ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆಯಿತು ಬಾಲ್ಯವಿವಾಹ
ಬಿಜಾಪುರ, ಮೇ 14 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭಾಗವಹಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 17 ಜೋಡಿಗಳು ಬಾಲ್ಯ ವಿವಾಹವಾದ ಘಟನೆ ನಡೆದಿದೆ. ಬಿಜಾಪುರ ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಮತ್ತು ಸಿಂಧಗಿ ಆಸ್ಪತ್ರೆಯ ವೈದ್ಯರು ಸಹ 17 ವಧುಗಳು ಅಪ್ರಾಪ್ತರು ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂಗಳವಾರ ಬಿಜಾಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಕೆಂಚರಾಯ ದೇವರ ನೂತನ ದೇವಸ್ಥಾನ ದೀಪಸ್ತಂಭದ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು. ಅದರಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ದೇವಾಲಯದ ಕಾರ್ಯಕ್ರಮ ನಿಮಿತ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಲ್ಲಿ 42 ಜೋಡಿಗಳು ವಿವಾಹವಾದರು.

ಆದರೆ, ಇವರಲ್ಲಿ 17 ವಧುಗಳು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ ಎಂಬ ಅಂಶ ವಿವಾಹದ ನಂತರ ಬೆಳಕಿಗೆ ಬಂದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮಕ್ಕಳ ಸಹಾಯವಾಣಿ 1098 ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ, ಕಾರ್ಯಕ್ರಮ ಸಂಯೋಜಕರು ನೀಡಿರುವ ವಧು-ವರರ ಮಾಹಿತಿ ಹಾಗೂ ಭಾವಚಿತ್ರಗಳು ಬೇರೆಯಾಗಿವೆ.[ಸಿದ್ದರಾಮಯ್ಯ ಸರ್ಕಾರದ 10 ವಿವಾದಗಳು]
ವಿವಾಹವಾದವರಿಗೂ ನೀಡಿರುವ ವಧು-ವರರ ಮಾಹಿತಿಗೂ ಯಾವುದೇ ಹೋಲಿಕೆ ಕಂಡುಬಂದಿಲ್ಲ. ಈ ಹಿನ್ನಲೆಯಲ್ಲಿ ಅನುಮಾನಬಂದ ವಧುಗಳನ್ನು ಸಿಂದಗಿಯ ಸರ್ಕಾರಿ ಆಸ್ಪತ್ರೆ ದಂತ ವೈದ್ಯಾಧಿಕಾರಿ ಡಾ.ರಮೇಶ ರಾಠೊಡ ಅವರ ಸಹಾಯದೊಂದಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಗ, 17 ವಧುಗಳು ಅಪ್ರಾಪ್ತರು ಎಂಬ ವಿಷಯ ತಿಳಿದುಬಂತು ಎಂದು ಹೇಳಿದ್ದಾರೆ.
ಮಾಹಿತಿ ಇರಲಿಲ್ಲ : ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಂಧು ಬಡಿಗೇರ್, ಬಾಲ್ಯ ವಿವಾಹದ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಮೇ 9ರಂದು ಸಾಮೂಹಿಕ ವಿವಾಹದ ಬಗ್ಗೆ ಮಾಹಿತಿ ದೊರಕಿತು. 51 ಜೋಡಿಗಳ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇವರಲ್ಲಿ 7 ವಧುಗಳ ಹೆಸರುಗಳನ್ನು ಅಪ್ರಾಪ್ತರು ಎಂದು ನಾವೇ ತಿರಸ್ಕರಿಸಿದೆವು ಎಂದು ಹೇಳಿದ್ದಾರೆ.












Click it and Unblock the Notifications