ಸಿಎಂ ಸಿದ್ದರಾಮಯ್ಯರ ಸ್ನೇಹಿತ ಪೇಪರ್ ಕದ್ದುಕೊಂಡು ಹೋಗುತ್ತಿದ್ದರಂತೆ!
ಬೆಂಗಳೂರಲ್ಲಿ ಕನ್ನಡಿಗರ ಸಂಖ್ಯೆ ಕುಸಿಯುತ್ತಾ ಸಾಗಿದೆ, ಇನ್ನೇನು ಕೆಲವೇ ವರ್ಷದಲ್ಲಿ ಈ ನಗರ ಸಂಪೂರ್ಣ ಪರಭಾಷಿಕರ ಹಿಡಿತಕ್ಕೆ ಸಿಲುಕಿಬಿಡುತ್ತದೆ. ಹೀಗೆ ಬೆಂಗಳೂರಿನ ಕುರಿತಾಗಿ ಕನ್ನಡಿಗರಲ್ಲಿ ಆತಂಕ ಆವರಿಸಿದೆ, ಇದಕ್ಕೆಲ್ಲ ಕಾರಣ ಕರ್ನಾಟಕದ ರಾಜಧಾನಿಗೆ ಹೊರಗಿನ ರಾಜ್ಯಗಳ ಜನರು ಹೆಚ್ಚಾಗಿ ಬಂದು ವಾಸ ಮಾಡುತ್ತಿರುವುದು. ಹೀಗಿದ್ದಾಗಲೇ ಕನ್ನಡಿಗರು, ತಮ್ಮ ಶಕ್ತಿ ತೋರಿಸುತ್ತಿದ್ದಾರೆ. ಹೀಗೆ ಕನ್ನಡಿಗರು ಶಕ್ತಿ ತೋರಿಸಿದ ಕಾರ್ಯಕ್ರಮಕ್ಕೆ ನಮ್ಮ ನಾಡಿನ ಸಿಎಂ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದಾರೆ.
ಅಂದಹಾಗೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಇಂದು ಎಚ್ಎಸ್ಆರ್ ಬಡಾವಣೆ ಪ್ರದೇಶದಲ್ಲಿ ನಡೆದ 'ಪುಸ್ತಕ ಸಂತೆ' ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡು ಕನ್ನಡಿಗರಿಗೆ ಕಿವಿ ಮಾತನ್ನೂ ಹೇಳಿದ್ರು. 'ಪುಸ್ತಕ ಸಂತೆ' ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರೇ ಆದರೂ ದುಡ್ಡು ಕೊಟ್ಟು ಪುಸ್ತಕ ಖರೀದಿ ಮಾಡಿ ಓದಬೇಕು. ಯಾರದ್ದೋ ಹಣದಲ್ಲಿ ಉಚಿತ ಪುಸ್ತಕ ಓದಬೇಡಿ. ಹೀಗೆ ದುಡ್ಡು ಕೊಟ್ಟು ಪುಸ್ತಕ ಓದಿದರೆ, ಜ್ಞಾನ ಹೆಚ್ಚುತ್ತೆ ಎಂದು ಸಿಎಂ ಸಿದ್ದರಾಮಯ್ಯ ಕನ್ನಡಿಗರಿಗೆ ಸಲಹೆ ನೀಡಿದರು.

ಪೇಪರ್ ಕದಿಯುತ್ತಿದ್ದ ಫ್ರೆಂಡ್ ಬಗ್ಗೆ!
ಅಷ್ಟಕ್ಕೂ ಬೆಂಗಳೂರಿನ ಎಚ್ಎಸ್ಆರ್ ಬಡಾವಣೆ ತುಂಬಾ ಅನ್ಯಭಾಷಿಕರೇ ಇದ್ದಾರೆ ಎಂಬ, ಆರೋಪ ಇದೆ. ಪರಭಾಷಿಕರ ಕಾರಣದಿಂದ ಇಲ್ಲಿ, ಕನ್ನಡತನ ದಿನೇ ದಿನೇ ಕ್ಷೀಣಿಸುತ್ತಿದೆ. ಈ ಭಾಗದ ಕನ್ನಡ ಮಕ್ಕಳಿಗೆ ಕನ್ನಡದ ಓದು, ಹಬ್ಬ ಮರೆತೇ ಹೋಗುತ್ತಿವೆ ಎಂಬ ಮಾತೂ ಆಗಾಗ ಕಿವಿಗೆ ಬೀಳುತ್ತಿದೆ. ಈ ಹಿನ್ನೆಲೆ ಕನ್ನಡ ಸಂಸ್ಕೃತಿ ಪಸರಿಸುವ "ಪುಸ್ತಕ ಸಂತೆ" ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ಆಗ ತಮ್ಮ ಸ್ನೇಹಿತ ರಾಮೇಗೌಡ, ಹೇಗೆ ಪೇಪರ್ ತಗೊಂಡು ಹೋಗ್ತಾ ಇದ್ರು ಅನ್ನೋದನ್ನೂ ಹೇಳಿದರು.
ಸಿದ್ದರಾಮಯ್ಯ ಅವರ ಪೇಪರ್ ಕಹಾನಿ!
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನ ಮುಕ್ತವಾಗಿಯೇ, ಎಲ್ಲರ ಎದುರು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇಂದು ಕೂಡ ಪುಸ್ತಕ ಸಂತೆ ಉದ್ಘಾಟನೆ ಮಾಡಿದ ಅವರು ಮಾತನಾಡಿದರು. ಆಗ ತಾವು ತಮ್ಮ ಊರು ಮೈಸೂರಿನ ಸಿದ್ಧರಾಮನ ಹುಂಡಿಗೆ ಹೋದಾಗ, ಪೇಪರ್ ತರಿಸುತ್ತಿದ್ದ ವಿಚಾರ ತಿಳಿಸಿದರು. ಇದೇ ವೇಳೆ ತಾವು ಹೀಗೆ ತರಿಸುತ್ತಿದ್ದ ಪೇಪರ್ ಅನ್ನ ತಮ್ಮ ಸ್ನೇಹಿತ ರಾಮೇಗೌಡ ಮನೆಗೆ ತೆಗೆದುಕೊಂಡು ಹೋಗ್ತಾ ಇದ್ರು. ನನಗೆ ವಾಪಸ್ ಕೊಡುತ್ತಿರಲಿಲ್ಲ, ಆದರೆ ಅವರು ಇಂದು ನಮ್ಮ ಜೊತೆ ಇಲ್ಲ. ಈ ರೀತಿ ಓದುವುದು ಬೇಡ, ನೀವು ದುಡ್ಡು ಕೊಟ್ಟು ಪುಸ್ತಕ ಕೊಂಡು ಓದಬೇಕು ಎಂದರು.

ಈ ಪುಸ್ತಕ ಸಂತೆಯಲ್ಲಿ, ಕನ್ನಡ ನಾಡಿನ ಸುಮಾರು 135ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಿ ಬೆಂಬಲ ನೀಡಿದ್ದರು. ನೂರಾರು ಸಾಹಿತಿಗಳು & ಸಾವಿರಾರು ಓದುಗರು ಪುಸ್ತಕ ಸಂತೆಗೆ ಬಂದು ಕನ್ನಡತನ ಮೆರೆದರು. ಕನ್ನಡ ಓದುವ ಸಂಸ್ಕೃತಿ ಪಸರಿಸುವ ದೃಷ್ಠಿಯಿಂದ ಈ ಪುಸ್ತಕ ಸಂತೆ ಗಮನ ಸೆಳೆದಿದೆ. ವೀರಕಪುತ್ರ ಶ್ರೀನಿವಾಸ್ ಹಾಗೂ ಅನಿಲ್ ರೆಡ್ಡಿ ಸಾರಥ್ಯದಲ್ಲಿ ಈ ಪುಸ್ತಕದ ಸಂತೆ ಆಯೋಜನೆ ಮಾಡಲಾಗಿತ್ತು. ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ ಅವರು, ಈ ಪುಸ್ತಕ ಸಂತೆ ಮುಂದಾಳತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡಿಗರ ಮೆಚ್ಚಿನ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೂಡ ಭಾಗವಹಿಸಿದ್ದರು.












Click it and Unblock the Notifications