ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 5: ಮಹರ್ಷಿ ವಾಲ್ಮೀಕಿ ಜಯಂತಿಯ ದಿನ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
In Pics:ಸಿದ್ದರಾಮಯ್ಯ ಅನಾವರಣಗೊಳಿಸಿದ ಮಹರ್ಷಿ ವಾಲ್ಮೀಕಿ ಪ್ರತಿಮೆಯ ಚಿತ್ರಗಳು
ಶಾಸಕರ ಭವನದಲ್ಲಿ ಆವರಣದಲ್ಲಿ ಮನಮೋಹಕ ವಾಲ್ಮೀಕಿ ತಪೋವನ ನಿರ್ಮಿಸಲಾಗಿದ್ದು ಈ ತಪೋವನದಲ್ಲಿ ಈ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.
ವಾಲ್ಮೀಕಿ ಜಯಂತಿ: ಟ್ವಿಟ್ಟರ್ ನಲ್ಲಿ ಶುಭಹಾರೈಸಿದ ಗಣ್ಯರು
ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ವಾಲ್ಮೀಕಿ ಜಯಂತಿ ಸಮಾರಂಭವನ್ನು ಪಕ್ಷದ ಕಚೇರಿಯಲ್ಲಿ ದೀಪ ಬೆಳಗುವ ಮೂಲಕ ಆಚರಿಸಿದರು.
12 ಅಡಿ ಎತ್ತರದ ಕಪ್ಪು ಶಿಲೆ ವಿಗ್ರಹ
ಸಿದ್ದರಾಮಯ್ಯ ಅನಾವರಣ ಮಾಡಿದ ಭವ್ಯ ವಾಲ್ಮೀಕಿ ಪ್ರತಿಮೆಯನ್ನು ವಾಲ್ಮೀಕಿ ಜನಾಂಗದವರು 50 ಲಕ್ಷ ರೂ. ವೆಚ್ಚದಲ್ಲಿ ಕೆತ್ತನೆ ಮಾಡಿದ್ದಾರೆ. 25 ಟನ್ ತೂಕದ 12 ಅಡಿ ಎತ್ತರದ ಕಪ್ಪು ಶಿಲೆ ವಿಗ್ರಹವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೆತ್ತಿಸಲಾಗಿದೆ.
ಒಂದು ಕೋಟಿ ವೆಚ್ಚದಲ್ಲಿ ತಪೋವನ ನಿರ್ಮಾಣ
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಾಲ್ಮೀಕಿ ತಪೋವನದಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಪುಥ್ಥಳಿ ಸುತ್ತಲೂ ತೋಟಗಾರಿಕೆ ಇಲಾಖೆ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಗೊಳಿಸಿದೆ. ಸೀತೆ, ಲವ-ಕುಶ ಹಾಗೂ ಕೆಲವು ಪ್ರಾಣಿ-ಪಕ್ಷಿಗಳ ಪ್ರತಿಕೃತಿಯನ್ನು ಇಲ್ಲಿ ಅಳವಡಿಸಲಾಗಿದೆ.
ವಾಲ್ಮೀಕಿ ಜಯಂತ್ಯೋತ್ಸವ ಉದ್ಘಾಟನೆ
ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ನಂತರ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ವಾಲ್ಮೀಕಿ ಪ್ರಶಸ್ತಿ ಪ್ರದಾನ
ಈ ಸಂದರ್ಭ ಮಾಜಿ ಸಚಿವ ತಿಪ್ಪೇಸ್ವಾಮಿ ಅವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಳ್ಳಕೆರೆ ಮೂಲದ ತಿಪ್ಪೇಸ್ವಾಮಿಯವರು ವಾಲ್ಮೀಕಿ ಜನಾಂಗಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಯು ಐದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಬಿಜೆಪಿ ಕಚೇರಿಯಲ್ಲೂ ವಾಲ್ಮೀಕಿ ಜಯಂತಿ
ಪಕ್ಷದ ಕೇಂದ್ರ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, "ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದ ಸಂಸ್ಕೃತದ ಆದಿ ಕವಿ ವಾಲ್ಮೀಕಿಗಳ ಕೊಡುಗೆ ಅನನ್ಯ," ಎಂದು ಹೇಳಿದರು.
ರಾಮರಾಜ್ಯದ ಪರಿಕಲ್ಪನೆಯನ್ನು ನಮಗೆ ನೀಡಿರುವುದೇ ಮಹರ್ಷಿ ವಾಲ್ಮೀಕಿ ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬಣ್ಣಿಸಿದರು.