ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೂರು ದಿನ ವಾಸ್ತವ್ಯ: ಯಡಿಯೂರಪ್ಪ
ಬೆಂಗಳೂರು, ಆಗಸ್ಟ್ 07: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ವಾಸ್ತವ್ಯ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅವರು ಇಂದು ಹೇಳಿದರು.
ದೆಹಲಿಯಿಂದ ವಾಪಸ್ಸಾದ ಬಳಿಕ ತಮ್ಮ ಧವಳಗಿರಿ ನಿವಾಸದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಈಗಲೇ ಬೆಳಗಾವಿಗೆ ಹೊರಡುತ್ತಿದ್ದೇನೆ ಎಂದು ಹೇಳಿದರು.
ಶಾಸಕರಿಗೆ, ಸಂಸದರಿಗೆ ಪ್ರವಾಹ ಸ್ಥಿತಿಯ ಮೇಲ್ವಿಚಾರಣೆ ನಡೆಸಲು ಸೂಚಿಸಿದ್ದೇನೆ. ಪ್ರವಾಹ ಪೀಡಿತ ಜಿಲ್ಲೆಯ ಶಾಸಕರು ಸಂಸದರೊಂದಿಗೆ ಸೇರಿ ಪ್ರವಾಹ ವೀಕ್ಷಣೆ ನಡೆಸಲಿದ್ದೇನೆ. ಬೆಳಗಾವಿ ಸಂಸದ, ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಅವರು ದೆಹಲಿಯಿಂದ ಆಗಮಿಸಿದ್ದು, ಅವರೂ ಸಹ ನನ್ನೊಂದಿಗೆ ಆಗಮಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಇಂದು ಸಂಜೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡುವ ಕಾರ್ಯಕ್ರವಿತ್ತು ಆದರೆ ಅದನ್ನು ಬಿಟ್ಟು ರಾಜ್ಯಕ್ಕೆ ವಾಪಸ್ ಬಂದಿದ್ದೇನೆ. ಮೊದಲಿಗೆ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸುವಂತೆ ಅಮಿತ್ ಶಾ ಅವರೂ ಸಹ ಸೂಚನೆ ನೀಡಿದ್ದು, ಕೂಡಲೇ ರಾಜ್ಯಕ್ಕೆ ವಾಪಸ್ ತೆರಳುವಂತೆ ಸೂಚಿಸಿದ್ದರು ಅಂತೆಯೇ ವಾಪಸ್ ಬಂದಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಪ್ರವಾಹ ಪರಿಸ್ಥಿತಿ ಹತೋಟಿಗೆ ಬರುವವರೆಗೆ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.












Click it and Unblock the Notifications