೆಬಡಿದಿದ್ದು ಕರ್ನಾಟಕದಲ್ಲಿ ಸ್ಥಾಪನೆಯಾದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ. ಸರಕಾರ ಮಾಡುತ್ತೇನೆ ಎಂದು ದುಡುಕಿ ಮೂರೇ ದಿನಗಳಲ್ಲಿ ಎಡವಿಬಿದ್ದ ಯಡಿಯೂರಪ್ಪ ಅವರ ಬಹುಮತ ಸಾಬೀತಿನ ಪ್ರಹಸನಕ್ಕೆ ಮಂಗಳ ಹಾಡಿದ್ದೂ ಇದೇ ಮೈತ್ರಿಕೂಟ. ಎಷ್ಟೇ ಅಡೆತಡೆ, ಕೊಂಕುಕೊಸರುಗಳಿದ್ದರೂ, ಏರಿಳಿತಗಳಿದ್ದರೂ ದೋಣಿ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇನೆಂದು ಮಂತ್ರ ಪಠಿಸುತ್ತಿದ್ದ ಬಿಜೆಪಿಗೆ ಈಗ ಅದೇ ತಿರುಗುಬಾಣವಾಗಿದೆ.

ಸ್ಟ್ರಾಟಜಿ ರೂಪಿಸುವಲ್ಲಿ ಎಡವಿದ್ದ ನಾಯಕರು

ಸ್ಟ್ರಾಟಜಿ ರೂಪಿಸುವಲ್ಲಿ ಎಡವಿದ್ದ ನಾಯಕರು

ಕಾಂಗ್ರೆಸ್ ಹೈಕಮಾಂಡ್ ಮತ್ತು ಇತರ ರಾಜ್ಯಗಳಲ್ಲಿರುವ ಇತರ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ, ಇದೇ ಮಾದರಿಯನ್ನು ಹಿಂಬಾಲಿಸಿದರೂ ಅಚ್ಚರಿಯಿಲ್ಲ. ಇದೊಂದು ವೇಳೆ ಸಾಧ್ಯವಾದರೆ, ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ್ ಘಡದಲ್ಲಿ ಬಿಜೆಪಿಗೆ ಕರ್ನಾಟಕದಲ್ಲಾದ ಗತಿಯೂ ಆದರೆ ಅಚ್ಚರಿಯಿಲ್ಲ. ಕರ್ನಾಟಕದಲ್ಲಿ ಸ್ಟ್ರಾಟಜಿ ರೂಪಿಸುವಲ್ಲಿ ಬಿಜೆಪಿ ವರಿಷ್ಠರು ಎಡವಿರುವುದು ಇದು ಎರಡನೇ ಬಾರಿ. ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್ ಜೊತೆ ಕೈಜೋಡಿಸುವಲ್ಲಿ ಬಿಜೆಪಿ ವಿಫಲವಾಗಿತ್ತು. ಮತ್ತು, ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ತೀರ ಹಗುರವಾಗಿ ತೆಗೆದುಕೊಂಡಿತ್ತು. ಇದರ ಪ್ರತಿಫಲವನ್ನು ಈಗ ಎದುರಿಸುತ್ತಿದೆ.

ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಅನಿವಾರ್ಯ

ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಅನಿವಾರ್ಯ

ಇನ್ನು ಇತರ ರಾಜ್ಯಗಳ ವಿಷಯಕ್ಕೆ ಬಂದರೆ, ಮಧ್ಯ ಪ್ರದೇಶವಾಗಲಿ, ರಾಜಸ್ತಾನವಾಗಲಿ ಅಥವಾ ಛತ್ತೀಸ್ ಘಡವಾಗಲಿ ಸಣ್ಣಪುಟ್ಟ ಪಕ್ಷಗಳನ್ನು ಭಾರತೀಯ ಜನತಾ ಪಕ್ಷ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗತ್ಯಂತರವೇ ಇಲ್ಲ. ಇಲ್ಲಿ ಸಾಸಿವೆ ಕಾಳಿನಷ್ಟು ತಪ್ಪನ್ನು ಮಾಡಲು ಬಿಜೆಪಿಗೆ ಅವಕಾಶವಿಲ್ಲ. ಒಂದು ಸಣ್ಣ ತಪ್ಪು ಕೂಡ ಲೋಕಸಭೆ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕಾಂಗ್ರೆಸ್ ಈಗಾಗಲೆ ಆ ಹಾದಿ ತುಳಿದಿದೆ. ಮಧ್ಯ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಕೈಕೊಟ್ಟರೂ ಕಾಂಗ್ರೆಸ್ ಇತರ ಸಣ್ಣಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇನ್ನು ಬಿಎಸ್ಪಿಯಂಥ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರಂತೂ ಬಿಜೆಪಿಯ ಗೆಲುವಿನ ಹಾದಿ ಹೂವಿನ ಹಾಸು ಆಗಲಾರದು.

ಬಿಎಸ್ಪಿ-ಎಸ್ಪಿ ಕೈಜೋಡಿಸಿದರೆ ಗೋವಿಂದ

ಬಿಎಸ್ಪಿ-ಎಸ್ಪಿ ಕೈಜೋಡಿಸಿದರೆ ಗೋವಿಂದ

ಎಲ್ಲಕ್ಕಿಂತ ಪ್ರಮುಖವಾಗಿ, ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಉತ್ತರ ಪ್ರದೇಶ ಭಾರತೀಯ ಜನತಾ ಪಕ್ಷಕ್ಕೆ ಭಾರೀ ಮುಖ್ಯವಾಗಿದೆ. ಏಕೆಂದರೆ, ಇತ್ತೀಚೆಗೆ ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಎಸ್ಪಿ ಮತ್ತು ಬಿಎಸ್ಪಿಗಳು ಉತ್ತರ ಪ್ರದೇಶದಲ್ಲಿ ಕೈಜೋಡಿಸಿದರೆ, ಬಿಜೆಪಿಗೆ ಮರ್ಮಾಘಾತವಾಗಲಿದ್ದು, ಒಟ್ಟಾರೆಯಾಗಿ ಎನ್ಡಿಎ ಬಹುಮತ ಗಳಿಸುವುದು ಅನುಮಾನ. ಈ ದೃಷ್ಟಿಯಿಂದ ಎಸ್ಬಿ ಮತ್ತು ಬಿಎಸ್ಪಿ ಮೈತ್ರಿಯ ಬಗ್ಗೆ ಬಿಜೆಪಿ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ. ಅಲ್ಲದೆ, ಉತ್ತರ ಪ್ರದೇಶದಲ್ಲಿನ ಪ್ರದೇಶಿಕ ಪಕ್ಷಗಳನ್ನು ತನ್ನ ಕೂಟದಲ್ಲಿ ಸೇರಿಸಿಕೊಂಡು ವಿರೋಧಿಗಳಿಗೆ ಹೊಡೆತ ನೀಡುವ ತಂತ್ರಗಾರಿಕೆ ಅನುಸರಿಸಬೇಕಿದೆ.

ಅಚ್ಚರಿ ಮೂಡಿಸಿದ ವರಿಷ್ಠರ ನಿರ್ಲಿಪ್ತತೆ

ಅಚ್ಚರಿ ಮೂಡಿಸಿದ ವರಿಷ್ಠರ ನಿರ್ಲಿಪ್ತತೆ

ಕರ್ನಾಟಕದ ಮಟ್ಟಿಗೆ ಅಚ್ಚರಿಯ ಸಂಗತಿಯೆಂದರೆ, ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯೇ ಚುನಾವಣೆ ಇನ್ನೆರಡು ದಿನಗಳಿರುವಾಗ ಕಾಂಗ್ರೆಸ್ ಸೇರಿಕೊಂಡಿದ್ದಕ್ಕೆ ಅಂತಹ ಪ್ರತಿಕ್ರಿಯೆ ತೋರದಿರುವುದು. ಬೇರೆ ಮೂಲಗಳ ಮೂಲಕ ಅಧ್ಯಯನ ಮಾಡಿ ಅಮಿತ್ ಶಾ ವರದಿ ತರಿಸಿಕೊಂಡರೇ ಹೊರತು, ಯಡಿಯೂರಪ್ಪನವರನ್ನು ನೇರವಾಗಿ ಮುಂದೆಯೇ ಕೂಡಿಸಿಕೊಂಡು ಉತ್ತರ ಕೇಳಲಿಲ್ಲ. ಮೊಟ್ಟಮೊದಲಿಗೆ ಅಲ್ಲಿ ಸ್ಥಳೀಯ ನಾಯಕರುಗಳಿದ್ದರೂ, ಬೇರೆ ಪಕ್ಷದಿಂದ ಚಂದ್ರಶೇಖರ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದು. ನಂತರ ಇತರರನ್ನು ಕಡೆಗಣಿಸಿ ವಲಸೆ ಹಕ್ಕಿಗೆ ಟಿಕೆಟ್ ನೀಡಿರುವುದು. ಮೂರನೆಯದಾಗಿ, ಅಲ್ಲಿ ಬಿಜೆಪಿಗೆ ಗೆಲ್ಲುವ ಚಾನ್ಸ್ ಇದ್ದರೂ ಯಡಿಯೂರಪ್ಪನವರ ಸಮೇತ ಯಾವುದೇ ಪ್ರಮುಖ ನಾಯಕರು ಚಂದ್ರಶೇಖರ ಪರವಾಗಿ ಪ್ರಚಾರಕ್ಕೆ ಬರದಿರುವುದು. ಬಿಜೆಪಿ ನಾಯಕರ ನಿರ್ಲಿಪ್ತತೆಯೇ ಹೀಗಿರುವಾಗ ಅಲ್ಲಿಯ ಜನರು ಸೋಲುಣಿಸದೆ ಇನ್ನೇನು ಮಾಡಿಯಾರು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+