BREAKING: ದೆಹಲಿ ಭೇಟಿ ಕುರಿತು ಕೊನೆಗೂ ಮೌನ ಮುರಿದ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ಜು. 15: ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ವಿಚಾರವಾಗಿ ಚರ್ಚೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಸಿಎಂ ಯಡಿಯೂರಪ್ಪ ಅವರನ್ನು ಹಿಂಬಾಲಿಸಿಕೊಂಡು ಆಪ್ತ ಶಾಸಕರೂ ಕೂಡ ದೆಹಲಿಗೆ ತೆರಳುತ್ತಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ತಮ್ಮ ದೆಹಲಿ ಭೇಟಿಯ ಕುರಿತು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಯಡಿಯೂರಪ್ಪ ಅವರು, ನಾಳೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಅನೇಕ ಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇನೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಈಗಾಗಲೇ ಸ್ಥಗಿತವಾಗಿರುವ ನೀರಾವರಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡುತ್ತೇನೆ. ಪ್ರಧಾನಿ ಮೋದಿ ಅವರೂ ಭೇಟಿಯಾಗುವುದಾಗಿ ಹೇಳಿದ್ದು, ಸಮಯ ಕೊಡಲಿದ್ದಾರೆ. ನಾಳೆ ಎಲ್ಲರನ್ನೂ ಭೇಟಿ ಮಾಟಿ ನಾಡಿದ್ದು ವಾಪಸ್ ಬೆಂಗಳೂರಿಗೆ ಬರುತ್ತೇನೆ" ಎಂದಿದ್ದಾರೆ.
Recommended Video
ಇನ್ನು ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಯಡಿಯೂರಪ್ಪ ಅವರು, "ಸಂಪುಟ ಪುನಾರಚನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ನಮ್ಮ ಮುಂದೆ ಅಂಥ ಪ್ರಸ್ತಾಪ ಇಲ್ಲ. ದೆಹಲಿಯಲ್ಲಿ ಅದರ ಬಗ್ಗೆ ಚರ್ಚೆಯಾದರೆ ಮುಂದೆ ನೋಡೋಣ" ಎಂದಿದ್ದಾರೆ. ಜೊತೆಗೆ ಮೇಕೆದಾಟು ಯೋಜನೆ ಕುರಿತು ಮಾತನಾಡುವ ಬಗ್ಗೆ ಪರೋಕ್ಷವಾಗಿ ಮಾಹಿತಿಯನ್ನು ಸಿಎಂ ಯಡಿಯೂರಪ್ಪ ಕೊಟ್ಟಿದ್ದಾರೆ.