ಅತೃಪ್ತರ ಬೇಡಿಕೆ ಈಡೇರಿಸಲು ಮುಂದಾದ ಎಚ್ಡಿಕೆ, ಇದು ಕೊನೆ ಅವಕಾಶ
Recommended Video
ಬೆಂಗಳೂರು, ಫೆಬ್ರವರಿ 12: ಮುಂಬೈ ಸೇರುತ್ತಿರುವ ಅತೃಪ್ತ ಶಾಸಕರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿರುವ ಕಾರಣ ಆತಂಕಕ್ಕೆ ಒಳಗಾಗಿರುವ ಸಿಎಂ ಕುಮಾರಸ್ವಾಮಿ ಅವರು ಅತೃಪ್ತ ಶಾಸಕರ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ರಾತ್ರಿ ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಜೊತೆ ಮಾತನಾಡಿದ್ದಾರೆ, ಜೊತೆಗೆ ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದು, ಅತೃಪ್ತರನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನ ಮಾಡಿರೆಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ರಮೇಶ್ ಜಾರಕಿಹೊಳಿ ಮತ್ತು ಉಳಿದ ಅತೃಪ್ತರ ಜೊತೆ ಮಾತುಕತೆ ಮಾಡಲು ತಯಾರಾಗಿದ್ದು, ಇಂದು ದೂರವಾಣಿ ಮೂಲಕ ಮಾತುಕತೆ ನಡೆಯಲಿದೆ. ಅತೃಪ್ತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ಸಾಧ್ಯತೆ ಇದೆ.
ಕೋಲಾರ ಜೆಡಿಎಸ್ ಶಾಸಕರಿಗೆ 30 ಕೋಟಿ ಆಫರ್, 5 ಕೋಟಿ ಅಡ್ವಾನ್ಸ್
ಕೆಪಿಸಿಸಿಯು ಈಗಾಗಲೇ ನಾಲ್ವರು ಅತೃಪ್ತ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ದೂರು ನೀಡಿದೆ. ಹಾಗಾಗಿ ಅತೃಪ್ತ ಶಾಸಕರ ಮನವೊಲಿಸುವ ಯತ್ನವನ್ನು ರಾಜ್ಯ ಕಾಂಗ್ರೆಸ್ ಮುಖಂಡರು ಕೈಬಿಟ್ಟಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ನಾಯಕರ ಬದಲಾಗಿ ಕುಮಾರಸ್ವಾಮಿ ಅವರು ಈ ಯತ್ನಕ್ಕೆ ಕೈ ಹಾಕಿದ್ದಾರೆ.
ಬಿಜೆಪಿಯನ್ನು ಕಟ್ಟಿಹಾಕಿರುವ ಕುಮಾರಸ್ವಾಮಿ
ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಕಲೆ ಹಾಕಿ ಸರ್ಕಾರ ರಚನೆಗೆ ಒಂದೊಂದೆ ಮೆಟ್ಟಿಲು ಹತ್ತಿರವಾಗುತ್ತಿದ್ದ ಯಡಿಯೂರಪ್ಪ ಅವರನ್ನು ಆಡಿಯೋ ಕ್ಲಿಪ್ ವಿಚಾರ ಕೆದಕಿ ಕುಮಾರಸ್ವಾಮಿ ಕಟ್ಟಿಹಾಕಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯು ಹಿನ್ನಡೆ ಅನುಭವಿಸಿದೆ. ಇದೇ ವಿಷಯವನ್ನು ಅತೃಪ್ತರ ಬಳಿ ಚರ್ಚಿಸಿ ಅವರ ಮನವೊಲಿಸುವ ಯತ್ನವನ್ನು ಕುಮಾರಸ್ವಾಮಿ ಮಾಡಲಿದ್ದಾರೆ.
ನಾಲ್ವರು ಶಾಸಕರ ಅಮಾನತಿಗೆ ಕೋರಿ ಸಿದ್ದರಾಮಯ್ಯರಿಂದ ದೂರು
ನಾಲ್ಕು ಅತೃಪ್ತ ಶಾಸಕರ ವಿರುದ್ಧ ದೂರು
ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ನಾಗೇಂದ್ರ, ಮಹೇಶ್ ಕುಮಟಳ್ಳಿ ಅವರುಗಳ ವಿರುದ್ಧ ಈಗಾಗಲೇ ಕೆಪಿಸಿಸಿ ದೂರು ನೀಡಿದೆ. ಅವರ ಜೊತೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರೂ ಹಾಗೂ ಜೆಡಿಎಸ್ನ ಶಾಸಕರೊಬ್ಬರು ಸಹ ಮುಂಬೈನಲ್ಲಿ ಇದ್ದಾರೆ ಎನ್ನಲಾಗಿದೆ.
ಸರ್ಕಾರ ಉರುಳುವ ಭೀತಿಯಲ್ಲಿ ಎಚ್ಡಿಕೆ
ಈಗಾಗಲೇ ಇಬ್ಬರು ಪಕ್ಷೇತರ ಶಾಸಕರ ಬೆಂಬಲವನ್ನು ಕಳೆದುಕೊಂಡಿರುವ ಮೈತ್ರಿ ಸರ್ಕಾರ, ಈಗ ಮತ್ತೂ ಆರು ಜನ ಶಾಸಕರ ಬಲ ಕಳೆದುಕೊಂಡರೆ ಆತಂಕಕ್ಕೆ ಒಳಗಾಗಲಿದೆ ಹಾಗಾಗಿ ಸರ್ಕಾರವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಕುಮಾರಸ್ವಾಮಿ ಅವರೇ ಅತೃಪ್ತರ ಜೊತೆ ಮಾತನಾಡುವ ಅಂತಿಮ ಪ್ರಯತ್ನ ಮಾಡಲಿದ್ದಾರೆ.
ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನವನ್ನು ವಾಪಸ್ ನೀಡುವ ಭರವಸೆಯನ್ನು ಕುಮಾರಸ್ವಾಮಿ ಕಾಂಗ್ರೆಸ್ ಪರವಾಗಿ ಮಾಡಲಿದ್ದಾರೆ ಎನ್ನಲಾಗಿದೆ. ಯು.ಟಿ.ಖಾದರ್ ಅವರ ಬಳಿ ಇರುವ ನಗರಾಭಿವೃದ್ಧಿ ಖಾತೆಯನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀಡುವ ಸಾಧ್ಯತೆ ಇದೆ. ಆದರೆ ಇದಕ್ಕೆ ರಮೇಶ್ ಜಾರಕಿಹೊಳಿ ಒಪ್ಪಿಕೊಳ್ಳಬೇಕು ಅಷ್ಟೆ.