ಬಿಎಂಟಿಸಿ ಉಪಾಧ್ಯಕ್ಷರ ನೇಮಕ ರದ್ದು ಮಾಡಿದ ಸಿಎಂ
ಬೆಂಗಳೂರು, ನ.25 : ನಿಗಮ-ಮಂಡಳಿ ನೇಮಕಾತಿ ಪಟ್ಟಿ ಬಹಿರಂಗಗೊಂಡ ಬಳಿಕ ಕಾಂಗ್ರೆಸ್ನಲ್ಲಿ ಹುಟ್ಟಿಕೊಂಡ ಭಿನ್ನಮತಕ್ಕೆ ಶಮನಕ್ಕೆ ನಾಯಕರು ಮುಂದಾಗಿದ್ದಾರೆ. ಮಂಗಳವಾರ ಶಿವಕುಮಾರ್ ಶೆಟ್ಟಿ ಅವರ ನೇಮಕವನ್ನು ಅಮಾನತುಗೊಳಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸೋಮವಾರ ಬಿಡುಗಡೆಗೊಂಡ ಪಟ್ಟಿಯಲ್ಲಿ ಶಿವಕುಮಾರ್ ಶೆಟ್ಟಿ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿಯ) ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಆದರೆ, ಮಂಗಳವಾರ ಸಿಎಂ ಸಿದ್ದರಾಮಯ್ಯ ಈ ನೇಮಕವನ್ನು ಅಮಾನತು ಮಾಡಿ ಆದೇಶ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. [ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ]

ಈಗಾಗಲೇ ನಿಗಮ-ಮಂಡಳಿಗಳಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ನಿಗಲಿಲ್ಲ ಎಂದು ಸಚಿವರಾದ ಅಂಬರೀಶ್, ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಸಮಯದಲ್ಲೇ ನೇಮಕವನ್ನು ಅಮಾನತು ಮಾಡಿ ಸಿಎಂ ಆದೇಶ ನೀಡಿದ್ದಾರೆ. [ನಿಗಮ-ಮಂಡಳಿ ನೇಮಕ : ಅಂಬರೀಶ್ ಅಸಮಾಧಾನ]
ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಹಿ ಮಾಡಿದ ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿ ಬಿಡುಗಡೆಗೊಂಡಿತ್ತು. ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಆಕಾಂಕ್ಷಿಗಳಿರುವುದರಿಂದ, ಆಯ್ಕೆಯಾದವರಿಗೆ 18 ತಿಂಗಳು ಮಾತ್ರ ಅಧಿಕಾರದೊರೆಯಲಿದ್ದು, ನಂತರ ಉಳಿದ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಪ್ರತಿಕ್ರಿಯೆಗೆ ಸಿಎಂ ನಕಾರ : ನಿಗಮ-ಮಂಡಳಿ ನೇಮಕ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ವಸತಿ ಸಚಿವ ಅಂಬರೀಶ್ 'ನಾನು ಸಹ ಮೂರು ಬಾರಿ ಸಂಸದನಾಗಿದ್ದವನು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ನಿಗಮ- ಮಂಡಳಿ ನೇಮಕ ವಿಚಾರದಲ್ಲಿ ತರಾತುರಿ ಆಯ್ಕೆ ಮಾಡದೇ, ಕಾಂಗ್ರೆಸ್ ಪಕ್ಷವನ್ನು ಬೆಳೆಸುವಂಥವರಿಗೆ ಹಾಗೂ ಸ್ಥಳೀಯರಿಗೆ ಅವಕಾಶ ನೀಡಬೇಕು' ಎಂದು ಹೇಳಿದ್ದರು. ಆದರೆ, ಸಿಎಂ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.












Click it and Unblock the Notifications