ಅತ್ತಿದ್ದು ಕಾಂಗ್ರೆಸ್ನಿಂದಲ್ಲ, ಅದು ಮಾಧ್ಯಮಗಳ ಸೃಷ್ಟಿಯಷ್ಟೆ: ಕುಮಾರಸ್ವಾಮಿ
ಬೆಂಗಳೂರು, ಜುಲೈ 17: ಕಾಂಗ್ರೆಸ್ ಪಕ್ಷ ಅಥವಾ ಕಾಂಗ್ರೆಸ್ ಮುಖಂಡರು ನನಗೆ ಕಿರುಕುಳು ಕೊಟ್ಟಿದ್ದಾರೆ ಎಂದು ಹೇಳಿ ಕಣ್ಣೀರು ಹಾಕಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯ ಕನ್ನಡ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಭಾವತಃ ಭಾವನಾತ್ಮಕ ಜೀವಿಯಾದ ನಾನು ಕಷ್ಟಪಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿಯೂ ಸಹ ಜನರ ಮತ್ತು ಮಾಧ್ಯಮಗಳ ಪ್ರೋತ್ಸಾಹ ಸಿಗುತ್ತಿಲ್ಲವೆಂದು ಕಣ್ಣಿರು ಹಾಕಿದ್ದೇನೆಯೇ ಹೊರತು ಕಾಂಗ್ರೆಸ್ನಿಂದಲ್ಲ ಎಂದು ಅವರು ಹೇಳಿದರು.
ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು
ಪಕ್ಷದ ಸಭೆಯಲ್ಲಿ ನಾನು ಮಾತನಾಡಿದ್ದೇನೆ, ಪಕ್ಷದ ಕಾರ್ಯಕರ್ತರು ನನ್ನ ಕುಟುಂಬ ಸದಸ್ಯರಿದ್ದಂತೆ ಅವರ ಜೊತೆ ಭವನಾತ್ಮಕವಾಗಿ ಮಾತನಾಡಿದ್ದೇನೆ ಆದರೆ ಅದು ನನ್ನ ಬಲಹೀನತೆ ಅಲ್ಲ, ಮುಖ್ಯಮಂತ್ರಿಯಾಗಿ ಕಠಿಣವಾಗಿಯೇ ನಾನು ವರ್ತಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಟಿವಿ ಮಾಧ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಆದಾಗಿನಿಂದಲೂ ನೀವು ಸತ್ಯಕ್ಕೆ ಹತ್ತಿರದ ಸುದ್ದಿಯನ್ನೇ ಪ್ರಸಾರ ಮಾಡುತ್ತಿಲ್ಲ, ಎಲ್ಲ ನಿಮಗೆ ಬೇಕಾದ ಹಾಗೆ ಸುದ್ದಿಯನ್ನು ಗ್ರಹಿಸಿ ಅದೇ ಸತ್ಯವೆನ್ನುವಂತೆ ಜನಗಳ ಮುಂದೆ ಇಡುತ್ತಿದ್ದೀರಿ, ಇದರಿಂದ ಯಾರಿಗೂ ಉಪಯೋಗವಿಲ್ಲ ಎಂದು ನೇರವಾಗಿ ಆರೋಪ ಮಾಡಿದರು.
ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..
ನಾನು ಅಂದು ಮಾತನಾಡಿದ ಸನ್ನಿವೇಶದ ವಿಡಿಯೋ ರೆಕಾರ್ಡ್ ಅನ್ನು ಮತ್ತೊಮ್ಮೆ ನೋಡಿ ನಿರ್ಣಯಕ್ಕೆ ಬನ್ನಿ ಎಂದ ಕುಮಾರಸ್ವಾಮಿ, ನಾನು, ಕಾಂಗ್ರೆಸ್ ಪಕ್ಷ ನನಗೆ ತೊಂದರೆ ನೀಡಿದೆ ಎಂದಾಗಲಿ ಕಾಂಗ್ರೆಸ್ ಮುಖಂಡರು ಕಿರುಕುಳ ನೀಡಿದ್ದಾರೆ ಎಂದಾಗಲಿ ಹೇಳಿಲ್ಲ ಎಂದು ಪುನರ್ ಉಚ್ಚರಿಸಿದರು.