ಇಷ್ಟಾದ ಮೇಲೂ ಬಿಜೆಪಿ ವರಿಷ್ಠರ ಮೌನಕ್ಕೆ ಕಾಲವೇ ಉತ್ತರ ನೀಡಬೇಕು!
ಯಡಿಯೂರಪ್ಪನವರನ್ನು ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡಿ, ಅವರನ್ನು ಗೌರವಯುತವಾಗಿ ಬೀಳ್ಕೊಡುವ ಉದ್ದೇಶವನ್ನು ಬಿಜೆಪಿ ವರಿಷ್ಥರು ಹೊಂದಿದ್ದಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ.
ಈ ಸುದ್ದಿ ಕಪೋಕಲ್ಪಿತ ಎಂದು ಬಿಜೆಪಿಯ ದೊಡ್ಡವರು ಎಷ್ಟೇ ಸ್ಪಷ್ಟೀಕರಣವನ್ನು ನೀಡುತ್ತಾ ಬರುತ್ತಿದ್ದರೂ, ಆ ಸುದ್ದಿ ಇನ್ನೂ ನೆನೆಗುದಿಗೆ ಬಿದ್ದಿಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳು ಸ್ವಪಕ್ಷೀಯರಿಂದಲೇ ಬರುತ್ತಿದೆ.
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಪಕ್ಷದಲ್ಲಿ ಹಲವು ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿ ಹೋಗಿವೆ. ಹೇಗೋ ಇದನ್ನೆಲ್ಲಾ ಸಂಭಾಳಿಸಿಕೊಂಡು ಬರುತ್ತಿರುವ ಯಡಿಯೂರಪ್ಪನವರ ಮೇಲೆ ವರಿಷ್ಠರ ಮೂಗುದಾರ ಬಲವಾಗಿದೆ ಎನ್ನುವುದಕ್ಕೆ ಸಂಪುಟ ವಿಸ್ತರಣೆ ಸರ್ಕಸ್ ಕೂಡಾ ಒಂದು ಉದಾಹರಣೆ.
ಆದರೆ, ವಿರೋಧ ಪಕ್ಷಗಳೂ ನಾಚಿಸುವಂತೆ ಪಕ್ಷದ ಹಿರಿಯ ಮುಖಂಡರೊಬ್ಬರು ದಿನಾ ಬೆಳಗಾದರೆ ಮುಖ್ಯಮಂತ್ರಿಗಳು ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಮೇಲೆ ವಾಗ್ದಾಳಿ ನಡೆಸುತ್ತಿರುವುದು ಮತ್ತು ಅದಕ್ಕೆ ಹೈಕಮಾಂಡ್ ಅಂತರ ಕಾಪಾಡಿಕೊಂಡು ಬರುತ್ತಿರುವುದನ್ನು ನೋಡಿದರೆ, ವರಿಷ್ಠರ ಮೌನ ಹಲವು ಸಂದೇಹಕ್ಕೆ ಕಾರಣವಾಗಿದೆ.

ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬ
ವಿಜಯಪುರದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ದ ಕಿಡಿಕಾರುತ್ತಿರುವುದು ಹೊಸದೇನಲ್ಲ. ಆದರೆ, ಕಳೆದ ಎರಡು ದಿನಗಳಿಂದ ಅವರು ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದೊಡ್ಡುತ್ತಿದೆ. ಬಿಎಸ್ವೈ ಮತ್ತು ವಿಜಯೇಂದ್ರ ವಿರುದ್ದ ಯತ್ನಾಳ್ ಮಾಡಿದ ಆರೋಪ ಅಂತಿಂದಲ್ಲ.

ರಾತ್ರಿಗೆ ವ್ಯವಸ್ಥೆ ಮಾಡುವ ಚೇಲಾಗಳಿಗೆ ಬೇಕಾದ ಹುದ್ದೆ ಸಿಗುತ್ತಿದೆ
"ಯಡಿಯೂರಪ್ಪನವರಿಗೆ ಅವರ ಪುತ್ರ ವಿಜಯೇಂದ್ರನೇ ದೊಡ್ಡ ಚೇಳು. ಎಲ್ಲಾ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಾ, ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ವಿಜಯೇಂದ್ರನ ಕಾಲು ಒತ್ತುವರಿಗೆ ಮತ್ತು ಆತನಿಗೆ ರಾತ್ರಿಗೆ ವ್ಯವಸ್ಥೆ ಮಾಡುವ ಚೇಲಾಗಳಿಗೆ ಬೇಕಾದ ಹುದ್ದೆ ಸಿಗುತ್ತಿದೆ"ಎಂದು ಯತ್ನಾಳ್ ಗಂಭೀರ ಆರೋಪವನ್ನು ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಈ ರೀತಿಯ ಗುರುತರ ಆರೋಪವನ್ನು ಯತ್ನಾಳ್ ಮಾಡುತ್ತಿದ್ದರೂ, ಬಿಜೆಪಿಯ ಹೈಕಮಾಂಡ್ ಮೌನಕ್ಕೆ ಶರಣಾಗಿರುವುದು. "ಯತ್ನಾಳ್ ಸಿಎಂ ವಿರುದ್ಧ ತಿರುಗಿ ಬಿದ್ದಿಲ್ಲ, ತಮ್ಮ ಸಮಸ್ಯೆ ಬಗ್ಗೆ ಕೇಳಿದ್ದಾರೆ ಅಷ್ಟೆ. ಶಾಸಕ ಯತ್ನಾಳ್ ದಿನಕ್ಕೊಂದು ಮಾತು ಹೇಳುತ್ತಾರೆ, ದಿನಕ್ಕೊಂದು ಕನಸು ಕಾಣುತ್ತಾರೆ ಅದು ಸಹಜ. ಯತ್ನಾಳ್ ಹೇಳಿಕೆಗಳ ಬಗ್ಗೆ ಶಿಸ್ತು ಸಮಿತಿಗೆ ವರದಿ ಕಳಿಸಲಾಗಿದೆ, ಕೇಂದ್ರ ಸಮಿತಿ ತೀರ್ಮಾನ ಕೈಗೊಳ್ಳಲಿದೆ"ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಸಾಫ್ಟ್ ಕಾರ್ನರ್ ಅನ್ನು ಮುಂದುವರಿಸಿದ್ದಾರೆ.
Recommended Video

ಬಿಜೆಪಿಯ ವರಿಷ್ಠರು
ಮೊದಲು ಸಂಕ್ರಾಂತಿ ನಂತರ, ಆಮೇಲೆ, ಯುಗಾದಿಯ ನಂತರ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ ಎನ್ನುವ ಹೇಳಿಕೆಯನ್ನು ಯತ್ನಾಳ್ ನೀಡಿದ್ದಾರೆ. ಬಿಜೆಪಿ ವರಿಷ್ಠರ ನಡೆ ಸಂದೇಹಕ್ಕೆ ಕಾರಣವಾಗಿರುವುದು ಏನಕ್ಕೆಂದರೆ, ನೋಟಿಸ್ ಕೊಟ್ಟ ಮೇಲೂ ಯತ್ನಾಳ್ ಅವರ ಆರೋಪ ಮುಂದುವರಿದಿರುವುದು. ಇಷ್ಟಾದರೂ, ಬಿಜೆಪಿಯ ವರಿಷ್ಠರು ಯಾಕಾಗಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿಲ್ಲ. ನೋಟಿಸ್ ಕೊಟ್ಟಿರುವುದು ಸುಮ್ಮನೆ ಕಣ್ಣೊರೆಸಲಾ ಅಥವಾ ವರಿಷ್ಟರ ಮೌನ ಉದ್ದೇಶಪೂರ್ವಕವೇ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕು.












Click it and Unblock the Notifications