ಫಾಲಿ ಎಸ್ ನಾರಿಮನ್ ಭೇಟಿಯಾದ ಸಿದ್ದರಾಮಯ್ಯ
ನವದೆಹಲಿ, ಸೆಪ್ಟೆಂಬರ್ 03 : ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರನ್ನು ಭೇಟಿ ಮಾಡಿದರು. ಕಾವೇರಿ ನದಿ ನೀರು ಬಿಡುಗಡೆ ಕುರಿತು ಚರ್ಚೆ ನಡೆಸಿದರು.
ಶನಿವಾರ ಬೆಳಗ್ಗೆ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತು ಸರ್ಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಮುಂತಾದವರು ದೆಹಲಿಯಲ್ಲಿರುವ ಫಾಲಿ ಎಸ್ ನಾರಿಮನ್ ಅವರ ಮನೆಗೆ ಭೇಟಿ ನೀಡಿದ್ದರು.[ತಮಿಳ್ನಾಡಿಗೆ ಕಾವೇರಿ ಬಿಡಲೇಬೇಕು : ಸುಪ್ರೀಂಕೋರ್ಟ್ ಆಜ್ಞೆ!]

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಈ ಭೇಟಿ ಮಹತ್ವ ಪಡೆದಿತ್ತು. ತಮಿಳುನಾಡಿಗೆ ಎಷ್ಟು ನೀರು ಬಿಡಲು ಸಾಧ್ಯ? ಎಂದು ಕರ್ನಾಟಕ ಸೋಮವಾರ ಕೋರ್ಟ್ಗೆ ತಿಳಿಸಬೇಕು.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಕಾವೇರಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಶಾಂತಿ ಕಾಪಾಡಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್, ಕಾವೇರಿ ನ್ಯಾಯಾಧೀಕರಣದ ಆದೇಶವನ್ನು ಧಿಕ್ಕರಿಸಿ ನೀರು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀರು ಹರಿಸುವ ಪ್ರಯತ್ನವನ್ನಾದರೂ ಮಾಡಬೇಕು ಎಂದು ಹೇಳಿದೆ.[65 ಟಿಎಂಸಿಯಲ್ಲಿ 50 ಟಿಎಂಸಿ ಕೊಟ್ಟರೆ ಉಳಿಯುವುದೆಷ್ಟು!?]

ಆದ್ದರಿಂದ, ಫಾಲಿ ಎಸ್ ನಾರಿಮನ್ ಅವರನ್ನು ಭೇಟಿ ಮಾಡಿರುವ ಸಿದ್ದರಾಮಯ್ಯ ಅವರು, ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಕರ್ನಾಟಕ ಸರ್ವಪಕ್ಷ ಸಭೆಯಲ್ಲಿಯೂ ತೀರ್ಮಾನ ಕೈಗೊಳ್ಳಲಾಗಿದೆ.












Click it and Unblock the Notifications