CM Ibrahim : ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ. ಎಂ. ಇಬ್ರಾಹಿಂ ಪದಗ್ರಹಣ
ಬೆಂಗಳೂರು, ಏಪ್ರಿಲ್ 17; ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಜೆಡಿಎಸ್ ಪಕ್ಷವನ್ನು ಸೇರಿದರು. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ತೊರೆದಿದ್ದ ಅವರು, ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಭಾನುವಾರ ಜೆಡಿಎಸ್ ಪಕ್ಷದ ಕಚೇರಿ ಜೆ. ಪಿ. ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿ. ಎಂ. ಇಬ್ರಾಹಿಂ ಪಕ್ಷ ಸೇರಿದರು. ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡರು.
ರಾಜಕೀಯ ವಿಶೇಷ: ಜೆಡಿಎಸ್ಗೆ ಶಕ್ತಿ ತುಂಬುತ್ತಾ ಸಿ.ಎಂ. ಇಬ್ರಾಹಿಂ ಸೇರ್ಪಡೆ?
ಜೆಡಿಎಸ್ ಪಕ್ಷ ಸೇರಿದ ಬಳಿಕ ಸಿ. ಎಂ. ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಅಧಿಕಾರವನ್ನು ಹಸ್ತಾಂತರ ಮಾಡಿದರು. ಈ ಮೂಲಕ ಜೆಡಿಎಸ್ ಪಕ್ಷ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದಲ್ಲಿ ಭಾರೀ ಬದಲಾವಣೆ ಮಾಡಿದೆ.
ಕಾಂಗ್ರೆಸ್ ಬಿಟ್ಟು ಹೊರಟ ಸಿ. ಎಂ. ಇಬ್ರಾಹಿಂ; ಪಕ್ಷಕ್ಕೆ ಭಾರೀ ನಷ್ಟ!
ಸಿ. ಎಂ. ಇಬ್ರಾಹಿಂಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಎಚ್. ಕೆ. ಕುಮಾರಸ್ವಾಮಿ ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಚ್. ಡಿ. ಕುಮಾರಸ್ವಾಮಿ ಉಭಯ ನಾಯಕರನ್ನು ಅಭಿನಂದಿಸಿದರು.
ಹುಬ್ಬಳ್ಳಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಿ. ಎಂ. ಇಬ್ರಾಹಿಂ!
ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, "ಎಚ್. ಕೆ. ಕುಮಾರಸ್ವಾಮಿ ಅವರು ಎರಡೂವರೆ ವರ್ಷಗಳ ಅಂತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ. ಸಿ. ಎಂ. ಇಬ್ರಾಹಿಂ ಪಕ್ಷಕ್ಕೆ ಮರಳಿ ಬಂದಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಿ. ಎಂ. ಇಬ್ರಾಹಿಂ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ" ಎಂದರು.
ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, "ರಾಜ್ಯದ ಜನ ಮೂರನೇ ಶಕ್ತಿಗಾಗಿ ಕಾಯುತ್ತಿದ್ದಾರೆ. ಜೆಡಿಎಸ್ ಪರ ಒಲವು ಇದೆ. ಹೀಗಾಗಿ ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸಬೇಕು" ಎಂದು ಕರೆ ನೀಡಿದರು.