ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನ ಮಾಧ್ಯಮಕ್ಕೆ 'ಥ್ಯಾಂಕ್ಸ್' ಎಂದ ಎಚ್ಡಿಕೆ
ಬೆಂಗಳೂರು, ಜುಲೈ 23: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸರ್ಕಾರ ವಿಶ್ವಾಸಮತ ಪರೀಕ್ಷೆಯಲ್ಲಿಂದು ಬಹುಮತ ಕಳೆದುಕೊಂಡಿದೆ. "14 ತಿಂಗಳ ನನ್ನ ಮೈತ್ರಿ ಸರ್ಕಾರಕ್ಕೆ ಮಾಧ್ಯಮಮಿತ್ರ ಕೊಟ್ಟಿರುವಂಥ ಸಹಕಾರಕ್ಕೆ ಹೃದಯತುಂಬಿ ಅಭಿನಂದನೆಗಳು ತಮ್ಮೆಲ್ಲರಿಗೆ" ಎಂದು ಸದನದಿಂದ ಹೊರ ಬಂದ ಕುಮಾರಸ್ವಾಮಿ ಅವರು ಮಾಧ್ಯಮದವರಿಗೆ ಥ್ಯಾಂಕ್ಸ್ ಹೇಳಿದರು. ನಂತರ ರಾಜಭವನಕ್ಕೆ ತೆರಳಿ, ರಾಜ್ಯಪಾಲ ವಜುಭಾಯಿವಾಲ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಮೊದಲ ಬಾರಿಗೆ ಸಿಎಂ ಆಗಿದ್ದಾಗ 20 ತಿಂಗಳುಗಳ ಕಾಲ ಹಾಗೂ ಎರಡನೇ ಬಾರಿಗೆ 14 ತಿಂಗಳುಗಳ ಅಧಿಕಾರವನ್ನು ಅನುಭವಿಸಿದರು. ಎರಡು ಬಾರಿಯೂ ಸಮ್ಮಿಶ್ರ/ ಮೈತ್ರಿ ಸರ್ಕಾರದ ನೇತೃತ್ವವನ್ನು ಕುಮಾರಸ್ವಾಮಿ ಅವರು ವಹಿಸಿಕೊಂಡಿದ್ದು ವಿಶೇಷ. ಎರಡು ಬಾರಿಯೂ ಸಿಎಂ ಹುದ್ದೆ ಅವರನ್ನು ಹುಡುಕಿಕೊಂಡು ಬಂದಿದ್ದು ವಿಶೇಷ.
"ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲ ತಾಣಗಳಲ್ಲಿ ಬಳಸುವ ಪದಗಳು, ಟ್ರಾಲ್, ಮೀಮ್ ಗಳಿಂದ ಸಂಸ್ಕೃತಿ ಹಾಳಾಗುತ್ತಿದೆ. ನಾನು ಸಂತೋಷದಿಂದ ಅಧಿಕಾರ ತೊರೆಯಲು ಸಿದ್ಧನಿದ್ದೇನೆ, ಅವತ್ತು ನಿಮಗೆ ಅಧಿಕಾರ ಹಸ್ತಾಂತರ ಮಾಡಲಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದೇನೆ, ಆದರೆ, ವಚನಭ್ರಷ್ಟ ಎಂದು ಕರೆಯದಿರಿ" ಎಂದು ಬಿಜೆಪಿಗೆ ಹಾಗೂ ಮಾಧ್ಯಮದವರಿಗೆ ತಮ್ಮ ವಿದಾಯ ಭಾಷಣದ ವೇಳೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ನಿಲುವಳಿ ಬಗ್ಗೆ ಸುದೀರ್ಘ ಚರ್ಚೆ, ಸಾಂವಿಧಾನಿಕ ಹುದ್ದೆಗಳ ಅಧಿಕಾರ, ಜನಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಸುದೀರ್ಘ ಚರ್ಚೆಯನ್ನು ನಾಡಿನ ಜನತೆ ಕಾಣುವ ಯೋಗ ಸಿಕ್ಕಿತ್ತು.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ನೇತೃತ್ವದ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ವೋಟಿಂಗ್ ಹಾಕದೆ, ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಅವರು ಮಂಡಿಸಿದ ನಿರ್ಣಯವನ್ನು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಅಂಗೀಕರಿಸಿ, ಡಿವಿಷನ್ ಗೆ ಹಾಕಿದರು. ಧ್ವನಿಮತದ ಮೂಲಕ ನಡೆದ ಬಲಾಬಲ ಪರೀಕ್ಷೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲುಂಟಾಗಿದೆ.
ಅಂತಿಮ ಫಲಿತಾಂಶ:
ಒಟ್ಟು ಸದಸ್ಯರು : 204
ಮ್ಯಾಜಿಕ್ ನಂಬರ್ : 103
ಬಿಜೆಪಿ: 105
ಕಾಂಗ್ರೆಸ್ -ಜೆಡಿಎಸ್ ಮೈತ್ರಿ : 99
ಫಲಿತಾಂಶ : ಪ್ರಸ್ತಾಪದ ಪರ -ವಿರೋಧ ಸದಸ್ಯರ ತಲೆ ಎಣಿಕೆಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ಮಾಡಿದ್ದಾರೆ.
ಗೈರಾದವರು: 20












Click it and Unblock the Notifications