ಕೈಹಿಡಿಯುತ್ತಿರುವ ಕಾರ್ಯತಂತ್ರ: 3ನೇ ಅಲೆಗೂ ಅದೇ ಹಾದಿಯಲ್ಲಿ ಸಾಗಲು ಬಿಎಸ್ವೈ ನಿರ್ಧಾರ?
ಕೇವಲ ಮೂರ್ನಾಲ್ಕು ವಾರದ ಹಿಂದಿನ ಪರಿಸ್ಥಿತಿ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲೆಲ್ಲೂ, ಕೊರೊನಾ ಎರಡನೇ ಅಲೆಯ ಆರ್ಭಟ, ಬೆಡ್ ಸಮಸ್ಯೆ, ಆಕ್ಸಿಜನಿಗೆ ಹಾಹಾಕಾರ, ಶವಸಂಸ್ಕಾರಕ್ಕೂ ಸಮಸ್ಯೆ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರಿಗೆ ಇನ್ನಿಲ್ಲದಂತೇ ಕಾಡಿದ ದಿನಗಳು. ಚಾಮರಾಜನಗರದ ಆಕ್ಸಿಜನ್ ದುರಂತದ ನಂತರವಂತೂ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಲೈಂಲೈಟಿಗೆ ಬಂತು.
ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಸುಧಾಕರ್ ಅವರ ಮೇಲಿದ್ದ ಜವಾಬ್ದಾರಿಯನ್ನು ಐವರು 'ಮೂಲ' ಬಿಜೆಪಿ ಸಚಿವರಿಗೆ ಹಂಚಿದರು.
ಸಿಎಂ ಕೊಟ್ಟ ಜವಾಬ್ದಾರಿಯನ್ನು ಸವಾಲು/ಪ್ರತಿಷ್ಠೆಯಾಗಿ ತೆಗೆದುಕೊಂಡ ಈ ಐವರು ಸಚಿವರುಗಳು ಪರಿಸ್ಥಿತಿಯ ಮೇಲೆ ನಿಧಾನವಾಗಿ ನಿಯಂತ್ರಣ ಸಾಧಿಸುತ್ತಾ ಬಂದರು. ಅಲ್ಲಿಗೆ, ತಕ್ಕಮಟ್ಟಿಗೆ ಯಡಿಯೂರಪ್ಪ ನಿರಾಳವಾದರು. ಇದೇ ತಂತ್ರವನ್ನು, ಕೆಲವೊಂದು ಬದಲಾವಣೆಗಳನ್ನು ಮಾಡಿ ಮೂರನೇ ಅಲೆಗೆ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳಲು ಸಿಎಂ ನಿರ್ಧರಿಸಿದ್ದಾರಂತೆ.

ಟೆಸ್ಟಿಂಗ್ ಪ್ರಮಾಣ ಕಮ್ಮಿ ಎನ್ನುವುದು ವಾಸ್ತವತೆ, ಬಿಎಸ್ವೈ ನಿರಾಳ
ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಮೇ 17) ಒಂದು ದಿನ ಹೊರತು ಪಡಿಸಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದೆ. ಟೆಸ್ಟಿಂಗ್ ಪ್ರಮಾಣ ಕಮ್ಮಿ ಎನ್ನುವುದು ವಾಸ್ತವತೆಯಾದರೂ, ಮೂರ್ನಾಲ್ಕು ವಾರದ ಹಿಂದಿನ ಪರಿಸ್ಥಿತಿಯಂತೆ ಈಗಿಲ್ಲ ಎಂದು ಬಿಎಸ್ವೈ ನಿರಾಳರಾಗಿದ್ದಾರೆ.

ಬಸವರಾಜ ಬೊಮ್ಮಾಯಿ ಮತ್ತು ಆರ್.ಅಶೋಕ್ - ಖಾಸಗಿ ಆಸ್ಪತ್ರೆಗಳ ಜೊತೆ ಮಾತುಕತೆ
ಪ್ರಮುಖವಾಗಿ ಬೆಡ್ ಮತ್ತು ಆಕ್ಸಿಜನ್ ಸಮಸ್ಯೆಗಳನ್ನು ಐವರು ಸಚಿವರ ತಂಡ ಸಮರ್ಥವಾಗಿ ನಿಭಾಯಿಸುತ್ತಾ ಬರುತ್ತಿದೆ ಎನ್ನುವುದು ಫ್ಯಾಕ್ಟ್. ಖಾಸಗಿ ಆಸ್ಪತ್ರೆಗಳ ಜೊತೆ ಮಾತುಕತೆ ನಡೆಸಿ ಬೆಡ್ ಹೊಂದಿಸುವುದು ಸವಾಲಿನ ಕೆಲಸವೇ ಆಗಿತ್ತು. ಆದರೆ, ಬಸವರಾಜ ಬೊಮ್ಮಾಯಿ ಮತ್ತು ಆರ್.ಅಶೋಕ್ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತಾ ಬರುತ್ತಿದ್ದಾರೆ. ಮೂರನೇ ಅಲೆಗೆ ಈಗಲೇ ಈ ಇಬ್ಬರು ಸಚಿವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ.

ಜವಾಬ್ದಾರಿಯನ್ನು ಮತ್ತೊಂದು ಸಚಿವರಿಗೆ ವಹಿಸಿದರೆ ಹೇಗೆ ಎನ್ನುವುದರ ಬಗ್ಗೆ ಬಿಎಸ್ವೈ ಚಿಂತನೆ
ಆದರೂ, ಮಕ್ಕಳ ಮೇಲೆ ಮೂರನೇ ಅಲೆಯ ಪ್ರಭಾವ ಹೆಚ್ಚಾಗಬಹುದು ಎನ್ನುವ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಎಸ್ವೈ ಖಾಸಗಿ ಆಸ್ಪತ್ರೆಗಳ ಬೆಡ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕೆನ್ನುವುದನ್ನು ಮನಗಂಡಿದ್ದಾರೆ. ಹಾಗಾಗಿ, ಈ ಜವಾಬ್ದಾರಿಯನ್ನು ಮತ್ತೊಂದು ಸಚಿವರಿಗೆ ವಹಿಸಿದರೆ ಹೇಗೆ ಎನ್ನುವುದರ ಬಗ್ಗೆ ಬಿಎಸ್ವೈ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video

ಐವರು ಸಚಿವರು, ಆರೋಗ್ಯ ಸಚಿವರು, ಸರಕಾರದ ನಡುವೆ ಸಮನ್ವಯದ ಕೊರತೆ ಇರಬಾರದು
ಇದರ ಜೊತೆಗೆ ಐವರು ಸಚಿವರು, ಆರೋಗ್ಯ ಸಚಿವರು, ಸರಕಾರದ ನಡುವೆ ಯಾವುದೇ ಸಮನ್ವಯದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸಚಿವರೊಬ್ಬರಿಗೆ ಇದರ ಜವಾಬ್ದಾರಿಯನ್ನು ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಮುಖ್ಯಮಂತ್ರಿಗಳ ಈ ಕಾರ್ಯತಂತ್ರ ಯಾವರೀತಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications