ಮತ್ತೆ ಸರ್ಕಾರಿ ಬಸ್ ದರ ಏರಿಕೆ ಬಗ್ಗೆ ಚರ್ಚೆ ಆರಂಭ
ಬೆಂಗಳೂರು, ಮೇ 21 : ಲೋಕಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಸರ್ಕಾರಿ ಬಸ್ ದರ ಏರಿಕೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ತೀರ್ಮಾನವನ್ನು ಕೈಗೊಳ್ಳಬೇಕಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, 'ಪ್ರಯಾಣ ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಬೇಕು' ಎಂದು ಹೇಳಿದ್ದಾರೆ.
'ಬಿಎಂಟಿಸಿ ಪ್ರತಿ ವರ್ಷ 200 ಕೋಟಿ ನಷ್ಟ ಅನುಭವಿಸುತ್ತಿದೆ. ಆಡಳಿತದಲ್ಲಿನ ದೋಷ, ಅವ್ಯವಹಾರದಿಂದಾಗಿ ನಿಗಮ ನಷ್ಟದ ಹಾದಿ ಹಿಡಿದಿದೆ. ದರ ಹೆಚ್ಚಳ ಮಾಡಲು ಅನುಮತಿ ನೀಡದಿದ್ದರೆ ನಷ್ಟದಲ್ಲಿರುವ ಸಂಸ್ಥೆ ನಡೆಸಲು ಆರ್ಥಿಕ ನೆರವು ನೀಡುವಂತೆ ಕೇಳಿದ್ದೇನೆ' ಎಂದು ಸಚಿವರು ಹೇಳಿದರು.
ಲೋಕಸಭಾ ಚುನಾವಣೆಗೆ ಮೊದಲೇ ಬಸ್ ಏರಿಕೆ ಕುರಿತು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿರಲಿಲ್ಲ. ಈಗ ಚುನಾವಣೆ ಮುಗಿದಿದ್ದು, ಇದಕ್ಕೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.

ಹೊಸ ಬಸ್ ಖರೀದಿ
3500 ಹೊಸ ಬಸ್ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ. ಖಾಸಗಿ ಬಸ್ಗಳಿಗೆ ಪೈಪೋಟಿ ನೀಡಲು ಬಸ್ಗಳ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತದೆ. ಹೊರ ಮತ್ತು ಒಳ ವಿನ್ಯಾಸ, ಬಣ್ಣವನ್ನು ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ.

ಹೈಟೆಕ್ ಬಸ್ ನಿಲ್ದಾಣ ಸ್ಥಾಪನೆ
ತಾಲೂಕು ಮಟ್ಟದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ಸಾರಿಗೆ ಇಲಾಖೆ ನಿರ್ಮಾಣ ಮಾಡಲಿದೆ. ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪನೆ ಮಾಡಲು ಅವಕಾಶ ನೀಡಲಾಗುತ್ತದೆ. ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ಇಂತಹ ನಿಲ್ದಾಣ ಸ್ಥಾಪನೆಯಾಗಲಿದೆ. ಇದಕ್ಕಾಗಿ 250 ಕೋಟಿ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ಕಾರ್ಮಿಕರಿಗೆ ಬಸ್ ಪಾಸ್
ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸುಗಳನ್ನು ನೀಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಮೂರು ತಿಂಗಳಿಗೊಮ್ಮೆ ಪಾಸು ನವೀಕರಣ ಮಾಡಲಾಗುತ್ತದೆ. ಈ ಯೋಜನೆ ಯಶಸ್ವಿಯಾದರೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೂ ಪಾಸು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

75 ಸಿಬ್ಬಂದಿಗಳು ಅಮಾನತು
ಬಿಡಿ ಭಾಗಗಳ ಖರೀದಿ ಸೇರಿದಂತೆ ಅಕ್ರಮ ನಡೆಸಿರುವ 75 ನೌಕರರು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಡೀಸೆಲ್ ಸರಬರಾಜು ಮಾಡುವ ಟ್ಯಾಂಕರ್, ಬಸ್ಗಳಿ ಡಿಜಿಟಲ್ ಲಾಕರ್ ಆಳವಡಿಕೆ ಮಾಡಿ ಅಕ್ರಮ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗಿದೆ.












Click it and Unblock the Notifications