ತರೀಕೆರೆಯ ಮನೆ ಮನೆಗೂ ಕುಡಿಯುವ ನೀರು ಪೂರೈಕೆ: ಸಿಎಂ ಬೊಮ್ಮಾಯಿ
ಚಿಕ್ಕಮಗಳೂರು, ನವೆಂಬರ್ 15: ಮುಂದಿನ ದಿನಗಳಲ್ಲಿ ತರೀಕೆರೆಯ ಮನೆ ಮನೆಗೂ ಕುಡಿಯುವ ನೀರನ್ನು ತಲುಪಿಸುವ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಲಾಗುವುದು. ಇದಕ್ಕೆ ಅವಶ್ಯವಿರುವ ಹಣಕಾಸಿನ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕಡಿಯುವ ನೀರು ಯೋಜನೆ ಚಾಲನೆ ನೀಡಿ ಮಾತನಾಡಿದ ಅವರು, ಜಲಜೀವನ ಮಿಷನ್ ಯೋಜನೆಯಡಿ 375 ಕೋಟಿ ರೂ. ವೆಚ್ಚದಲ್ಲಿ 156 ಜನವಸತಿಗಳ ಮನೆಮನೆಗಳಿಗೆ ಕುಡಿಯುವ ನೀರು ಯೋಜನೆ, ಘರ್ ಘರ್ ಗಂಗಾ ಯೋಜನೆಯಡಿ ಅಜ್ಜಂಪುರ ಭಾಗದಲ್ಲಿ 249 ಕೋಟಿ ರೂ. ಗಳಲ್ಲಿ 172 ಗ್ರಾಮೀಣ ವಸತಿಗಳಿಗೆ ಕುಡಿಯುವ ನೀರು ಯೋಜನೆ ಸೇರಿ ಒಟ್ಟು 669 ಕೋಟಿ ರೂ. ಗಳ ಬೃಹತ್ ಯೋಜನೆ ತರೀಕೆರೆಯಲ್ಲಿ ಕೈಗೊಳ್ಳಲಾಗಿದೆ. ಈ ಕುಡಿಯುವ ನೀರಿನ ಯೋಜನೆ ದೊಡ್ಡ ಕ್ರಾಂತಿಯನ್ನು ಮಾಡುತ್ತಿದೆ ಎಂದರು.
ಜಲಜೀವನ ಮಿಷನ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ 7 ಕೋಟಿಗಿಂತಲೂ ಹೆಚ್ಚು ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಕರ್ನಾಟಕ ರಾಜ್ಯ ಕಳೆದೊಂದು ವರ್ಷದಲ್ಲಿ 30 ಲಕ್ಷಕ್ಕಿಂತಲ್ಲೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಿದೆ. ಈ ಯೋಜನೆಗೆ ಸರ್ಕಾರ 9000 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿದೆ ಎಂದರು.

ಅಮೃತ ಯೋಜನೆಯಡಿ 16000 ಹೆಣ್ಣುಮಕ್ಕಳಿಗೆ ಧನಸಹಾಯ
ಅಮೃತ ಯೋಜನೆಯಡಿ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯಧನ ಯೋಜನೆಯಡಿ ಈ ಭಾಗದ 16000 ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತಹ ಈ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮಾದರಿ ಜಿಲ್ಲೆಯಾಗಿ ಪರಿವರ್ತನೆಯಾಗುತ್ತಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಸದ್ವಿನಿಯೋಗವಾಗಬೇಕು. ಶಿಕ್ಷಣ, ಗ್ರಾಮ ನೈರ್ಮಲ್ಯ ಹಾಗೂ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳು ನಡೆಯುತ್ತದೆ ಎಂದರು.
ತರೀಕೆರೆ ಭಾಗದ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನವನ್ನು ನೀಡಿ, ಏತನೀರಾವರಿಯ ಎರಡನೇ ಹಂತಕ್ಕೆ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಯೋಜನೆಯ 3 ನೇ ಹಂತದ ಕಾಮಗಾರಿಗೂ ಸಹ ಸಧ್ಯದಲ್ಲಿಯೇ ಅನುದಾನ ನೀಡಲಾಗುವುದು. ತರೀಕೆರೆ ಅಭಿವೃದ್ಧಿಶೀಲವಾಗಿರುವುದಕ್ಕೆ ಶಾಸಕರಾದ ಡಿ.ಎಸ್.ಸುರೇಶ್ ಪರಿಶ್ರಮವೇ ಕಾರಣ. ಸರಳ ಸಜ್ಜನ ಜನನಾಯಕರು. ಸದ್ದುಗದ್ದಲವಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಬೈರತಿ ಬಸವರಾಜ, ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಹಾಗೂ ಮತ್ತಿತರರು ಹಾಜರಿದ್ದರು.












Click it and Unblock the Notifications