ಕಿಲ್ಲರ್ ಕರ್ನಾಟಕ: ಸಿದ್ದು ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಮರೀಚಿಕೆಯೇ?
Recommended Video
ಬೆಂಗಳೂರು, ಸೆಪ್ಟೆಂಬರ್ 7: ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿದೆ. ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಮತ್ತು ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಕರ್ನಾಟಕ ಸರ್ಕಾರಕ್ಕೆ ಕಾನೂನು-ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೆ ಬರುವುದಿಲ್ಲ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದೆ!
ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಆರ್ ಎಸ್ ಕಾರ್ಯಕರ್ತರ, ವಿಚಾರವಾದಿಗಳ ಹತ್ಯೆ ರಾಜ್ಯಕ್ಕೆ "ಕಿಲ್ಲರ್ ಕರ್ನಾಟಕ" ಎಂಬ ಬಿರುದನ್ನು ನೀಡಿದೆ.
ಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯ
ಒಬ್ಬ ಹಿರಿಯ ಪತ್ರಕರ್ತೆ, ಟ್ಯಾಬ್ಲಾಯ್ಡ್ ಪತ್ರಿಕೆ(ಲಂಕೇಶ್ ಪತ್ರಿಕೆ)ಯೊಂದರ ಸಂಪಾದಕಿ ತಮ್ಮ ಮನೆಯ ಬಳಿಯಲ್ಲಿ ಕೊಲೆಯಾಗುವುದು ಎಂದರೆ ಅದು ನಿರ್ಲಕ್ಶ್ಯಿಸುವ ಸಂಗತಿಯಲ್ಲ.
ಸೆಪ್ಟೆಂಬರ್ 5 ರಂದು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿ 55 ವರ್ಷದ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡುಹಾರಿಸಿ ಸಾಯಿಸಿದ್ದರು. ಆದರೆ ಗೌರಿ ಅವರಿಗೆ ಪ್ರಾಣ ಬೆದರಿಕೆ ಇತ್ತೆ? ಇರುವುದಾದರೆ ಅವರೇಕೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ.
ಸಿದ್ದರಾಮಯ್ಯ ರಾಜಿನಾಮೆಗೆ ಟ್ವಿಟ್ಟರಿಗರ ಆಗ್ರಹ
ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಯಾಗಿದ್ದ ವಿಚಾರವಾದಿ ಎಂ.ಎಂ.ಕಲಬುರ್ಗಿ ಯವರನ್ನು ಆಗಸ್ಟ್ 30 ಗುಂಡಿಕ್ಕಿ ಸಾಯಿಸಿದ ಸನ್ನಿವೇಶಕ್ಕೂ, ಗೌರಿ ಲಂಕೇಶ್ ಹತ್ಯೆ ಸನ್ನಿವೇಶಕ್ಕೂ ತೀರಾ ಸಾಮ್ಯವಿರುವುದು ಮತ್ತೊಂದು ಅಚ್ಚರಿಯ ವಿಷಯವೆನ್ನಿಸಿದೆ.
ಆತ್ಮೀಯರೊಂದಿಗೇ ವಿರೋಧವಿತ್ತೆ?
ಗೌರಿ ಅವರು ತಮಗೆ ತೀರಾ ಆತ್ಮೀಯರಾದ ಕೆಲವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ತಮಗೆ ಕೆಲವು ಆತ್ಮೀಯರೊಂದಿಗೇ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ ಎಂದಿದ್ದರು ಎಂಬುದು ಗೌರಿ ಅವರನ್ನು ಬಲ್ಲ ಕೆಲವರ ಹೇಳಿಕೆ.
ಭ್ರಷ್ಟಾಚಾರ ಹೊರಹಾಕಲು ಯತ್ನಿಸಿದ್ದು ಮುಳುವಾಯ್ತೆ?
ಕರ್ನಾಟಕದ ಕೆಲವು ಪ್ರಮುಖ ವ್ಯಕ್ತಿ, ಸಂಸ್ಥೆಗಳ ಭ್ರಷ್ಟಾಚಾರದ ಕುರಿತು ತಮ್ಮ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಸರಣಿ ಲೇಖನಗಳನ್ನು ಬರೆಯಲು ನಿರ್ಧರಿಸಿದ್ದರು. ಹಾಗೆಂದು ಅವರೇ ತಮ್ಮ ಆತ್ಮೀಯರೊಂದಿಗೆ ಹೇಳಿಕೊಂಡಿದ್ದರು. ಆ ಲೇಖನಗಳು ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿದ್ದವು! ಇದೇನಾದರೂ ಅವರ ಹಾದಿಗೆ ಮುಳುವಾಯ್ತೆ?
ರಾಷ್ಟ್ರವಾದಿಗಳ ತಲೆಗೆ ಕಟ್ಟುವ ಯತ್ನ?
ಗೌರಿ ಅವರ ಹತ್ಯೆಯಾಗುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕ ಸರ್ಕಾರದ ಹಲವು ಗಣ್ಯ ರಾಜಕಾರಣಿಗಳು ರಾಷ್ಟ್ರವಾದಿಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರು ಈ ಘಟನೆ ಕುರಿತು ಉಪಸಂಹಾರ ನೀಡುವ ಮೊದಲೇ ಹಲವು ಬೇಜವಾಬ್ದಾರಿ ಹೇಳಿಕೆಗಳು ಹೊರಬಂದು ವಿವಾದ ಸೃಷ್ಟಿಸಿತ್ತು.
ಹಳ್ಳಕ್ಕೆ ಬಿತ್ತೇ ಕಾನೂನು ಸುವ್ಯವಸ್ಥೆ?
ಅಷ್ಟೇ ಅಲ್ಲ, ಕಳೆದ ಎರಡೇ ವರ್ಷಗಳಲ್ಲಿ ಕರ್ನಾಟಕದಲ್ಲಿ ಆರ್ ಎಸ್ ಎಸ್, ವಿಎಚ್ ಪಿ ಮತ್ತು ಬಿಜೆಪಿಯ 10 ಕಾರ್ಯಕರ್ತರ ಹತ್ಯೆಯಾಗಿದೆ. ಮೇಲ್ನೋಟಕ್ಕೆ ಇವುಗಳೆಲ್ಲವೂ ರಾಜಕೀಯ ಪ್ರೇರಿತ ಹತ್ಯೆಗಳೇ ಎಂದು ಮೇಲ್ನೋಟಕ್ಕೆ ಅನ್ನಿಸಿಸದ್ದರೂ ಇವುಗಳ ಬಗ್ಗೆ ಇಂದಿಗೂ ಸರಿಯಾದ ತನಿಖೆ ನಡೆದಿಲ್ಲ.
ಕಲಬುರ್ಗಿ ಹತ್ಯೆ
2015 ರಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿತ್ತು. ಹತ್ಯೆಯಾಗಿ ಮೊನ್ನೆ ಆಗಸ್ಟ್ 30 ಕ್ಕೆ ಎರಡು ವರ್ಷ ತುಂಬಿದರೂ ಕೊಲೆಗಾರರನ್ನು ಪತ್ತೆ ಮಾಡುವಲ್ಲಿ ಸರ್ಕಾರ ಸಫಲವಾಗಿಲ್ಲ. ಸಿದ್ದರಾಮಯ್ಯ ಸರ್ಕಾರ ಕಲಬುರ್ಗಿ ಸಾವಿನ ತನಿಖೆಯ ಕುರಿತು ಯಾವುದೇ ಆಸಕ್ತಿ ತೋರುತ್ತಿಲ್ಲ, ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿಯಾಗಿಲ್ಲ ಎಂದು ಸ್ವತಃ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.
ಅನುಮಾನಾಸ್ಪದವಾಗಿ ಸಾವಿಗೀಡಾದ ಅಧಿಕಾರಿಗಳು
ಅನುರಾಗ್ ತಿವಾರಿ, ಡಿ.ಕೆ.ರವಿ, ಎಸ್.ಪಿ.ಮಹಂತೇಶ್, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್, ಎಂ.ಕೆ.ಗಣಪತಿ, ರಾಘವೇಂದ್ರ ಮುಂತಾದ ದಕ್ಷ ಅಧಿಕಾರಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇವುಗಳಲ್ಲಿ ಹಲವು ಪ್ರಕರಣಗಳು ಇಂದಿಗೂ ಇತ್ಯರ್ಥವಾಗದೆ ಉಳಿದಿವೆ. ಇತ್ಯರ್ಥವಾದ ಪ್ರಕರಣಗಳಲ್ಲೂ ಪಾರದರ್ಶಕ ತನಿಖೆ ನಡೆಸಿರುವ ಕುರಿತು ಜನರಲ್ಲೂ ವಿಶ್ವಾಸವಿಲ್ಲ!
ಗೊಂದಲ ಮೂಡಿಸುವ ಸಿದ್ದು ಹೇಳಿಕೆ
ಗೌರಿ ಲಂಕೇಶ್ ಹತ್ಯೆಯ ನಂತರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, "ಪ್ರಗತಿಪರ ನಾಯಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತೀವ್ರ ಆಘಾತ ತಂದಿದೆ. ಇಂಥ ಹತ್ಯೆಗೆ ನನ್ನ ಧಿಕ್ಕಾರ" ಎಂದು ಹೇಳಿಕೆ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ, "ಕರ್ನಾಟಕ ಸರ್ಕಾರ ಎಲ್ಲಾ 'ಪ್ರಗತಿಪರ' ಪತ್ರಕರ್ತರಿಗೂ ರಕ್ಷಣೆ ನೀಡಲಿದೆ" ಎಂಬ ಹೇಳಿಕೆಯನ್ನೂ ನೀಡಿದ್ದರು. ಹಾಗಾದರೆ ಸಿದ್ದರಾಮಯ್ಯ ಅವರ ಪ್ರಕಾರ 'ಪ್ರಗತಿಪರ ಪತ್ರಕರ್ತರು' ಯಾರು? ಅದನ್ನು ಅವರು ಹೇಗೆ ವ್ಯಾಖ್ಯಾನಿಸುತ್ತಾರೆ? ರಾಷ್ಟ್ರವಾದಿಗಳನ್ನು ವಿರೋಧಿಸುವವರನ್ನೇ ಸಿದ್ದರಾಮಯ್ಯ ಪ್ರಗತಿಪರರು ಎಂದು ಕರೆದರೇ? ಎಂಬ ಹತ್ತು ಹಲವಾರು ಪ್ರಶ್ನೆಗಳು ಸಿದ್ದರಾಮಯ್ಯ ಹೇಳಿಕೆಯ ನಂತರ ಹುಟ್ಟಿಕೊಂಡವು!
ಪೊಲೀಸರಿಗೂ ಮೊದಲೇ ತನಿಖೆ ನಡೆಸಿದ ಜಯಚಂದ್ರ!
ಗೌರಿ ಹತ್ಯೆಯ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬರುವ ಮೊದಲೇ ಕರ್ನಾಟಕ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಗೌರಿ ಲಂಕೇಶ್ ಹತ್ಯೆಗೂ, 2015 ರ ಕಲಬುರ್ಗಿ ಹತ್ಯೆಗೂ ಸಾಮ್ಯವಿದೆ. ಈ ಎರಡೂ ಕೊಲೆಗಳಿಗೂ ಇರುವ ಸಂಬಂಧವನ್ನು ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಪೊಲೀಸ್ ತನಿಖೆ ನಡೆಯುವ ಮೊದಲೇ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಂಥ ಹೇಳಿಕೆ ನೀಡುವುದು ಸರಿಯೇ ಎಂಬ ಪ್ರಶ್ನೆಯೂ ಎದ್ದಿತ್ತು.
ಭಾರತದಲ್ಲಿ ಪತ್ರಕರ್ತರ ಹತ್ಯೆ
ಸಿಪಿಜೆ (Committee to protect journalists) 2016 ರಲ್ಲಿ ನೀಡಿದ ವರದಿಯೊಂದರ ಪ್ರಕಾರ ಭಾರತದಲ್ಲಿ 1992 ರ ಈಚೆಗೆ 27 ಪತ್ರಕರ್ತರ ಹತ್ಯೆಯಾಗಿದೆ. ಇವುಗಳಲ್ಲಿ 25 ಹತ್ಯೆಗಳು ಅವರ ಪತ್ರಿಕಾ ವೃತ್ತಿಗೆ ಸಂಬಂಧಿಸಿದ ವಿಷಯಕ್ಕಾಗಿ ಸಂಭವಿಸಿದೆ ಎಂಬುದು ದೃಢವಾಗಿದೆ.